ರಾಜ್ಯ ರಾಜಕೀಯದಲ್ಲಿ (Politics) ಚುನಾವಣೆಯದ್ದೇ (Election) ಮಾತು. ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿರುವ ಸಂಗ್ರಾಮದಲ್ಲಿ ಕ್ಷಣಕ್ಷಣಕ್ಕೂ ಸ್ವಾರಸ್ಯಕರ ವಿಚಾರ, ಘಟನೆ ಹೊರ ಬೀಳುತ್ತಿವೆ. ಕಾಂಗ್ರೆಸ್ (Congress), ಬಿಜೆಪಿ (BJP), ಜೆಡಿಎಸ್ (JDS) ಅಖಾಡದಲ್ಲಿ ಸಮಬಲ ಹೋರಾಟ ನಡೆಸುತ್ತಿದ್ದು, ಗೆಲ್ಲಲೇ ಬೇಕೆಂಬ ಗುರಿ ಹೊಂದಿವೆ. ಇತ್ತ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಮುಗಿದಿದೆ. ಚುನಾವಣೆಗೆ ಮೊದಲ ಹಂತವಾಗಿರುವ ನಾಮಪತ್ರ ಸಲ್ಲಿಕೆ ಅಭ್ಯರ್ಥಿಗಳಿಗೆ ತುಂಬಾ ವಿಶೇಷವಾಗಿರುತ್ತದೆ. ಕೆಲವರು ಜನಬಲ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರೆ, ಕೆಲವರೂ ಇನ್ನೂ ಬೇರೆ ಬೇರೆ ರೀತಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುಂದಾಗುತ್ತಾರೆ.
ವಿಶೇಷ ರೀತಿಯಲ್ಲಿ ನಾಮಪತ್ರ ಸಲ್ಲಿಕೆಗೆ ಹೋದ "ರಾಜಾಹುಲಿ"
ರಾಜಕೀಯದಲ್ಲಿ ರಾಜಾಹುಲಿ ಎಂದೇ ಹೆಸರು ಮಾಡಿರುವ, ಬಿಜೆಪಿ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪುತ್ರನ ನಾಮಪತ್ರ ಸಲ್ಲಿಕೆಗೆ ವಿಶೇಷವಾಗಿ ತೆರಳಿದ್ದರು.
ಅದೃಷ್ಟದ 'ಅಂಬಾಸಿಡಾರ್ʼ ಕಾರಿನಲ್ಲಿ ಬಿಎಸ್ವೈ ಸವಾರಿ
ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪುತ್ರ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಸಲು, ಬಿ.ಎಸ್.ಯಡಿಯೂರಪ್ಪ ತಮ್ಮ ಅದೃಷ್ಟದ 'ಅಂಬಾಸಿಡಾರ್' ಕಾರಿನಲ್ಲಿ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಶೆಟ್ಟರ್ ಜೊತೆ ಕಾಣಿಸಿಕೊಂಡ ಕಾರ್ಪೊರೇಟರ್ ಅರೆಸ್ಟ್, ಮಾಜಿ ಸಿಎಂ ಆಕ್ರೋಶ!
ಚುನಾವಣಾ ರಾಜಕಾರಣದಿಂದ ದೂರ ಇರುವ ಯಡಿಯೂರಪ್ಪನವರು ಸ್ವಕ್ಷೇತ್ರದಲ್ಲಿ ಪುತ್ರ ಬಿ.ವೈ. ವಿಜಯೇಂದ್ರ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಂತೆಯೇ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲೂ ಮಗನ ಜೊತೆ ಬೆಂಗಾವಲಾಗಿ ನಿಂತಿದ್ದರು.
ನಾಮಪತ್ರ ಸಲ್ಲಿಕೆಗೆ ಹೊರಟಾಗ ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದು, ಅವರ ಹಳೆಯ ಅಂಬಾಸಿಡರ್ ಕಾರು. ಯಡಿಯೂರಪ್ಪ ಅವರು 20 ಕಿ.ಮೀ ದೂರದಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಈ ಕಾರನ್ನು ಏರಿ ಪುತ್ರನಿಗೆ ಸಾಥ್ ನೀಡಲು ತೆರಳಿದರು. ಈ ಕಾರು ಮಾಜಿ ಮುಖ್ಯಮಂತ್ರಿಗೆ ಒಂದು ರೀತಿಯ ಲಕ್ಕಿ ಕಾರ್ ಕೂಡ ಹೌದಂತೆ. ಇನ್ನೂ ಸಹ ತಮ್ಮ ಫಾರ್ಮ್ಹೌಸ್ನಲ್ಲಿ ಈ ಕಾರು ಇರಿಸಿಕೊಂಡಿದ್ದಾರೆ.
1974ರಲ್ಲಿ ಅಂಬಾಸಿಡರ್ ಸಿಕೆಆರ್ 45 ಕಾರು ಖರೀದಿಸಿದ್ದ ಬಿಎಸ್ವೈ
ಬಿಳಿ ಬಣ್ಣದ ಅಂಬಾಸಿಡರ್ ಕಾರು 1970 ರ ದಶಕದಿಂದಲೂ ಯಡಿಯೂರಪ್ಪನವರ ಐಡೆಂಟಿಫಿಕೇಶನ್ ಮಾರ್ಕರ್ ಆಗಿದೆ. ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿ ಖರೀದಿಸಿದ್ದ ಅಂಬಾಸಿಡರ್ ಸಿಕೆಆರ್ 45 ಕಾರು ಬಿಜೆಪಿ ನಾಯಕರ ಪಾಲಿಗೆ ಇನ್ನೂ ವಿಶೇಷವಾಗಿದೆ.
ಬಿಎಸ್ವೈ ಅವರನ್ನು ಆಕರ್ಷಿಸಿದ ಕಾರ್ ನಂಬರ್
1974ರಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರಿಂದ ಈ ಕಾರನ್ನು ಖರೀದಿಸಿದ ಯಡಿಯೂರಪ್ಪ ಕರ್ನಾಟಕದಾದ್ಯಂತ ಇದೇ ಕಾರಿನಲ್ಲಿ ಪ್ರಯಾಣಿಸಿ, ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಈ ಕಾರನ್ನು ಖರೀದಿಸುವಾಗ ಕಾರಿನ ಸಂಖ್ಯೆ ಸಿಕೆಆರ್ 45 ಅವರನ್ನು ವಿಶೇಷವಾಗಿ ಆಕರ್ಷಿಸಿತಂತೆ. ಇದಾದ ಬಳಿಕ ಪ್ರಾಸಂಗಿಕವಾಗಿ, ಅವರ ಕುಟುಂಬವು ಅಂದಿನಿಂದ ಖರೀದಿಸಿದ ಎಲ್ಲಾ ವಾಹನಗಳು ಇದೇ ನಂಬರ್ ಅನ್ನು ಹೊಂದಿವೆ ಎನ್ನಲಾಗಿದೆ.
ಯಡಿಯೂರಪ್ಪ ಸಂಖ್ಯಾಶಾಸ್ತ್ರದಲ್ಲಿ ದೃಢ ನಂಬಿಕೆಯುಳ್ಳವರು ಮತ್ತು ಒಂಬತ್ತನ್ನು ತಮ್ಮ ಅದೃಷ್ಟ ಸಂಖ್ಯೆ ಎಂದು ಪರಿಗಣಿಸುತ್ತಾರೆ. ಅವರ ಜನ್ಮ ದಿನಾಂಕ, (ಫೆಬ್ರವರಿ) 27, ಆಗಿದ್ದು, ಕೂಡಿದರೆ ಒಂಬತ್ತು ಆಗುತ್ತದೆ. ಇನ್ನೂ ಈ ಕಾರ್ ಕೂಡ 45 ಸಂಖ್ಯೆ ಹೊಂದಿದ್ದು, ಅದನ್ನು ಕೂಡಿದರೂ ಒಂಬತ್ತು ಬರುತ್ತದೆ. ಹೀಗಾಗಿ ಈ ಕಾರನ್ನು ತಮ್ಮ ಅದೃಷ್ಟದ ಕಾರು ಎಂದು ಭಾವಿಸಿದ್ದಾರೆ ಮಾನ್ಯ ಮಾಜಿ ಮುಖ್ಯಮಂತ್ರಿಗಳು.
ಅಪ್ಪನ ಕಾರಿನ ಬಗ್ಗೆ ಪುತ್ರನ ಪೋಸ್ಟ್
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಮನೆಯಿಂದ ತಮ್ಮ ನೆಚ್ಚಿನ ಅಂಬಾಸಿಡರ್ ಸಿಕೆಆರ್ 45 ಕಾರಿನಲ್ಲಿ ಬಿಜೆಪಿ ಕಚೇರಿಗೆ ಪ್ರಯಾಣ ಬೆಳೆಸುವಾಗ, ಪುತ್ರ ಬಿ.ವೈ.ರಾಘವೇಂದ್ರ ವಿಡಿಯೋ ಮಾಡಿ, ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಈ ಕಾರಿನ ಸಂಖ್ಯೆ ಮೇಲೆ ಅಪ್ಪಾಜಿ ಅವರಿಗೆ ವಿಶೇಷವಾದ ನಂಬಿಕೆಯಿದೆ. ಈ ಕಾರಿನಲ್ಲಿ ಪ್ರವಾಸ ಮಾಡಿ, ರಾಜ್ಯಾದ್ಯಂತ ಪಕ್ಷ ಕಟ್ಟಿದ್ದಾರೆ' ಎಂದು ಬರೆದುಕೊಂಡಿರುವ ರಾಘವೇಂದ್ರ ಕಾರಿನ ಮೇಲಿನ ಅಪ್ಪನ ಪ್ರೀತಿಯ ಬಗ್ಗೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ