ಬೆಂಗಳೂರು: 15ನೇ ವಿಧಾನಸಭೆಯ ಕೊನೆಯ ಅಧಿವೇಶನದ (Karnataka Session) ಕೊನೆಯ ದಿನವಾದ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಅವರು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ (Gandhi Statue) ಬಳಿ ಮಾಲಾರ್ಪಣೆ ಮಾಡಿ ನಿರ್ಗಮಿಸಿದರು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸಹೊದ್ಯೋಗಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಬಿಎಸ್ವೈ ಮಾಧ್ಯಮಗಳೊಂದಿಗೆ ಮಾತನಾಡಿ, ಇಂದು ಅಂಬೇಡ್ಕರ್ ಹಾಗೂ ಗಾಂಧಿ ಪುತ್ತಳಿಗೆ ಮಾಲಾರ್ಪಣೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿ (BJP) ಮತ್ತೊಮ್ಮೆ ಬಹುಮತದಿಂದ ಆಯ್ಕೆ ಆಗಲಿ. ನಾನು ಚುನಾವಣೆಗೆ (Karnataka Election) ನಿಲ್ಲಲ್ಲ. ರಾಜ್ಯದ ಉದ್ದಗಲಕ್ಕೂ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದರು.
ರಾಷ್ಟ್ರ ನಾಯಕರ ನಿರ್ಧಾರದಂತೆ ಮುಂದಿನ ಚುನಾವಣೆ
ರಾಜಕೀಯದಿಂದ ನಿವೃತ್ತಿ ಹೊಂದುತ್ತಿಲ್ಲ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯನೋ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ನಾವು ರಾಷ್ಟ್ರ ನಾಯಕರ ನಿರ್ಧಾರದಂತೆ ಮುಂದಿನ ಚುನಾವಣೆಗೆ ಹೋಗುತ್ತೇವೆ. ಮುಂದಿನ ಚುನಾವಣೆ ನಮಗೇನು ಕಷ್ಟ ಆಗಲ್ಲ. ನಾವು ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದನಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆಯಾಗಿ ಬರಬೇಕು
ಸದನದಲ್ಲಿ ಸ್ಪೀಕರ್ ಉದ್ದೇಶಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು, ನೀವು ಸ್ಪೀಕರ್ ಆಗಿ ಉತ್ತಮ ಕೆಲಸ ಮಾಡಿದ್ದೀರಿ. ನೀವು ಮುಂದಿನ ಬಾರಿ ಅಲ್ಲಿ ಕುಳಿತುಕೊಳ್ಳದೆ ಸಚಿವರಾಗಿ ಕೆಲಸ ಮಾಡಬೇಕು ಎಂಬುವುದು ನನ್ನ ಆಸೆ. ಸದನಕ್ಕೆ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆಯಾಗಿ ಬರಬೇಕು. ಇದಕ್ಕೆ ಪುರುಷ ಸದಸ್ಯರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಶಿಕಾರಿಪುರದ ಕ್ಷೇತ್ರದ ಜನರ ಋಣವನ್ನು ತೀರುಸುವ ಕೆಲಸ ಮಾಡಿದ್ದೇನೆ, ಇದು ನಮ್ಮ ಕರ್ತವ್ಯವಾಗಿದೆ ಎಂದರು.
ಹುಟ್ಟುಹಬ್ಬದ ದಿನವೇ ಶಿವಮೊಗ್ಗಕ್ಕೆ ಬರ್ತಿನಿ ಅಂತ ಮೋದಿ ಸಹ ಹೇಳಿದ್ದಾರೆ
ಈ ತಿಂಗಳು 27ಕ್ಕೆ ನನಗೆ 80 ವರ್ಷ ತುಂಬುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಾರೆ. ಅಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ. ನಿಮ್ಮ ಹುಟ್ಟುಹಬ್ಬದ ದಿನವೇ ಬರ್ತಿನಿ ಅಂತ ಮೋದಿ ಸಹ ಹೇಳಿದ್ದಾರೆ. ಸಾಮಾನ್ಯ ಪುರಸಭೆ ಸದಸ್ಯನಾಗಿ ಆಯ್ಕೆಯಾಗಿ ಬಂದ ನಾನು ಮುಖ್ಯಮಂತ್ರಿಯೂ ಆಗಿದ್ದೇನೆ.
ಅಂದು ನಾನು ಸದನಕ್ಕೆ ಆಯ್ಕೆಯಾಗಿ ಬಂದಾಗ ಇಬ್ಬರೇ ಇದ್ದೆವು. ಎಂದು ನಾನು ಹಿಂದಿರುಗಿ ನೋಡುವ ಕೆಲಸ ಮಾಡಿಲ್ಲ. ಬಗರ್ ಹುಕುಂ ಜಾಮೀನನ್ನು ಸಾಗುವಳಿ ಮಾಡಿದ ರೈತರಿಗೆ ನ್ಯಾಯ ಕೊಡಿಸಲು ಸದನದಲ್ಲೇ ಧರಣಿ ಮಾಡಿದ್ದೇನೆ. ಅಂದು ಸಿಎಂ ಆಗಿದ್ದ ಕೃಷ್ಣ ಅವರು ಇದಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದರು.
ಇಷ್ಟು ಎತ್ತರಕ್ಕೆ ಬೆಳೆಯಲು ಆರ್ಎಸ್ಎಸ್ ಕಾರಣ
ನಾನು ಇವತ್ತು ಈ ಎತ್ತಕ್ಕೆ ಬೆಳಯಲು ಆರ್ಎಸ್ಎಸ್ ಕಾರಣ. ಅಲ್ಲಿನ ತರಬೇತಿ, ಅವಕಾಶ ನನಗೆ ಈ ಸ್ಥಾನಮಾನ ಸಿಗಲು ಕಾರಣವಾಯ್ತು. ಜೀವನದಲ್ಲಿ ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ಇವತ್ತು ನಮಗೆ ಎಲ್ಲರಿಗೂ ಆದರ್ಶ ದೇವೇಗೌಡರು, ಇದು ಸಣ್ಣ ವಿಚಾರ ಅಲ್ಲ. ಏಕೆಂದರೆ ಈ ವಯಸ್ಸಿನಲ್ಲೂ ಕೂಡ ಅವರು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇಷ್ಟು ವರ್ಷ ನಾನು ಸದನದಲ್ಲಿ ಇರಲು ಕಾರಣ ನನ್ನ ಕ್ಷೇತ್ರದ ಜನತೆ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.
ಇದನ್ನೂ ಓದಿ: Pratap Simha: 'ನನ್ನ ದೇವರು ಪ್ರಧಾನಿ ಮೋದಿ, ನಾನು ಸೇವಕ' -ಸಂಸದ ಪ್ರತಾಪ್ ಸಿಂಹ
ನನಗೆ ಈ ಸಂದರ್ಭದಲ್ಲಿ ಏನು ಮಾತನಾಡಬೇಕು ಅಂತ ತಿಳಿಯುತ್ತಿಲ್ಲ. ಸಿಎಂ ಬೊಮ್ಮಾಯಿ ಅವರು ಕೂಡ ಇವತ್ತು ರಾಜ್ಯದ ಜನತೆ ಮರೆಯಲು ಸಾಧ್ಯವಿಲ್ಲ. ಅವರು ಪ.ಜಾತಿ/ಪಂಗಡದ ಜನರಿಗೆ ಹಲವು ಕೊಡುಗೆ ನೀಡಿದ್ದಾರೆ. ಇದರ ಪ್ರತಿಫಲ ಮುಂದೆ ಸಿಗುತ್ತೆ. ಇದು ನನ್ನ ಕೊನೆಯ ಅಧಿವೇಶನ ಅಂತ ಈಗಾಗಲೇ ಹೇಳಿದ್ದೇನೆ. ಆದರೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಇಲ್ಲಿ ಇರುವ ನಾಯಕರು ವಿಚಲಿತರಾಗುವ ಅಗತ್ಯವಿಲ್ಲ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಅನ್ನೋದು ಸತ್ಯ ಎಂದು ಪದೇ ಪದೇ ಹೇಳುತ್ತಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ