ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (KSDL) ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆ ಲಂಚ ಪ್ರಕರಣದ ಎ-1 ಆರೋಪಿಯಾಗಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ (BJP MLA) ಕೆ ಮಾಡಾಳ್ ವಿರೂಪಾಕ್ಷಪ್ಪ (Madalu Virupakshappa) ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ರಾಜ್ಯ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಲೋಕಾಯುಕ್ತ ಟ್ರ್ಯಾಪ್ ಪ್ರಕರಣ (Lokayukta) ಹಿನ್ನೆಲೆ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕೇಂದ್ರ ಶಿಸ್ತು ಸಮಿತಿ ರಾಜ್ಯ ಘಟಕಕ್ಕೆ ಉಚ್ಛಾಟನೆ ಮಾಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಘಟಕ ಶಾಸಕರನ್ನು ಉಚ್ಛಾಟನೆ (MLA Expulsion) ಮಾಡಿ ಆದೇಶ ಹೊರಡಿಸಿದೆ. ಇದರ ನಡುವೆಯೇ ಜಾಮೀನು ಸಿಗುತ್ತಿದ್ದಂತೆ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಮಾಡಾಳ್, ಮನೆಯಲ್ಲಿ ಸಿಕ್ಕಿರುವ ಹಣ ಕ್ರಷರ್ ಹಾಗೂ ಅಡಿಕೆ ತೋಟದ ಹಣ. ಲೋಕಾಯುಕ್ತಕ್ಕೆ ಹಣದ ಎಲ್ಲಾ ಲೆಕ್ಕವನ್ನು ಕೊಡುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಕಚೇರಿಯಲ್ಲಿ ಯಾರೋ ಇಬ್ಬರು ಹಣ ತಂದಿಟ್ಟು ಓಡಿ ಹೋದರು. ನನ್ನ ಮಗ ಸುಮ್ಮನೆ ಕುಳಿತಿದ್ದ ಅಂತಲೂ ಹೊಸ ಕಥೆ ಹೇಳಿದ್ದಾರೆ.
ಲೋಕಾಯುಕ್ತಕ್ಕೆ ಸಂಪೂರ್ಣ ಲೆಕ್ಕ ಕೊಡುತ್ತೇನೆ
ಜಾಮೀನು ಸಿಕ್ಕ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ತಾಲೂಕನ್ನು ಅಡಿಕೆ ನಾಡು ಚನ್ನಗಿರಿ ಅಂತ ಹೇಳುತ್ತಾರೆ. ಅಡಿಕೆ ನಾಡಿನಲ್ಲಿ ಸಾಮಾನ್ಯ ತೋಟದ ಮಾಲೀಕರನ ಮನೆಯಲ್ಲಿ ಕಡಿಮೆ ಎಂದರೂ ಎರಡರಿಂದ ಮೂರು ಕೋಟಿ ರೂಪಾಯಿ ಹಣ ಇರುತ್ತೆ.
ನಮ್ಮ ಮನೆಯಲ್ಲಿ 125 ಎಕರೆ ಅಡಿಕೆ ತೋಟ ಇದೆ, 2 ಕ್ರಷರ್ಗಳಿದೆ. ಇದರೊಂದಿಗೆ ಎರಡು ಅಡಕೆ ಮಂಡಿಯನ್ನು ಹೊಂದಿದ್ದೇವೆ. ಬೇರೆ ಬೇರೆ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಈಗ ಸಿಕ್ಕಿರುವ ಹಣಕ್ಕೆ ಸೂಕ್ತ ದಾಖಲೆ ಕೊಟ್ಟು ಹಣ ವಾಪಸ್ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಡಾಳು ವೀರೂಪಾಕ್ಷ ಅವರು, ಇದರಲ್ಲಿ ತನ್ನದೇನು ತಪ್ಪಿಲ್ಲ. ಸರ್ಕಾರ ಆಡಳಿತ ಪಕ್ಷ ಶಾಸಕರು ಅಂತ ಕೂಡ ನೋಡದೆ ದೂರು ಬರುತ್ತಿದ್ದಂತೆ ದಾಳಿ ಮಾಡಿಸಿದೆ. ಆಡಳಿತ ರೂಢ ಶಾಸಕರ ಮೇಲೆ ಅವರದ್ದೇ ಸರ್ಕಾರ ದಾಳಿ ನಡೆಸಿರುವುದು ಇತಿಹಾಸದಲ್ಲೇ ಮೊದಲು ಅಂತ ಹೇಳಬಹುದು.
ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇತ್ತು, ಈಗ ನಮ್ಮ ಸರ್ಕಾರ ನಾವು ಆರೋಪ ಮಾಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಆದರೆ ನಮ್ಮ ಸರ್ಕಾರ ಯಾರೇ ಆದರೂ ನಿಷ್ಪಕ್ಷಪಾತವಾಗಿ ದೂರು ಬಂದ ಕೂಡಲೇ ಕ್ರಮಕೈಗೊಂಡಿದೆ ಎಂದು ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ: Madal Virupakshappa: 6 ದಿನಗಳಿಂದ ತಲೆ ಮರೆಸಿಕೊಂಡಿದ್ದ ಬಿಜೆಪಿ ಶಾಸಕನಿಗೆ ಮಧ್ಯಂತರ ಜಾಮೀನು ಜಾರಿ!
ಏನಿದು ಪ್ರಕರಣ?
ಶಾಸಕ ಕೆ ಮಾಡಾಳು ವಿರೂಪಾಕ್ಷಪ್ಪ ಪುತ್ರ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಇನ್ನು ವಿರೂಪಾಕ್ಷಪ್ಪ ಕೆಎಸ್ಡಿಎಲ್ನ ಅಧ್ಯಕ್ಷರೆಂಬುವುದು ಉಲ್ಲೇಖನೀಯ.
ಎಂಟು ಕೋಟಿಗೂ ಅಧಿಕ ನಗದು ಪತ್ತೆ
ಇದಾದ ಬಳಿಕ ನಡೆದಿದ್ದ ದಾಳಿಯಲ್ಲಿ ಕೆಎಸ್ಡಿಎಲ್ ಕಚೇರಿಯಲ್ಲಿ ಸುಮಾರು 2 ಕೋಟಿ ರೂ. ಹಾಗೂ ಪ್ರಶಾಂತ್ ಮನೆಯಿಂದ 6 ಕೋಟಿ ರೂ. ಹೀಗೆ ಒಟ್ಟು 8.23 ಕೋಟಿ ರೂಪಾಯಿ ನಗದು, ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಜಮೀನುಗಳಲ್ಲಿ ಹಣ ಹೂಡಿಕೆ ಮಾಡಿದ್ದ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ