ಹುಬ್ಬಳ್ಳಿ: ನನಗೆ ಟಿಕೆಟ್ ತಪ್ಪಲು ಬಿಎಲ್ ಸಂತೋಷ್ (BL Santosh) ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಟಿಕೆಟ್ ತಪ್ಪಿಸಲಾಗಿದೆ. ಬಿ.ಎಲ್.ಸಂತೋಷ್ ಜೊತೆಯಲ್ಲಿ ಹಲವರು ಕೈ ಜೋಡಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಅಂತಾರೆ. ಆದ್ರೆ ಇಲ್ಲ ಒಬ್ಬನೇ ವ್ಯಕ್ತಿ ಮುಖ್ಯವಾಗಿದ್ದಾನೆ. ಬಿಜೆಪಿ ಕಚೇರಿಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾನೆ. ಯಡಿಯೂರಪ್ಪ ಸಿಎಂ ಆದ ಮೇಲೆ ಆತನನ್ನ ಕಛೇರಿಯೊಳಗೆ ಬಿಟ್ಟುಕೊಂಡಿದ್ದಾನೆ. ಪ್ರತಿ ಜಿಲ್ಲೆಯಲ್ಲಿಯೂ ಗುಂಪುಗಾರಿಕೆ ಮಾಡಿದ್ದಾನೆ. ರಾಮದಾಸ್ (MLA Ramdas) ಸಂತೋಷ್ ಆಪ್ತನಲ್ಲ. ಹಾಗಾಗಿ ಆತನಿಗೆ ಟಿಕೆಟ್ ಸಿಗಲಿಲ್ಲ. ಶ್ರೀವತ್ಸ ಅನ್ನೋರಿಗೆ ಟಿಕೆಟ್ ಕೊಟ್ಟರು ಎಂದು ಬಿ.ಎಲ್.ಸಂತೋಷ್ ವಿರುದ್ಧ ಶೆಟ್ಟರ್ ಹರಿಹಾಯ್ದರು.
ಇಂದು ಹುಬ್ಬಳ್ಳಿಯ ನಿವಾಸದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ನಿಮಗೆ ಟಿಕೆಟ್ ಇಲ್ಲ ಅಂತ ಸರಳವಾಗಿ ಹೇಳಿ ಬಿಟ್ಟರು. ಜಗದೀಶ್ ಶೆಟ್ಟರ್ ಯಾರು ಅಂತ ಪಕ್ಷಕ್ಕೆ ಗೊತ್ತಾಗಿಲ್ಲ. ಟಿಕೆಟ್ ಹಂಚಿಕೆಗೂ ಮುನ್ನ ಒಂದು ಮಾತು ಸಹ ಹೇಳಿಲಿಲ್ಲ. ಯಾವುದೇ ಕಾರಣ ಇಲ್ಲದೇ ಟಿಕೆಟ್ ನೀಡಲು ನಿರಾಕರಿಸಿದ್ದಕ್ಕೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಉಸಿರುಗಟ್ಟುವ ವಾತಾವರಣ
ಪದೇ ಪದೇ ಅಪಮಾನ ವಿಚಾರವನ್ನು ಸಂಬಂಧಪಟ್ಟವರಿಗೆ ಹೇಳಿದೆ. ಆದರೆ ಅದನ್ನು ಸರಿಪಡಿಸಲಿಲ್ಲ. ಜೋಶಿ ಸಹ ಬಿ.ಎಲ್.ಸಂತೋಷ್ ಆಪ್ತರು. ಹಾಗಂತ ಅವರೂ ಷಡ್ಯಂತ್ರ ಮಾಡಿದ್ದಾರೆ ಅಂತ ಹೇಳಲ್ಲ. ಎಲ್ಲಾ ಜಿಲ್ಲೆಗಳಲ್ಲಿಯೂ ಉಸಿರುಗಟ್ಟುವ ವಾತಾವರಣವಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಯಡಿಯೂರಪ್ಪ ಅಸಹಾಯಕ
ಸುರೇಶ್ ಕುಮಾರ್ ಅವರಿಗೆ ಟಿಕೆಟ್ ಕೊಡಲಾಗಿದ್ದು, ಅವರು ಗೆದ್ದು ಬರಲಿ. ವಿಶ್ವೇಶ್ವರ ಹೆಗಡೆ ಕಾಗೇರಿಗೂ ಟಿಕೆಟ್ ತಪ್ಪಿಸುವ ಕೆಲಸ ನಡೆಯಿತು. ಆದ್ರೆ ಕೊನೇ ಘಳಿಗೆಯಲ್ಲಿ ಟಿಕೆಟ್ ನೀಡಲಾಗಿದೆ.
ಮಾನಸ ಪುತ್ರನ ಮೇಲಿನ ಪ್ರೀತಿ ವಿಶ್ವಾಸದ ಒಂದು ಪರ್ಸೆಂಟೇಜ್ ನನಗೆ ಕೊಡಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರೋದು ನನ್ನ ಗುರಿ. ಬಿಜೆಪಿಯಲ್ಲಿ ಯಡಿಯೂರಪ್ಪ ಸಹ ಅಸಹಾಯಕರಾಗಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ