ಹಾವೇರಿ/ವಿಜಯಪುರ: ಸಿಂದಗಿ (Sindagi By Election) ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಮಲ ಅರಳಿದೆ. 22 ಸುತ್ತುಗಳ ಮತ ಎಣಿಕೆ ಅಂತ್ಯವಾಗಿದ್ದು, ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ, ಬಿಜೆಪಿ ರಮೇಶ್ ಭೂಸನೂರು (Ramesg bhusanuru) ಜಯದ ಹಾರವನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,680 ಮತ ಪಡೆದ್ರೆ, ಜೆಡಿಎಸ್ ನ ನಾಜೀಯಾ ಅಂಗಡಿ 4,353 ಮತ ಪಡೆದ್ರೆ, ಗೆದ್ದ ಅಭ್ಯರ್ಥಿ ರಮೇಶ್ ಭೂಸನೂರು 93,865 ಮತ ಪಡೆದಿದ್ದಾರೆ. ಬರೋಬ್ಬರಿ 31,185 ಮತಗಳ ಭಾರೀ ಅಂತರದಲ್ಲಿ ಗೆದ್ದಿದ್ದಾರೆ. ಮತ ಎಣಿಕೆ ಸುತ್ತುಗಳ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹಾನಗಲ್ (Hangal) ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮತ್ತು ಸಿಂದಗಿಯಲ್ಲಿ ರಮೇಶ್ ಭೂಸನೂರು ನಿರಂತರವಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ.
ರಮೇಶ್ ಭೂಸನೂರು ಮೊದಲ ಪ್ರತಿಕ್ರಿಯೆ
ಗೆಲುವುನ ಬಳಿಕ ವಿಕ್ಟರಿ ಸಿಂಬಲ್ ತೋರಿಸಿರುವ ರಮೇಶ್ ಭೂಸನೂರು, ಚುನಾವಣೆಯನ್ನು ಗೆಲ್ಲುತ್ತೇನೆ ಎಂದು ಮೊದಲೇ ಹೇಳಿದ್ದೆ. ಪಕ್ಷದ ಅಧ್ಯಕ್ಷರು, ಸಚಿವರು ಸೇರಿದಂತೆ ಎಲ್ಲ ಕಾರ್ಯರ್ತರು ನಿರಂತರವಾಗಿ ಪ್ರಚಾರ ನಡೆಸಿದರು. ಕ್ಷೇತ್ರದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಜನರು ನನ್ನನ್ನು ಗೆಲ್ಲಿಸುವ ಪ್ರಾಮಾಣಿಕತೆಯಿಂದ ಮತ ನೀಡಿದ್ದಾರೆ. ನನ್ನ ಮೂವತ್ತು ವರುಷದ ರಾಜಕೀಯ ಜೀವನ ಮತ್ತು ಸರಕಾರದ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಮತ ನೀಡಿದ್ದಾರೆ.
ಇದನ್ನೂ ಓದಿ: Karnataka By Election Result 2021: ಇಂದು ಸಿಂದಗಿ & ಹಾನಗಲ್ ಉಪ ಚುನಾವಣೆ ಫಲಿತಾಂಶ; ಗೆಲುವಿನ ಲೆಕ್ಕಾಚಾರ ಹೀಗಿದೆ
ಕ್ಷೇತ್ರದತ್ತ ಹೊರಟ ಶ್ರೀನಿವಾಸ್ ಮಾನೆ
ಹಾವೇರಿಯಲ್ಲಿ 11 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಶ್ರೀನಿವಾಸ್ ಮಾನೆ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಮುನ್ನಡೆ ಅಂತರ ಹೆಚ್ಚಾಗುತ್ತಿದ್ದಂತೆ ಶ್ರೀನಿವಾಸ್ ಮಾನೆ ಹಾನಗಲ್ ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಸೋತಿದ್ದರು. ಸೋತರೂ ಕ್ಷೇತ್ರ ಬಿಡದ ಶ್ರೀನಿವಾಸ್ ಮಾನೆ ಪಕ್ಷದ ಚಟುವಟಿಕೆ ಮತ್ತು ಕೋವಿಡ್ ಸಂದರ್ಭದಲ್ಲಿ ಯುವಕರ ಪಡೆ ರಚಿಸಿಕೊಂಡು ಜನರ ಸಹಾಯಕ್ಕೆ ಮುಂದಾಗಿದ್ದರು. ಇತ್ತ ಸಿ.ಎಂ.ಉದಾಸಿ ಹಾನಗಲ್ ಕ್ಷೇತ್ರದಿಂದಲೇ ಸಂಪರ್ಕ ಕಳೆದುಕೊಂಡಿದ್ದರು.
ಎರಡೂ ಕ್ಷೇತ್ರದ ಅಭ್ಯರ್ಥಿಗಳು
ಬಿಜೆಪಿ ಸಿಂದಗಿಯಿಂದ ರಮೇಶ ಭೂಸನೂರ ಅವರನ್ನು ಕಣಕ್ಕಿಳಿಸಿದ್ದರೆ, ಹಾನಗಲ್ ಕ್ಷೇತ್ರದಿಂದ ಶಿವರಾಜ್ ಸಜ್ಜನರ್ ಅಭ್ಯರ್ಥಿಯಾಗಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಸಿಂದಗಿಯಿಂದ ಎಂಸಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿಯನ್ನು ಕಣಕ್ಕಿಳಿಸಿದ್ದರೆ, ಮಾಜಿ ಎಂಎಲ್ ಸಿ ಶ್ರೀನಿವಾಸ ಮಾನೆ ಹಾನಗಲ್ ನಿಂದ ಸ್ಪರ್ಧಿಸಿದ್ದಾರೆ. ಸಿಂದಗಿಯಿಂದ 33 ವರ್ಷದ ಸ್ನಾತಕೋತ್ತರ ಪದವೀಧರೆ ನಾಜಿಯಾ ಶಕೀಲ್ ಅಹ್ಮದ್ ಅಂಗಡಿ ಮತ್ತು ಹಾನಗಲ್ ನಿಂದ 35 ವರ್ಷದ ಬಿಇ, ಎಂಟೆಕ್ ಪದವೀಧರ ನಿಯಾಜ್ ಶೇಖ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರ ಸಂಬಂಧ ಜೆಡಿಎಸ್-ಕಾಂಗ್ರೆಸ್ ಮಧ್ಯೆ ಚುನಾವಣಾ ಪ್ರಚಾರದ ವೇಳೆ ವಾಕ್ಸಮರವೇ ನಡೆದಿತ್ತು.
ಇದನ್ನೂ ಓದಿ: Karnataka Weather Today: ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ? ನ.5ಕ್ಕೆ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
3 ಪಕ್ಷಗಳಿಗೆ ಈ ಫಲಿತಾಂಶ ಏಕೆ ಮುಖ್ಯ?
ಈ ವರ್ಷ ಜುಲೈನಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಈ ಉಪಚುನಾವಣೆಯು ಚುನಾವಣಾ ಸವಾಲಾಗಿ ಪರಿಗಣಿಸಲ್ಪಟ್ಟಿದೆ. ಸಿಎಂ ಅವರ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಕದ ಕ್ಷೇತ್ರವಾಗಿರುವುದರಿಂದ ಹಾನಗಲನ್ನು ಉಳಿಸಿಕೊಳ್ಳುವುದು ಅವರಿಗೆ ಹೆಚ್ಚು ಮುಖ್ಯವಾಗಿದೆ. ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ, ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ತನ್ನ ಸಿದ್ಧತೆಗಳಿಗೆ ವೇಗವನ್ನು ನೀಡಲು ಬಯಸುತ್ತಿದೆ. ಆದರೆ ಜೆಡಿಎಸ್ (ಎಸ್) ಸಿಂದಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಮತ್ತು ಆ ಮೂಲಕ ತಾನು ಇನ್ನೂ ಭದ್ರ ನೆಲೆಯನ್ನು ಹೊಂದಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ