ರಾಮನಗರ (ಡಿಸೆಂಬರ್. 27): ರಾಮನಗರ ಜಿಲ್ಲೆ ಚನ್ನಪಟ್ಟಣದ ಸ್ವಗ್ರಾಮ ಚಕ್ಕೆರೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್ಸಿ ಸಿ ಪಿ ಯೋಗೇಶ್ವರ್, ಈ ಬಾರಿ ಚನ್ನಪಟ್ಟಣದಲ್ಲಿ 25 ಕ್ಕೂ ಹೆಚ್ಚು ಪಂಚಾಯಿತಿ ಬಿಜೆಪಿ ಪಾಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟು 32 ಗ್ರಾ.ಪಂ ಇರುವ ಕ್ಷೇತ್ರ ಚನ್ನಪಟ್ಟಣ. ಈ ಚುನಾವಣೆ ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗೆ ದಿಕ್ಸೂಚಿಯಾಗಲಿದೆ. ಈ ಚುನಾವಣೆಯಲ್ಲಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಕಾರ್ಯವೈಖರಿ ಬಗ್ಗೆ ಗೊತ್ತಾಗಲಿದೆ ಎಂದು ಎಂಎಲ್ಸಿ ಸಿ ಪಿ ಯೋಗೇಶ್ವರ್ ಅಭಿಪ್ರಾಯ ಪಟ್ಟರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ಚಾಮಿ ಚನ್ನಪಟ್ಟಣ ಕ್ಷೇತ್ರದ ಶಾಸಕರಾದ ಬಳಿಕ ಇದು ಸ್ಥಳೀಯವಾಗಿ ನಡೆಯುತ್ತಿರುವ ಮೊದಲ ಚುನಾವಣೆ. ಇನ್ನು ಕುಮಾರಸ್ವಾಮಿ ವಿರುದ್ಧ ಸೋತ ಬಳಿಕ ಸಿ.ಪಿ.ಯೋಗೇಶ್ವರ್ ಗೂ ಸಹ ಇದು ಮೊದಲ ಚುನಾವಣೆ. ಹಾಗಾಗಿ ಇಬ್ಬರು ನಾಯಕರು ಸಹ ಈ ಗ್ರಾಮ ಪಂಚಾಯತ್ ಚುನಾವಣೆಯನ್ನ ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಬರುವ ಫಲಿತಾಂಶ ಮುಂದಿನ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನ ನಿರ್ಧಾರ ಮಾಡಲಿವೆ.
ಯೋಗೇಶ್ವರ್ ನ ನಿರ್ಲಕ್ಷ್ಯ ಮಾಡಿದರೆ ಹೆಚ್ಡಿಕೆಗೆ ಕಷ್ಟ
ಸಿ.ಪಿ.ಯೋಗೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಯೋಗೇಶ್ವರ್ ರವರ ರಾಜಕೀಯ ಹಿಡಿತ ತಾಲೂಕಿನಲ್ಲಿ ಈಗಲೂ ಇದೇ. ಹಾಗಾಗಿ ಕುಮಾರಸ್ವಾಮಿಯವರು ಸಹ ಈ ಚುನಾವಣೆಯನ್ನ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ವಹಿಸದೇ ಸ್ವತಃ ತಾವೇ ಫೀಲ್ಡ್ ಗೆ ಇಳಿದು ಚುನಾವಣಾ ರಣತಂತ್ರ ರೂಪಿಸಿದ್ದಾರೆ. ಚನ್ನಪಟ್ಟಣದ ಖಾಸಗಿ ಕಲ್ಯಾಣಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಆರ್ಥಿಕವಾಗಿಯೂ ಸಹಾಯ ಮಾಡಿದ್ದಾರೆ. ಯೋಗೇಶ್ವರ್ ಸಹ ತಮ್ಮ ಬೆಂಬಲಿಗರಿಗೆ ಆರ್ಥಿಕವಾಗಿ ನೆರವಾಗಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ - ಬಿಜೆಪಿ ಎದುರು ಕಾಂಗ್ರೆಸ್ ಮಂಕು
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಚನ್ನಪಟ್ಟಣ ಪಕ್ಕದ ಕನಕಪುರದವರು. ಆದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮಂಕಾಗಿದೆ. ಚನ್ನಪಟ್ಟಣದ 32 ಗ್ರಾಮಪಂಚಾಯಿತಿಯಲ್ಲಿ ಬಹುತೇಕ ಜೆಡಿಎಸ್-ಬಿಜೆಪಿಯವರು ಫೈಟ್ ಮಾಡುತ್ತಿದ್ದಾರೆ. ಆದರೆ ಹಲವು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಇಲ್ಲದಂತಾಗಿದೆ.
ಇದನ್ನೂ ಓದಿ : ವಿಜಯಪುರದಲ್ಲಿ ಫುಡ್ ಪಾರ್ಕ್ ನಿರ್ಮಿಸಲು ಆಗ್ರಹ : ಕೃಷಿ ಸಚಿವರಿಗೆ ರೈತರು, ಉದ್ಯಮಿಗಳ ತಂಡದಿಂದ ಮನವಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಗ್ರಾಮಪಂಚಾಯಿತಿ ಚುನಾವಣೆ ಬಹಳ ಮಹತ್ವ ಪಡೆದಿದೆ. ಕ್ಷೇತ್ರದ ಶಾಸಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಗೆ ರಾಜಕೀಯವಾಗಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ