ಬೆಂಗಳೂರು(ಅಕ್ಟೋಬರ್. 18): ಕನಕಪುರದ ಬಂಡೆಯನ್ನು ಪುಡಿ ಮಾಡುವ ಡೈನಮೈಟ್ ಗಳು ನಮ್ಮ ಬಳಿ ಇವೆ. ಗೂಂಡಾಗಿರಿಯ ರಾಜಕಾರಣವನ್ನು ಆರ್.ಆರ್.ನಗರ ಕ್ಷೇತ್ರದ ಜನರು ಒಪ್ಪಲ್ಲ. ಅಭಿವೃದ್ಧಿ ಪರವಾದ ಮತದಾರರು, ಅಭಿವೃದ್ಧಿ ಗುರುತಿಸಿ ಅಭಿವೃದ್ಧಿ ರಾಜಕಾರಣ ಬೆಂಬಲಿಸಬೇಕು, ಗೂಂಡಾಗಿರಿ ರಾಜಕಾರಣವನ್ನು ನಿಲ್ಲಿಸಬೇಕು ಎಂದು ಜನ ಮತ ಚಲಾಯಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಕನಕಪುರದಿಂದ ಎಲ್ಲೆಲ್ಲಿಂದಲೋ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ಮಾಡುತ್ತೇವೆ ಎಂದರೆ, ವಸೂಲಾತಿಗಳನ್ನು ಮಾಡುತ್ತೇವೆ ಎಂದರೆ ಇಲ್ಲಿಯ ಜನ ನಂಬುವುದಿಲ್ಲ, ಬಂಡೆ ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದೀರಿ ನಿಮ್ಮ ಬಳಿ ಬಂಡೆ ಇರಬಹುದು ಆದರೆ, ನಮ್ಮ ಬಳಿ ಕಾಂಗ್ರೆಸ್ನಿಂದ ಬಂದಂತಹ ಡೈನಮೈಟ್ ಗಳು ಇದ್ದಾರೆ. ಬಂದಿರುವ ಒಬ್ಬೊಬ್ಬರು ಒಂದೊಂದು ಡೈನಮೈಟ್ ಗಳಾಗಿದ್ದಾರೆ. ಈಗ ಬಂಡೆಯನ್ನು ಪುಡಿಮಾಡುವ ಡೈನಮಟ್ ಗಳು ನಮ್ಮ ಬಳಿ ಇದೆ. ನಿಮ್ಮ ಕಾಂಗ್ರೆಸ್ ಮನೆ ಖಾಲಿಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು.
ನಮಗೆ ಯಾವ ಬಂಡೆಯೂ ಇಲ್ಲಿ ಲೆಕ್ಕಕ್ಕಿಲ್ಲ ನಮ್ಮ ಸಾಮ್ರಾಟ ಹಾಗೂ ಅರವಿಂದ ಲಿಂಬಾವಳಿ ಚುನಾವಣಾ ಕಾರ್ಯ ನಿರ್ವಹಿಸಿದ್ದಾರೆ. ಇಲ್ಲಿ ನಮ್ಮ ಗೆಲುವು ಶತಃಸಿದ್ಧ. ಇವರಿಬ್ಬರು ಜೋಡೆತ್ತುಗಳಾಗಿದ್ದಾರೆ. ನಮ್ಮ ಜೋಡೆತ್ತುಗಳು ಓಡಲಿದೆ. ಮುನಿರತ್ನ ಧ್ವಜ ಹಾರಿಸಲಿದ್ದಾರೆ. ಬಿಜೆಪಿ ಇಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಆದರೆ, ತಿಹಾರ್ ಜೈಲಿಗೆ ಹೋಗಿ ನೀವು ಇತಿಹಾಸ ಓದಿದಿರಾ ಅಥವಾ ಇತಿಹಾಸವನ್ನು ಬರೆದಿರಾ? ಜೈಲಿಗೆ ಹೋದರೆ ಮೆರವಣಿಗೆ ಬಂದರೆ ಮೆರವಣಿಗೆಯಲ್ಲಿ, ಕುಳಿತರೆ ಮೆರವಣಿಗೆ, ನಿಂತರೆ ಮೆರವಣಿಗೆ, ಜನ ನಿಮ್ಮದೆಲ್ಲ ನೋಡಿದ್ದಾರೆ. ನಿಮ್ಮ ಮೆರವಣಿಗೆ ಇನ್ನು ಸಾಕು ನೀವು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಹೇಳಲು ಜನ ಹೇಳಲು ಸಿದ್ಧರಾಗಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತ ನೋಡಿ ಮತಹಾಕಲಿದ್ದಾರೆ ಇಲ್ಲಿ ನಮ್ಮ ಗೆಲುವು ಖಚಿತ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಜೈಲಿಗೆ ಹೋಗಿ ಬಂದವರನ್ನು ಬಂಡೆ ಎನ್ನುತ್ತಾರೆ, ಬಂಡೆ ಅಲ್ಲ ಭಂಡತನ ಅದು, ಜೈಲಿಗೆ ಹೋಗಿ ಬಂದು ಮೆರವಣಿಗೆ ಮಾಡಿಕೊಳ್ಳುವುದು ಭಂಡತನ ಅಲ್ಲದೇ ಬೇರೇನು? ನೀವೇನು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿಗೆ ಹೋಗಿದ್ರಾ? ಹಿಂದುತ್ವಕ್ಕಾಗಿ ಜೈಲಿಗೆ ಹೋಗಿದ್ರಾ.!?ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋಗಿದ್ದಿರಿ. ತಲೆ ತಗ್ಗಿಸುವ ವಿಚಾರಕ್ಕೆ ಸಂಭ್ರಮ ಎಂದು ಯಾರೂ ಭಾವಿಸಲ್ಲ. ಆದರೆ, ಕಾಂಗ್ರೆಸ್ ನ ಕೆಲವರು ಅದನ್ನು ಸಂಭ್ರಮ ಎಂದು ಭಾವಿಸಿದರು ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ :
ಮುಂದಿನ ವರ್ಷ ದೇಶದ ಆರ್ಥಿಕತೆ ಸಹಜ ಸ್ಥಿತಿಗೆ : ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ
ರಾಜಕೀಯಕ್ಕಾಗಿ ಜಾತಿ ರಾಜಕೀಯ ಮಾಡಲ್ಲ ನಾನು ಒಕ್ಕಲಿಗ ಅಲ್ಲವಾ. ಅಶೋಕಣ್ಣ ಒಕ್ಕಲಿಗ ಅಲ್ಲವಾ.? ನಾಯಕರನ್ನ ಮುಗಿಸಿ ರಾಜಕಾರಣ ನಾವು ಮಾಡಲ್ಲ ಹಾಗಿದ್ದರೆ ಸುಧಾಕರ್, ಯೋಗೇಶ್ವರ್, ಸೋಮಶೇಖರ್ ಏಕೆ ಪಕ್ಷ ಬಿಡುತ್ತಿದ್ದರು. ಜೊತೆಯಲ್ಲಿರುವ ನಾಯಕರನ್ನು ಮುಗಿಸುವುದರಿಂದ ನಾಯಕತ್ವ ಬರುವುದಿಲ್ಲ ನಾಯಕತ್ವ ಎನ್ನುವ ಬೆಳೆಸುವುದರಿಂದ ಬರಲಿದೆ ಎಂದು ತಿಳಿಸಿದರು.
ರಾಮನಗರ ಜಿಲ್ಲೆಯಲ್ಲಿ ಎಷ್ಟು ಗೆದ್ದಿದೆ ಕಾಂಗ್ರೆಸ್ ಅವರೊಬ್ಬರೇ ಗೆದ್ದಿರುವುದು, ಹಾಳೂರಿಗೆ ಉಳಿದೋನು ಒಬ್ಬನೇ ಗೌಡ ಎನ್ನವಂತಾಗಿದೆ ಅವರ ಪರಿಸ್ಥಿತಿ. ಬಡ್ಡಿ ದುಡ್ಡು ಖಾಲಿ ಮಾಡಿಸಲು ಆ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಮುನಿರತ್ನ ಅವರು ಅಭಿವೃದ್ಧಿ ಮಾಡಿದ್ದಾರೆ. ಹಾಗಾಗಿ ನಮ್ಮ ಗೆಲುವು ಖಚಿತ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ