ಬೆಂಗಳೂರು(ಆ.14): ಪಕ್ಷದ ಕಾರ್ಯಾಲಯಗಳು ಮನೆ ಅಲ್ಲ, ಸಂಸ್ಕಾರ ಇರುವ ಕೇಂದ್ರಗಳು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ರಾಜ್ಯದ 8 ಜಿಲ್ಲೆಗಳ ಬಿಜೆಪಿ ಕಾರ್ಯಾಲಯ ಮತ್ತು 1 ಮಂಡಲ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ದೆಹಲಿಯಿಂದಲೇ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜನ ಸೇರುವ ಸ್ಥಳ ಕಾರ್ಯಾಲಯ. ಕಾರ್ಯಕರ್ತರು ಪಕ್ಷದ ನಾಯಕರನ್ನು ಪಕ್ಷದ ಕಾರ್ಯಾಲಯಗಳಲ್ಲಿ ಭೇಟಿ ಮಾಡುವುದು ಒಂದು ಸಂಸ್ಕಾರ. ಕಾರ್ಯಾಲಯಗಳಿಗೆ ಬರುವುದರಿಂದ ಕಾರ್ಯಕರ್ತರ ರಾಜಕೀಯ ದೃಷ್ಟಿಕೋನ, ನಿಲುವು ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊರೋನಾ ಹಿನ್ನೆಲೆಯಲ್ಲಿ ಈಗ ಪಕ್ಷದ ಕಾರ್ಯಾಲಯಗಳಲ್ಲೂ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. 130 ಕೋಟಿ ಜನ ಇರುವ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ನಿರ್ವಹಣೆಯ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ ಮೋದಿಯವರ ಸಾಮರ್ಥ್ಯದ ದರ್ಶನ ಜಗತ್ತಿಗೆ ಆಗಿದೆ ಎಂದರು.
ಕೊರೋನಾದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗೆ ಪ್ರಧಾನಿ ಅವರು ಕೃಷಿ ಪ್ಯಾಕೇಜ್ ಘೋಷಿಸಿದರು. ಇದನ್ನು ಕರ್ನಾಟಕ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ರಾಜ್ಯದಲ್ಲಿ ಕೃಷಿ ವಲಯದ ಚಿತ್ರಣವನ್ನು ಬದಲಾಯಿಸಬೇಕಿದೆ ಎಂದು ಸಲಹೆ ನೀಡಿದರು.
ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಲಾಕ್ ಡೌನ್ ವೇಳೆ ಜನರಿಗೆ ನೆರವು ಕೊಟ್ಟಿದ್ದಾರೆ. ವಲಸೆ ಕಾರ್ಮಿಕರಿಗೆ, ಊಟ ಇಲ್ಲದವರಿಗೆ, ಕಷ್ಟಕ್ಕೆ ಸಿಲುಕಿದವರಿಗೆ, ರೋಗಿಗಳಿಗೆ ಔಷಧಿ ಪೂರೈಕೆ ಮಾಡಿದ್ದೀರಿ ಎಂದು ರಾಜ್ಯದ ಕಾರ್ಯಕರ್ತರ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕೋವಿಡ್ ಲಾಕ್ ಡೌನ್ ವೇಳೆ ರಾಜ್ಯದಲ್ಲಿ ವಿಶೇಷ ಪ್ಯಾಕೇಜ್ ನೀಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಡ್ಡಾ, ವಿವಿಧ ಸಮುದಾಯಗಳಿಗೆ ಪ್ರತ್ಯೇಕ ಪ್ಯಾಕೇಜ್ ಕೊಟ್ಟಿದ್ದಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ, ತಮ್ಮ ಅಧಿಕೃತ ನಿವಾಸ ಕಾವೇರಿಯಿಂದ ವರ್ಚುವಲ್ ಮೂಲಕ ಮಾತನಾಡಿದ ಸಿಎಂ ಯಡಿಯೂರಪ್ಪ, ಇವತ್ತು ನಮಗೆಲ್ಲ ಪ್ರೇರಣಾದಾಯಕ ದಿನ. ಅಮಿತ್ ಷಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಜಿಲ್ಲೆಗಳು, ತಾಲ್ಲೂಕುಗಳಲ್ಲಿ ಭವನಗಳಿರಬೇಕೆಂದು ಅಪೇಕ್ಷೆ ಪಟ್ಟಿದ್ದರು.
ಬೆಂಗಳೂರಿಗೆ ಖುದ್ದು ಬಂದು ಜಗನ್ನಾಥ ಭವನವನ್ನ ಅಟಲ್ ಬಿಹಾರಿ ವಾಜಪೇಯಿಯವರು ಉದ್ಘಾಟಿಸಿದ್ದರು. ಜನರ ಅಹವಾಲು ಸ್ವೀಕೃತ, ಸಮಸ್ಯೆಗಳ ಬಗೆಹರಿಸಲು ಭವನಗಳು ನೆರವಾಗುತ್ತವೆ ಎಂದು ಹೇಳಿದರು. ಪಕ್ಷದ ಕಾರ್ಯಾಲಯಗಳು ಕಾರ್ಯಕರ್ತರಿಗೆ ಹೃದಯ ಮಂದಿರ ಇದ್ದ ಹಾಗೆ. ಕಾರ್ಯಕರ್ತರೇ ಪಕ್ಷದ ಜೀವಾಳ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ