ಬೆಂಗಳೂರು: ಬಿಜೆಪಿ ವಿಧಾನಪರಿಷತ್ (BJP MLC) ಸದಸ್ಯ ಬಾಬುರಾವ್ ಚಿಂಚನಸೂರ್ (Baburao Chinchansur) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರಿಗೆ ಕಚೇರಿಯಲ್ಲಿ ಸ್ವಹಸ್ತಾಕ್ಷರ ಮೂಲಕ ರಾಜೀನಾಮೆ ಪತ್ರ ಬರೆದು ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ಗುರುಮಿಠಕಲ್ (Gurumitkal) ಕ್ಷೇತ್ರದ ಟಿಕೆಟ್ ಆಕ್ಷಾಂಕ್ಷಿಯಾಗಿದ್ದ ಚಿಂಚನಸೂರ್ ಅವರಿಗೆ ಟಿಕೆಟ್ ಕೊಡಲು ಬಿಜೆಪಿ ನಿರಾಕರಿಸಿತ್ತು ಎನ್ನಲಾಗಿದ್ದು, ಇದರಿಂದ ಆಸಮಾಧಾನಗೊಂಡ ಅವರು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು, ಬಿಜೆಪಿ ತೆರೆದು ನಾಳೆಯೇ ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದೆ.
ಬಿಜೆಪಿಯಿಂದ ಎಂಎಲ್ಸಿಯಾಗಿ ಆಯ್ಕೆಯಾಗಿದ್ದ ಚಿಂಚನಸೂರ್
ಕಳೆದ ವರ್ಷ ಜೆಡಿಎಸ್ ಪಕ್ಷದ ಸಿಎಂ ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಬಿಜೆಪಿಯಿಂದ ಚಿಂಚನಸೂರ್ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ಸ್ಥಾನಕ್ಕೆ ಕೇವಲ ಒಂದು ವರ್ಷಕ್ಕೆ ಮಾತ್ರ ಅಧಿಕಾರ ಅವಧಿ ಇದ್ದು, ಈಗ ಅವಧಿ ಮುಕ್ತಾಯವಾಗುತ್ತಿದ್ದಂತೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಚಿಂಚನಸೂರ್ ನಂತರ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಅಸಮಧಾನಗೊಂಡು ಬಿಜೆಪಿ ಸೇರಿದ್ದರು.
ಇದನ್ನೂ ಓದಿ: Kolar: ಸಿಎಂ ಇಬ್ರಾಹಿಂಗೆ ದೃಷ್ಟಿ ತೆಗೆದು ಕಂತೆ ಕಂತೆ ನೋಟು ಎಸೆದ ಜೆಡಿಎಸ್ ಮುಖಂಡ
ಬಳಿಕ ನಡೆದ ಚುನಾವಣೆಯಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಸೋತಿದ್ದ ಚಿಂಚನಸೂರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ, ಕೋಳಿ ಸಮುದಾಯವನ್ನು ಚುನಾವಣೆಗೆ ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಇದೀಗ ಬಿಜೆಪಿಗೆ ಬಿಗ್ ಶಾಕ್ ಕೊಟ್ಟು ಮತ್ತೆ ಕಾಂಗ್ರೆಸ್ನತ್ತ ಚಿಂಚನಸೂರ್ ಮುಖ ಮಾಡಿದ್ದಾರೆ.
ವೇದಿಕೆಯಲ್ಲೇ ಚಿಂಚನಸೂರ್ಗೆ ಗದರಿದ್ದ ಸಿಎಂ ಬೊಮ್ಮಾಯಿ
ಇನ್ನು, ಚಿಂಚನಸೂರ್ ಬಿಜೆಪಿ ತೊರೆಯಲು ಸಿಎಂ ನಡೆಯು ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಚಿಂಚನಸೂರ್ಗೆ ಸಿಎಂ ಗದರಿದ್ದರು. ಈ ಎಲ್ಲದರಿಂದ ಬಿಜೆಪಿ ತೊರೆದು ಈ ಹಿಂದೆ ಕಟುವಾಗಿ ಟೀಕೆ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕ್ ಖರ್ಗೆ ಸೋಲಿಸುವುದಾಗಿ ತೊಡೆ ತಟ್ಟಿದ್ದ ಚಿಂಚನಸೂರ್
ಇನ್ನು, ಕೆಲ ದಿನಗಳ ಹಿಂದಷ್ಟೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚಿಂಚನಸೂರ್ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಸೋಲಿಸಿದ್ದೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಪ್ರಿಯಾಂಕಾ ಖರ್ಗೆ ಸೋಲಿಸುತ್ತೇನೆ. ನನ್ನ ಶಕ್ತಿ ನಿಮಗೆ ಗೊತ್ತಿಲ್ಲ ಎಂದು ಮಾಧ್ಯಮಗಳ ಎದುರು ತೊಡೆ ತಟ್ಟಿದ್ದರು.
ಹಿನ್ನಡೆ ಆಗಬಹುದೆಂಬ ಆತಂಕದಲ್ಲಿ ಆಪರೇಷನ್ ಕಾಂಗ್ರೆಸ್
ಅಂದಹಾಗೇ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೋಳಿ ಸಮುದಾಯ ಮತಗಳು ನಿರ್ಣಾಯಕವಾಗಿದ್ದು, ಕೋಳಿ ಸಮುದಾಯದ ಹಿನ್ನಡೆ ಬಿಸಿಯಿಂದಲೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಹಿನ್ನಡೆಯಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕಾ ಸೋಲಿಸಲು ಚಿಂಚನಸೂರ್ ಪಣ ತೊಟ್ಟಿದ್ದರು. ಇದೀಗ ತಮ್ಮ ವಿರುದ್ಧ ತೊಡೆ ತಟ್ಟಿದ್ದ ಚಿಂಚನಸೂರ್ ಅವರನ್ನೇ ಪ್ರಿಯಾಂಕಾ ಖರ್ಗೆ ಆಪರೇಷನ್ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಕರೆತಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: BS Yediyurappa: ಶಾಸಕಿಯ ಹೆಗಲ ಮೇಲೆ ಕೈಹಾಕಿ 'ನನ್ನ ಜೊತೆಗಿದ್ದಾರೆ' ಎಂದ ಮಾಜಿ ಸಿಎಂ ಬಿಎಸ್ವೈ
ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೂಲಕ ಆಪರೇಷನ್ ನಡೆಸಲು ಯಶಸ್ವಿಯಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಚಿಂಚನಸೂರ್ ತಂತ್ರದಿಂದ ತಮಗೆ ಮುಂದೆ ಚುನಾವಣೆಯಲ್ಲಿ ಹಿನ್ನಡೆ ಆಗಬಹುದೆಂಬ ಆತಂಕದಲ್ಲಿ ಚಿಂಚನಸೂರ್ ಅವರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಪ್ರಿಯಾಂಕ್ ಮಾಡಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ