ರುತ್ ಮೇರಿ ಸಗಾಯ್ ಎಂಬ ಮಹಿಳೆಯನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ್ ಲಿಂಬಾವಳಿ (MLA Aravind Limbavali) ನ್ಯೂಸ್ 18 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಮೇರಿ ಸಗಾಯ್ ಮಾಡಿರುವ ಆರೋಪಗಳನ್ನ ತಳ್ಳಿ ಹಾಕಿದರು. ಮೇರಿ ಸಗಾಯ್ ಅವರು ಸ್ಥಳೀಯ ಕಾಂಗ್ರೆಸ್ ನಾಯಕಿ (Congress Leader). ರಾಜಕಾಲುವೆ (Raja kaluve) ಒತ್ತುವರಿ ಮಾಡಿದ್ದಾರೆ. ಒತ್ತುವರಿ ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು (BBMP Officers) ಒಂಬತ್ತು ತಿಂಗಳಿಂದ ಮೂರು ಬಾರಿ ನೋಟಿಸ್ ನೀಡಿದ್ದರೂ ಒತ್ತುವರಿ ತೆರವು ಮಾಡುತ್ತಿಲ್ಲ. ರಾಜ ಕಾಲುವೆ ಒತ್ತುವರಿಯಿಂದ ಮಳೆ (Rain) ಸಂದರ್ಭದಲ್ಲಿ ಸುತ್ತಮುತ್ತಲ ಲೇಔಟ್ನಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ಅವರು ನನ್ನ ಮೇಲೆ ಏನೇ ಆರೋಪ ಮಾಡಲಿ. ಒತ್ತುವರಿ ತೆರವುಗೊಳಿಸಿ ಅಂತ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್ ನಾಯಕರು ಒತ್ತುವರಿ ಸಮರ್ಥಿಸಿಕೊಳ್ಳುತ್ತಾರಾ ಎಂದು ಅರವಿಂದ್ ಲಿಂಬಾವಳಿ ಪ್ರಶ್ನೆ ಮಾಡಿದ್ದಾರೆ.
ಶಾಸಕರ ವಿರುದ್ಧ ಕಾಂಗ್ರೆಸ್ ಟ್ವೀಟ್
ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ.ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಬಿಜೆಪಿ ಮತ್ತು ಸಿಎಂ ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ ಎಂದು ಪ್ರಶ್ನೆ ಮಾಡಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮೇರಿ ಸಗಾಯ್ ಹೇಳಿದ್ದೇನು?
ರಾಜ ಕಾಲುವೆಯ ಒತ್ತುವರಿ ಆರೋಪ ತಳ್ಳಿ ಹಾಕಿದ್ದಾರೆ. ನಮ್ಮ ಕ್ಷೇತ್ರಕ್ಕೆ ಬಂದ ಶಾಸಕರು ನಮ್ಮ ಕಟ್ಟಡದ ಕಾಂಪೌಂಡ್ ಕೆಡವಿ ಹಾಕಿದ್ದರು. ಇದನ್ನು ಪ್ರಶ್ನಿಸಲು ನಾನು ಅಲ್ಲಿಗೆ ತೆರಳಿದ್ದೆ. ಒಂದು ನಿಮಿಷ ಮಾತನಾಡಬೇಕು ಅಂತ ಹೇಳಿದ್ದಕ್ಕೆ, ಕೋಪದಿಂದ ಹಲ್ಲು ಕಚ್ಚಿ, ಕೋಪದಿಂದ ಏಕವಚನದಿಂದ ಮಾತನಾಡಿದರು.
ಏಕಾಏಕಿ ಕಾಂಪೌಂಡ್ ಬೀಳಿಸಿದ್ದೇಕೆ?
ಕೈಯಲ್ಲಿರುವ ದಾಖಲೆ ತೆಗೆದುಕೊಳ್ಳಲು ಬಂದಾಗ ನಾನು ನೀಡಲಿಲ್ಲ. ಕೊನೆಗೆ ಕೈಯಲ್ಲಿರುವ ದಾಖಲೆ ಪತ್ರ ತೆಗೆದುಕೊಂಡರು. ನಾವು ಬಿಬಿಎಂಪಿ ಅನುಮತಿ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದೇವೆ. ಕಾಂಪೌಂಡ್ ಬೀಳಿಸುವ ಮೊದಲು ನಮಗೆ ನೋಟಿಸ್ ನೀಡಬೇಕಿತ್ತು ಅಥವಾ ನಮ್ಮ ಗಮನಕ್ಕೆ ತರಬೇಕಿತ್ತು. ಏಕಾಏಕಿ ಕಾಂಪೌಂಡ್ ಬೀಳಿಸಿದ್ದೇಕೆ ಎಂದು ಮೇರಿ ಸಗಾಯಿ ಪ್ರಶ್ನೆ ಮಾಡಿದ್ದಾರೆ.
ಕಾಂಪೌಂಡ್ ಬೀಳಿಸಿದ ಜಾಗದಲ್ಲಿ ವಿದ್ಯುತ್ ಉಪಕರಣಗಳಿವೆ. ಅಲ್ಲಿ ಏನಾದ್ರೂ ಅಪಾಯ ಉಂಟಾದ್ರೆ ಯಾರು ಹೊಣೆ ಎಂದು ಪ್ರಶ್ನಿಸಿದ ಮೇರಿ ಸಗಾಯಿ, ಯಾರೂ ನನ್ನ ಜೊತೆ ಇಷ್ಟು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ಎಲ್ಲರೆದರೂ ನನ್ನ ಅವಮಾನಿಸಲಾಗಿದೆ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ ಎಂದರು.
ಎಫ್ಐಆರ್ ದಾಖಲು
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆ ಮಹಿಳೆಯ ವಿರುದ್ಧ ಎಫ್ಐಆರ್ (FIR) ಸಹ ದಾಖಲಿಸಲಾಗಿದೆ. ಕಂದಾಯ ಅಧಿಕಾರಿ ಪಾರ್ಥ್ ಸಾರಥಿ ನೀಡಿದ ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ರುತ್ ಮೇರಿ ಸಗಾಯಿ ಶಾಸಕರಿಂದ ನಿಂದನೆಗೊಳಗಾದ ಮಹಿಳೆ. ರುತ್ ಮೇರಿ ಸಗಾಯಿ ಅವರು ವೈಟ್ ಫೀಲ್ಡ್ ಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ (Block Congress President) ಆಗಿದ್ದಾರೆ. ರುತ್ ಮೇರಿ ಸಗಾಯಿ ಅವರು ಕಮರ್ಷಿಯಲ್ ಬಿಲ್ಡಿಂಗ್ ಹೊಂದಿದ್ದು, ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ