ವಿಜಯಪುರದಲ್ಲಿ (Vijayapura) ಸಾವರ್ಕರ್ ಫೋಟೋ (Savarkar Photo) ವಿವಾದ ತಾರಕಕ್ಕೇರಿದೆ. ತಡರಾತ್ರಿ ಕಾಂಗ್ರೆಸ್ ಕಚೇರಿಗೆ (Congress Office) ಸಾವರ್ಕರ್ ಫೋಟೋ ಅಂಟಿಸಲಾಗಿದೆ. ಕಾಂಗ್ರೆಸ್ ಕಚೇರಿಯ ಕಟ್ಟಡ ಹಾಗೂ ಬಾಗಿಲಿಗೆ ಹತ್ತಕ್ಕೂ ಅಧಿಕ ಸಾವರ್ಕರ್ ಫೋಟೋಗಳನ್ನು ಅಂಟಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಲನಗರ ಠಾಣೆ ಪೊಲೀಸರು ಫೋಟೋಗಳನ್ನು ತೆರವು ಮಾಡಿದ್ದಾರೆ. ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸದ್ಯ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಫೋಟೋ ಅಂಟಿಸಿದ ಕಿಡಿಗೇಡಿಗಳ ಪತ್ತೆಕಾರ್ಯ ನಡೆಯುತ್ತಿದೆ. ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಕಾಂಗ್ರೆಸ್ ನಾಯಕರು (Congress Leaders) ಆಗ್ರಹಿಸಿದ್ದಾರೆ. ಕಾಂಗ್ರೆಸ್ ಕಚೇರಿಯ ಮುಂಭಾಗ ಫೋಟೋ ಅಂಟಿಸಿದ ಕಾರಣ ಮತ್ತಷ್ಟು ವಿವಾದ ಭುಗಿಲೆದ್ದಿದೆ.
ಫೋಟೋ ಅಂಟಿಸಿದ್ದು ನಾನೇ!
ಕಾಂಗ್ರೆಸ್ ಕಚೇರಿ ಪ್ರವೇಶ ದ್ವಾರ, ಕಿಟಕಿ, ಗೋಡೆಗಳಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ್ ಹೂಗಾರ ಹೇಳಿದ್ದಾರೆ. ಸಾವರ್ಕರ್ ದೇಶಭಕ್ತನಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೋ ತೆರವು ಮಾಡಿದ್ದಕ್ಕೆ ವಿರೋಧಿಸಿ ಸಾವರ್ಕರ್ ಚಿತ್ರ ಅಂಟಿಸಿದ್ದೇನೆ. ಅದಕ್ಕೆ ಪ್ರತಿಯಾಗಿ ನಾನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೋಟೋ ಹಚ್ಚಿದ್ದೇನೆ ಎಂದಿದ್ದಾರೆ.
ಯತ್ನಾಳ್ ಸವಾಲ್
ವಿಜಯಪುರದಲ್ಲಿ ನಿನ್ನೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತೂ ಆಗಲ್ಲ. ದೇಶದಲ್ಲಿನ ಸಾವರ್ಕರ್ ವಿರೋಧಿಗಳಿಗೆ ಒಂದು ಸವಾಲು ಹಾಕುತ್ತೇವೆ. ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಾರ್ವಕರ್ ಇಟ್ಟಿದ್ದ ಜಾಗದಲ್ಲಿ ಒಂದು ವಾರ ಇರಲಿ ನೋಡೋಣ ಎಂದಿದ್ದಾರೆ.
ಇದನ್ನೂ ಓದಿ: B Y Vijayendra: ಸಿದ್ದರಾಮಯ್ಯರವರೇ ನಿಮಗಾಗಿ ಬಹುದೊಡ್ಡ ಕಂದಕ ಕಾಯುತ್ತಿದೆ, ವಿಜಯೇಂದ್ರ ವಾಗ್ದಾಳಿ!
ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ಸಾವರ್ಕರ್ ಹವಾ!
ಕುಂದಾನಗರಿ ಬೆಳಗಾವಿಯಲ್ಲಿ (Belagavi) ಈ ಬಾರಿ ಐತಿಹಾಸಿಕ ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ. ಬೆಳಗಾವಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಪ್ರತಿಯೊಂದು ಗಣೇಶ ಮಂಟಪಗಳಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಫೋಟೋ ಇರಿಸುತ್ತೇವೆ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹೇಳಿದ್ದಾರೆ.
ಗಣೇಶನ ಜೊತೆ ಮಂಟಪದಲ್ಲಿ ಸಾವರ್ಕರ್ ಫೋಟೋ
ಬೆಳಗಾವಿ ನಗರದಾದ್ಯಂತ ಸುಮಾರು 350ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸುತ್ತವೆ. 11 ದಿನಗಳ ಕಾಲ ಪ್ರತಿಷ್ಠಾಪಿಸಿ ಕೊನೆಯ ಅದ್ದೂರಿಯಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಗುತ್ತೆ. ಈ ವರ್ಷ ಪ್ರತಿ ಗಣೇಶೋತ್ಸವ ಮಂಡಳಿಗಳು ಗಣೇಶನ ಜೊತೆ ಮಂಟಪದಲ್ಲಿ ಸಾವರ್ಕರ್ ಫೋಟೋ ಇರಿಸಲಿವೆ.
ಮನೆ ಮುಂದೆ ಸಾರ್ವಕರ್ ಫೋಟೋ ಹಾಕಿದ ಶಾಸಕ
ವೀರ ಸಾವರ್ಕರ್ ಓರ್ವ ಸ್ವಾತಂತ್ರ್ಯ ಹೋರಾಟಗಾರ ಹೌದು ಅಥವಾ ಅಲ್ಲವಾ ಎಂಬುದರ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರವೇ ಏರ್ಪಟ್ಟಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ನಿವಾಸದ ಮುಂದೆ ಸಾವರ್ಕರ್ ಬ್ಯಾನರ್ ಹಾಕಿಸಿದ್ದಾರೆ.
ಮದುವೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋ ಗಿಫ್ಟ್
ತುಮಕೂರಿನ ಸಿದ್ದಿವಿನಾಯಕ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ನವಜೋಡಿಗೆ ಸಾವರ್ಕರ್ ಫೋಟೋವನ್ನು ಕಾಣಿಕೆಯಾಗಿ ನೀಡಲಾಗಿದೆ. ದಯಾನಂದ್ ಎಂಬವರ ಮದುವೆಗೆ ಆಗಮಿಸಿದ ಬಿಜೆಪಿ ಎಸ್ಟಿ ಯುವ ಮೋರ್ಚಾ ಕಾರ್ಯಕರ್ತ ಸಾವರ್ಕರ್ ಫೋಟೋ ನೀಡಿ ನವಜೋಡಿಗೆ ಶುಭ ಹಾರೈಸಿದರು.
ಇದನ್ನೂ ಓದಿ: Siddaramaiah ಅಂದು ತಿಂದಿದ್ದು ಕಣಿಲೆ ಅಕ್ಕಿ ರೊಟ್ಟಿ , ಮಾಂಸಾಹಾರ ಅಲ್ಲ: ವೀಣಾ ಅಚ್ಚಯ್ಯ
ಸಾವರ್ಕರ್ ಫೋಟೋಗೆ ಬೆಂಕಿ, ಎಫ್ಐಆರ್ ದಾಖಲು
ಆಗಸ್ಟ್ 19 ರಂದು ಪ್ರತಿಭಟನೆ (Protest) ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು (Congress Activist) ವೀರ ಸಾವರ್ಕರ್ ಫೋಟೋಗೆ (Veer Savarkar) ಬೆಂಕಿ ಹಾಕಿದ್ರು. ಈ ಸಂಬಂಧ ಧಾರವಾಡ (Dharwad) ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಭಜರಂಗ ದಳ ಮುಖಂಡ ಶಿವಾನಂದ್ ಸತ್ತಿಗೇರಿ ಅವರು ನೀಡಿದ ದೂರು ಆಧರಿಸಿ ಫೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ