ಬೆಂಗಳೂರು (ಡಿ. 1): ಹೆಚ್. ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ನಿನ್ನೆ ಹೈಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಹೆಚ್. ವಿಶ್ವನಾಥ್, ನಿನ್ನೆ ಹೈಕೋರ್ಟ್ ನಲ್ಲಿ ಅನರ್ಹತೆ ಬಗ್ಗೆ ತೀರ್ಪು ಬಂದಿದೆ. ನೆಲದ ಕಾನೂನನ್ನು, ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತ ಮಾಡುತ್ತೇನೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಹೈಕೋರ್ಟ್ ತೀರ್ಪನ್ನು ಗೌರವದಿಂದ ಕಾಣುತ್ತೇನೆ. ಮುಂದೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗುತ್ತೇನೆ. ರಾಜಕಾರಣದಲ್ಲಿ ಲಾಭ, ನಷ್ಟ, ಸೋಲು ಸಾಮಾನ್ಯ. ರಾಜಕಾರಣವನ್ನು ನಾನು ವ್ಯವಹಾರವಾಗಿ ತೆಗೆದುಕೊಂಡಿಲ್ಲ. ರಾಜಕೀಯ ನನಗೆ ಸಾಂಸ್ಕೃತಿಕವಾಗಿ ಸಮವಾಗಿದೆ. ಹೈಕೋರ್ಟ್ ತೀರ್ಪಿನಿಂದ ಏನೋ ದೊಡ್ಡ ದುರಂತ ಆಗಿದೆ ಅಂತ ನಾನು ಭಾವಿಸಿಲ್ಲ ಎಂದಿದ್ದಾರೆ.
ಬಿಜೆಪಿಯಿಂದ ಹಣ ತೆಗೆದುಕೊಂಡು ರಾಜೀನಾಮೆ ನೀಡಿಲ್ಲ ಎಂದು ಚಾಮುಂಡಿ ದೇವಿ ಮೇಲೆ ಹೆಚ್. ವಿಶ್ವನಾಥ್ ಆಣೆ ಪ್ರಮಾಣ ಮಾಡಲು ಮುಂದಾಗಿದ್ದರು. ಇದೇ ಕಾರಣಕ್ಕೆ ದೇವರೇ ಅವರಿಗೆ ಶಿಕ್ಷೆ ನೀಡಿದ್ದಾರೆ. ಅವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ. ಮಾಡಿದ ತಪ್ಪಿಗೆ ತಡವಾಗಿಯಾದರೂ ಶಿಕ್ಷೆಯಾಗಿಯೇ ಆಗುತ್ತದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಇಂದು ಮೈಸೂರಿನಲ್ಲಿ ಲೇವಡಿ ಮಾಡಿದ್ದರು.
ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಹೆಚ್. ವಿಶ್ವನಾಥ್, ಸಾರಾ ಮಹೇಶ್ ಬಗ್ಗೆ ನಾನು ಮಾತಾಡಲ್ಲ. ಸಾರಾ ಮಹೇಶ್ ಕೊಚ್ಚೆ ಗುಂಡಿ. ಆ ಗುಂಡಿಗೆ ಪದೇಪದೆ ಕಲ್ಲೆಸೆದು ನನ್ನ ಶುಭ್ರವಾದ ಬಟ್ಟೆಯನ್ನು ಕೊಳೆ ಮಾಡಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಹೆಚ್. ವಿಶ್ವನಾಥ್ರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ; ಸಾ.ರಾ. ಮಹೇಶ್ ವ್ಯಂಗ್ಯ
ಬಿಜೆಪಿ ಕೋರ್ ಕಮಿಟಿಗೆ ಜೂನ್ನಲ್ಲಿ ವಿಧಾನ ಪರಿಷತ್ಗೆ ನನ್ನ ಹೆಸರೂ ಸೇರಿಸಿ ನಾಲ್ವರ ಹೆಸರು ಕಳುಹಿಸಲಾಗಿತ್ತು. ಆದರೆ, ಅಂತಿಮ ಪಟ್ಟಿ ಬರುವಾಗ ನನ್ನ ಹೆಸರು ಇರಲಿಲ್ಲ. ಯಾಕೆ ಅಂತ ನಾನು ಬಿಜೆಪಿ ನಾಯಕರಲ್ಲಿ ಕೇಳಿದೆ. ನಿಮ್ಮನ್ನು ನಾಮ ನಿರ್ದೇಶನ ಮಾಡುತ್ತೇವೆ ಎಂದು ಹೇಳಿದರು ಎಂದು ಹಳೆಯ ಘಟನೆಯನ್ನು ಹೆಚ್. ವಿಶ್ವನಾಥ್ ನೆನಪಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ