ಹುಬ್ಬಳ್ಳಿ : ಬಿಜೆಪಿ (BJP) ಶಕ್ತಿ ಕೇಂದ್ರದಲ್ಲಿಯೇ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಧಾರವಾಡ (Dharwad Politics) ಜಿಲ್ಲೆಯಲ್ಲಿ ಬಿಜೆಪಿಯ ಒಂದು ವಿಕೆಟ್ ಪತನವಾಗಿದೆ. ಬಿಜೆಪಿಗೆ ಗುಡ್ ಬೈ ಹೇಳಲು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ (Former MLA Veerabhadrappa) ತುದಿಗಾಲ ಮೇಲೆ ನಿಂತಿದ್ದಾರೆ. ಹಾಲಹರವಿ ಜೆಡಿಎಸ್(JDS) ಸೇರ್ಪಡೆ ಬಹುತೇಕ ಖಚಿತವಾಗಿದೆ. ಈಗಾಗಲೇ ಎರಡು ಬಾರಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former CM HD Kumaraswamy) ಅವರನ್ನು ಭೇಟಿ ಮಾಡಿರೋ ವೀರಭದ್ರಪ್ಪ ಹಾಲಹರವಿ, ಉಪಹಾರ ಕೂಟದ ಪಾಲಿಟಿಕ್ಸ್ ಮೂಲಕ ಸದ್ದು ಮಾಡಿದ್ದಾರೆ. ಬಿಜೆಪಿ ನಾಯಕರ ವರ್ತನೆಯಿಂದ ಮುನಿಸಿಕೊಂಡಿರುವ ವೀರಭದ್ರಪ್ಪ ಹಾಲಹರವಿ, ಪಕ್ಷಾಂತರಕ್ಕೆ ಮುಂದಾಗಿದ್ದಾರೆ.
ನಾನು ಎತ್ತಿಕೊಂಡವರ ಕೂಸು
ನಾನು ಎತ್ತಿಕೊಂಡವರ ಕೂಸು ಎಂದು ಹೇಳುವ ಮೂಲಕ ಜೆಡಿಎಸ್ಗೆ ಪಕ್ಷಾಂತರ ಆಗೋದನ್ನ ಹಾಲಹರವಿ ಖಾತ್ರಿಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಕೊಟ್ಟರೆ ಇಲ್ಲಿಯೇ ಇರುತ್ತೇನೆ. ಕೊಡದಿದ್ದಲ್ಲಿ ಪಕ್ಷಾಂತರ ಮಾಡೋದು ಖಚಿತ. ನನ್ನನ್ನು ಭೇಟಿಯಾಗಲು ಬಯಸಿದ್ದರಿಂದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದೆ. ಎರಡು ಬಾರಿ ಭೇಟಿಯಾಗಿ ಮಾತುಕತೆ ಮಾಡಿದ್ದೇನೆ ಎಂದಿದ್ದಾರೆ.
ಕಳೆದ ಹತ್ತಾರು ವರ್ಷಗಳಿಂದಲೂ ಬಿಜೆಪಿಗೆ ದುಡಿದಿದ್ದೇನೆ. ಆದರೆ ನಾನು ಮಾಜಿ ಶಾಸಕನಾದ ನಂತರ ಬಿಜೆಪಿ ನಾಯಕರು ನನ್ನತ್ತ ನೋಡಿಲ್ಲ. ನನ್ನ ವಿಚಾರದಲ್ಲಿ ಅಸಡ್ಡೆ ತೋರುತ್ತಲೇ ಬಂದಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಬೇರೆಯವರನ್ನು ಎತ್ತಿಕಟ್ಟುವ ಕೆಲಸ
ನಿಗಮ, ಮಂಡಳಿಯಿಂದ ಹಿಡಿದು ಯಾವುದಕ್ಕೂ ನನ್ನ ಹೆಸರು ಪರಿಗಣಿಸಲಿಲ್ಲ. ಇದೀಗ ವಿಧಾನಸಭೆ ಚುನಾವಣೆ ಹತ್ತಿರ ಬಂದರೂ ಟಿಕೆಟ್ ಘೋಷಿಸಿಲ್ಲ. ಬೇರೆಯವರನ್ನು ಎತ್ತಿಕಟ್ಟುವ ಕೆಲಸ ಮುಖಂಡರಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ಹೀಗಾಗಿ ಮನನೊಂದು ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿದ್ದೇನೆ. ನನ್ನ ಬೆಂಬಲಿಗರ ಅಣತಿಯಂತೆ ಮುಂದಿನ ನಿರ್ಧಾರ ಕೈಗೊಳ್ತೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ನ್ಯೂಸ್ 18 ಗೆ ವೀರಭದ್ರಪ್ಪ ಹಾಲಹರವಿ ತಿಳಿಸಿದ್ದಾರೆ.
ಟಿಕೆಟ್ ಸಿಗೋದು ಅನುಮಾನ?
ವೀರಭದ್ರಪ್ಪ ಹಾಲಹರವಿ 2008 ಮತ್ತು 2013ರ ಅವಧಿಯಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕರಾಗಿದ್ದರು. ಇದೀಗ ಅದೇ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಬಿಜೆಪಿ ಟಿಕೆಟ್ ಸಿಗೋದು ಡೌಟ್ ಅನ್ನುವಂತಾಗಿದೆ.
ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ
ಮತ್ತೊಂದೆಡೆ ಇದೆಲ್ಲ ಬೆಳವಣಿಗೆಯನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಶಿಸ್ತು ಕ್ರಮದ ಎಚ್ಚರಿಕೆಯನ್ನು ಪರೋಕ್ಷವಾಗಿ ರವಾನಿಸಿದೆ. ಪಕ್ಷ ವಿರೋಧಿ ಚಟುವಟಿಕೆ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳೋದಾಗಿ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ (BJP Leader Lingarj Patil) ಎಚ್ಚರಿಸಿದ್ದಾರೆ.
ವೀರಭದ್ರಪ್ಪಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಶಾಸಕನನ್ನಾಗಿ ಮಾಡಿದೆ. ಮತ್ತೊಮ್ಮೆ ಅದೇ ಕ್ಷೇತ್ರದಿಂದ ಟಿಕೆಟ್ ಸಹ ಕೊಡಲಾಗಿತ್ತು. ಅಷ್ಟಾದರೂ ಪಕ್ಷಾಂತರ ಮಾಡ್ತಾರೆ ಅಂದ್ರೆ ಏನೂ ಮಾಡಲು ಆಗಲ್ಲ. ಇದು ಚುನಾವಣಾ ಕಾಲ ಆಗಿರೋದ್ರಿಂದ ಪಕ್ಷಾಂತರ ಸಾಮಾನ್ಯ ಎಂದು ಲಿಂಗರಾಜ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Dharwad: ಧಾರವಾಡದಲ್ಲಿ ಎಲೆಕ್ಷನ್ ಟೂರ್ ಪಾಲಿಟಿಕ್ಸ್; 10 ಸಾವಿರ ಮಹಿಳೆಯರಿಗೆ ಪ್ರವಾಸ ಭಾಗ್ಯ
ಪಕ್ಷಾಂತರ ಪರ್ವ ಆರಂಭನಾ?
ವೀರಭದ್ರಪ್ಪ ಹಾಲಹರವಿ ನಡೆ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೈ ತಪ್ಪುತ್ತೇ ಅನ್ನೋ ಚರ್ಚೆ ಜೋರಾಗಿರುವಾಗಲೇ, ತಮಗೂ ಟಿಕೆಟ್ ತಪ್ಪಬಹುದೆಂದು ಹಲವರು ಪಕ್ಷಾಂತರಕ್ಕೆ ಮುಂದಾಗಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ತವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಊರಲ್ಲಿ ಈ ರೀತಿಯ ಬೆಳವಣಿಗೆ ನಡೆದಿರೋದು ಬಿಜೆಪಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ