• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi CD Case: ಸಿಡಿ ಪ್ರಕರಣಕ್ಕೆ ಬೆಚ್ಚಿ ಸಚಿವರು ಕೋರ್ಟಿಗೆ ಹೋದ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಹೈಕಮಾಂಡ್

Ramesh Jarkiholi CD Case: ಸಿಡಿ ಪ್ರಕರಣಕ್ಕೆ ಬೆಚ್ಚಿ ಸಚಿವರು ಕೋರ್ಟಿಗೆ ಹೋದ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಹೈಕಮಾಂಡ್

ಜೆಪಿ ನಡ್ಡಾ.

ಜೆಪಿ ನಡ್ಡಾ.

ರಮೇಶ್ ಜಾರಕಿಹೊಳಿ ಅವರ ಆಪ್ತ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರಂತೂ ಈ ಷಡ್ಯಂತ್ರದ ಹಿಂದೆ ಕನಕಪುರ ಮೂಲದ ಪ್ರಭಾವಿ ರಾಜಕಾರಣಿ ಒಬ್ಬರ ಕೈವಾಡ ಇದೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಡೆಗೆ ಬೊಟ್ಟು ಮಾಡಿದ್ದಾರೆ.

  • Share this:

ನವ ದೆಹಲಿ (ಮಾರ್ಚ್​ 6): ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸೆಕ್ಸ್ ಸಿಡಿಯೊಂದು ಬಹಿರಂಗಗೊಂಡು ಅವರು ರಾಜೀನಾಮೆ ನೀಡುತ್ತಿದ್ದಂತೆ ಬೆಚ್ಚಿ ಬಿದ್ದಿರುವ ಆರು ಸಚಿವರು ತಡೆಯಾಜ್ಞೆ ಕೋರಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಷಯ ಈಗ ಬಿಜೆಪಿ ಹೈಕಮಾಂಡ್ ಅಂಗಳವನ್ನೂ ತಲುಪಿದ್ದು ಬಿಜೆಪಿ ಹೈಕಮಾಂಡ್ ನಾಯಕರು ಮಾಹಿತಿ ಸಂಗ್ರಹಿಸಿದ್ದಾರೆ. ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಐದು ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ. ಈ ಬಗ್ಗೆ ಶನಿವಾರ ಸಚಿವ ಅರವಿಂದ ಲಿಂಬಾವಳಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದ ಸಚಿವರು ಅವಸರದಲ್ಲಿ ಕೋರ್ಟ್ ಮೆಟ್ಟಿಲು ಏರಿದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಆರು ಮಂದಿ ಸಚಿವರು ಸ್ವತಃ ಕೋರ್ಟ್ ಮೊರೆ ಹೋಗಿದ್ದು ಏಕೆ? ಇದರಿಂದ ತಾವು ತಪ್ಪಿತಸ್ಥರು ಎಂದು ಒಪ್ಪಿಕೊಂಡ ಹಾಗಲ್ಲವೇ? ಕೋರ್ಟಿಗೆ ಹೋಗುವ ಮುನ್ನ ಪಕ್ಷದ ನಾಯಕರನ್ನು ಇವರು ಸಂಪರ್ಕ ಮಾಡಿದ್ದರಾ? ಪಕ್ಷದ ಸಲಹೆ ಸೂಚನೆ ಏನಿತ್ತು? ಅಥವಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಚರ್ಚೆ ಮಾಡಿದ್ದರಾ? ಒಟ್ಟಾರೆ ಸಚಿವರು ಆತುರ ತೋರಿದ್ದು ಏಕೆ? ಎಂಬ ಮಾಹಿತಿಗಳನ್ನು ಸಚಿವ ಅರವಿಂದ್ ಲಿಂಬಾವಳಿ ಅವರಿಂದ ಜೆ.ಪಿ. ನಡ್ಡಾ ಪಡೆದಿದ್ದಾರೆ ಎನ್ನಲಾಗಿದೆ.


ರಮೇಶ್ ಜಾರಕಿಹೊಳಿ ಅವರ ವಿಡಿಯೋ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಪ್ರತಿಪಕ್ಷಗಳ ತಂತ್ರ ಇದೆ ಎಂಬಿತ್ಯಾದಿಯಾಗಿ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಆಪ್ತ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರಂತೂ 'ಈ ಷಡ್ಯಂತ್ರದ ಹಿಂದೆ ಕನಕಪುರ ಮೂಲದ ಪ್ರಭಾವಿ ರಾಜಕಾರಣಿ ಒಬ್ಬರ ಕೈವಾಡ ಇದೆ' ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಡೆಗೆ ಬೊಟ್ಟು ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅರವಿಂದ ಲಿಂಬಾವಳಿ ಬಳಿ 'ಪ್ರತಿಪಕ್ಷದ ನಾಯಕರ ಕೈವಾಡದ ಸಾಧ್ಯಾಸದ್ಯತೆ' ಬಗ್ಗೆ ಕೂಡ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Ramesh Jarkiholi CD Case: ಸಿಡಿ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್​ ಕೈವಾಡಡದ ಆರೋಪ; ಗೋಕಾಕ್​ನಲ್ಲಿ ಇನ್ನೂ ನಿಂತಿಲ್ಲ ಬೆಂಬಲಿಗರ ಆಟಾಟೋಪ


ಜೆ.ಪಿ. ನಡ್ಡಾ ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ ಮಾತ್ರ 'ತಾನು ಜೆ.ಪಿ. ನಡ್ಡಾ ಜೊತೆ ರಾಜ್ಯದ ವಿಚಾರ ಚರ್ಚೆ ಮಾಡಿಲ್ಲ' ಎಂದು ಜಾರಿಕೊಂಡರು. ಹೈಕಮಾಂಡ್ ನಾಯಕರ ಬುಲಾವ್ ಹಿನ್ನಲೆಯಲ್ಲಿ ದೆಹಲಿಗೆ ಆಗಮಿಸಿದ್ದೆ. ಪಶ್ಚಿಮ ಬಂಗಾಳ ಚುನಾವಣೆ ಹಿನ್ನಲೆ ಬುಲಾವ್ ನೀಡಲಾಗಿತ್ತು. ಕೇವಲ ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಮಾತ್ರ ಚರ್ಚೆ ಮಾಡಲಾಗಿದೆ.


ಪಶ್ಚಿಮ ಬಂಗಾಳದಲ್ಲಿ ನನಗೆ ಐದು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಿದ್ದಾರೆ. ಅಲ್ಲಿ ಗೆಲ್ಲುವ ಬಗ್ಗೆ ಚರ್ಚೆ ಮಾಡಿದ್ದೇವೆ. ಕರ್ನಾಟಕದ ಸಿಡಿ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ.‌ ಹೈಕಮಾಂಡ್ ನಾಯಕರ ಭೇಟಿ ವೇಳೆ ಈ ಬಗ್ಗೆ ಚರ್ಚಿಸಲು ಸಮಯ ಕೂಡ ಸಿಗಲಿಲ್ಲ. ಹೈಕಮಾಂಡ್ ನಾಯಕರು ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿದರು.

Published by:MAshok Kumar
First published: