ಬೆಂಗಳೂರು: ಪಕ್ಷ ತೊರೆದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar), ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Former DCM Laxman Savadi) ಅವರಿಗೆ ಬಿಜೆಪಿ ಏನು ಕಡಿಮೆ ಮಾಡಿತ್ತು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಪ್ರಶ್ನೆ ಮಾಡಿದ್ದಾರೆ. ಹಳೇ ಬೇರು ಹೊಸ ಚಿಗುರು ಸೇರಿ ದೊಡ್ಡ ಪಕ್ಷ ಬೆಳೆಸಬೇಕಿದೆ. ನನಗೆ ಜಗದೀಶ್ ಶೆಟ್ಟರ್, ಸವದಿ, ಈಶ್ವರಪ್ಪ ಸರಿಯಾದ ಸ್ಥಾನಮಾನ ಕೊಟ್ಟಿದೆ. ಅನೇಕ ಸ್ಥಾನಮಾನ ಕೊಟ್ಟಿದೆ. ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಉತ್ತಮ ಸ್ಥಾನ ನೀಡಿದ್ದು ಬಿಜೆಪಿ (BJP) ಅನ್ನೋದು ಎಂದೂ ಮರೆಯಲ್ಲ ಎಂದು ಹೇಳಿದರು.
ಸವದಿ ಕರೆ ತಂದು ಶಾಸಕ, ಮಂತ್ರಿ, ಪ್ರಮುಖ ಖಾತೆ ಕೊಡಲಾಯಿತು. ಸೋತರೂ ಎಂಎಲ್ಸಿ, ಕೋರ್ ಕಮಿಟಿ ಸ್ಥಾನ ನೀಡಿ ಡಿಸಿಎಂ ಮಾಡಲಾಯಿತು. ಪಕ್ಷವೇನು ಅವರಿಗೆ ಕಡಿಮೆ ಮಾಡಿದ್ದೇವು? ಅವರು ಎಂಎಲ್ಸಿ ಆಗಿ ಮುಂದುವರಿಯಬೇಕಾಗಿತ್ತು. ಮತ್ತೊಮ್ಮೆ ಸಚಿವ ಸ್ಥಾನ ಮಾಡಲು ಅಡ್ಡಿ ಆತಂಕ ಇದ್ದಿದ್ದಿಲ್ಲ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.
ರಾಜ್ಯದ ಜನತೆಗೆ ಮಾಡಿದ ದ್ರೋಹ
ಏನು ಅನ್ಯಾಯ ಆಗಿತ್ತು ನಿಮಗೆ? ಎಲ್ಲಾ ಸ್ಥಾನಮಾನ ಪಡೆದು ಈಗೇನು ಮಾಡ್ತಿದ್ದೀರಿ. ಇದು ರಾಜ್ಯದ ಜನತೆಗೆ ಮಾಡಿದ ದ್ರೋಹ. ಸವದಿ ಅವರನ್ನು ಗುರುತಿಸಿದ್ದು ಬಿಜೆಪಿ. ಜಗದೀಶ್ ಶೆಟ್ಟರ್ ಶಾಸಕ, ಮಂತ್ರಿ, ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಈ ಹಿಂದೆ ಶಿವಪ್ಪ ಎದುರು ಹಾಕಿಕೊಂಡು ಶೆಟ್ಟರ್ ವಿಪಕ್ಷ ನಾಯಕ ಮಾಡಿದ್ದು ನಾನು ಮತ್ತು ಅನಂತ್ ಕುಮಾರ್ ಎಂದು ಹಳೆಯ ರಾಜಕೀಯ ಬೆಳವಣಿಗೆ ಹೇಳಿದರು.
ಪಕ್ಷಕ್ಕಿಂತ ವ್ಯಕ್ತಿ ದೊಡ್ಡದಲ್ಲ
ಶೆಟ್ಟರ್ ಅವರನ್ನು ಗುರುತಿಸಿದ್ದು ಬಿಜೆಪಿ ಪಕ್ಷ. ವ್ಯಕ್ತಿ ಅದೆಷ್ಟೇ ದೊಡ್ಡವನಾಗಿ ಬೆಳೆದ್ರೂ ಪಕ್ಷ ಮುಖ್ಯ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡದಲ್ಲ. ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯ ಮಾಡಿ ಮಂತ್ರಿ ಮಾಡ್ತೇವೆ ಎಂದ್ರು ಶೆಟ್ಟರ್ ಒಪ್ಪಲಿಲ್ಲ. ಸ್ವತಃ ಧರ್ಮೇಂದ್ರ ಪ್ರಧಾನ ಆಶ್ವಾಸನೆ ಕೊಟ್ರೂ ಒಪ್ಪದೇ ಕಾಂಗ್ರೆಸ್ ಜೊತೆ ಕೈ ಮಿಲಾಯಿಸ್ತಿರೋದು ನಾಡಿಗೆ ಜನತೆಗೆ ಮಾಡಿದ ಮಹಾದ್ರೋಹ ಎಂದು ಕಿಡಿಕಾರಿದರು.
ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. 2018ರಲ್ಲಿ ಕಾಂಗ್ರೆಸ್ ಜಾತಿ ರಾಜಕಾರಣ ಮಾಡಲು ಮುಂದಾಯಿತು. ಆದರೆ ಬಿಜೆಪಿ ಪಕ್ಷ ಎಲ್ಲರನ್ನೂ ಕೈಹಿಡಿಯಿತು. ಸವದಿ ತೆಗೆದುಕೊಂಡ ನಿರ್ಧಾರ ದುರಾದೃಷ್ಟಕರ. ನನಗೆ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
ರಾಜಾಹುಲಿ ಗುಡುಗು
ಸವದಿ, ಶೆಟ್ಟರ್ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಮುಂದೆ ಮಂತ್ರಿ ಮಾಡ್ತೇವೆ ಎಂದೆವು. ನಿಮ್ಮ ಮನೆಯವರಿಗೆ ಟಿಕೆಟ್ ಕೊಡ್ತೇನೆ ಎಂದು ಹೇಳಿದೆ. ಆದರೆ ಯಾವುದೇ ಮಾತು ಕೇಳಲಿಲ್ಲ. ಇವರ ಬಣ್ಣ ಬಯಲು ಮಾಡ್ತೇನೆ. ನಾನಿನ್ನೂ ಗಟ್ಟಿಯಾಗಿದ್ದೇನೆರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರ್ತೇನೆ ಎಂದು ಗುಡುಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ