ಬೆಂಗಳೂರು: ಇಂದು ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಸಚಿವ ಅಮಿತ್ ಶಾ (Central Home Minister Amit Shah) ಸಂಕಲ್ಪ ಸಿದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಭಾರತ ಸ್ವಾತಂತ್ರೋತ್ಸವದ 75ನೇ ವರ್ಷ (Independence day) ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಭಾಷಣ ನಡೆಸಿದರು. ಭಾರತ ಅಜಾದಿ ಕಾ ಅಮೃತಮಹೋತ್ಸವ ಆಚರಿಸುತ್ತಿದೆ. ಇದರ ಹಿಂದೆ ಮೂರು ಉದ್ದೇಶವಿದೆ. ಯುವ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮನವರಿಕೆ ಮಾಡುವುದು. ದೇಶದ ವಿಕಾಸದಲ್ಲಿ ಯುವ ಪೀಳಿಗೆ ಪಾತ್ರ ಅನಿವಾರ್ಯ. 75 ವರ್ಷದ ದೇಶದ ಸಾಧನೆಗಳನ್ನು ಜನತೆಗೆ ತಲುಪಿಸುವುದು ಎರಡನೇ ಉದ್ದೇಶ. ಈಗ ಸ್ವಾತಂತ್ರ್ಯದ ಅಮೃತಮಹೋತ್ಸವ ಮಾಡ್ತಿದ್ದೇವೆ, ಮುಂದೆ ನಾವೇ ಶತಮಾನೋತ್ಸವವನ್ನು ಕೂಡ ಆಚರಿಸುತ್ತೇವೆ ಎಂದರು.
25 ವರ್ಷ ಶ್ರಮಿಸಬೇಕು
ಈ ಮುಂದಿನ ಅವಧಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿರಬೇಕು. ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಇದನ್ನು ಸಾಕಾರಗೊಳಿಸಲು ಎಲ್ಲರೂ ಉಳಿದ 25 ವರ್ಷದಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು. ವಿಕಾಸದಲ್ಲಿ ಭಾರತ ಎಲ್ಲಾ ದೇಶಗಳಿಗೆ ಮಾದರಿ. ಎಲ್ಲಾ ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಈಗಾಗಲೇ ತನ್ನ ಚಾಪು ಮೂಡಿಸಿದೆ. ಈ ವಿಕಾಸದ ಹಾದಿಯಲ್ಲಿ ಜನವರ್ಗವನ್ನೂ ಒಳಗೊಳ್ಳುವಂತೆ ಮಾಡಿಕೊಳ್ಳಬೇಕು ಎಂದರು.
ಹಿಂದಿನ ಸರ್ಕಾರಗಳು ಇದ್ದಾಗ ಹಲವು ಅಕ್ರಮಗಳು ಬಯಲಿಗೆ ಬಂದಿದ್ದವು. ನಿತ್ಯ ಪತ್ರಿಕೆಯ ಮುಖಪುಟದಲ್ಲಿ ಭ್ರಷ್ಟಾಚಾರದ ಹೆಡ್ಲೈನ್ಗಳೆ ರಾರಾಜಿಸುತ್ತಿತ್ತು. ಎಲ್ಲಾ ದೇಶಗಳು ಭಾರತವನ್ನು ಬೇರೆ ದೃಷ್ಟಿಯಲ್ಲಿ ನೋಡ್ತಿತ್ತು. ಬಹಳ ಕಾಲದ ನಂತರ ಪೂರ್ಣಬಹುಮತದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಜನರೇ ಆಯ್ಕೆ ಮಾಡಿರುವ ಪೂರ್ಣಬಹುಮತದ ಸರ್ಕಾರಕ್ಕೆ ಈಗ ಎಂಟು ವರ್ಷ ತುಂಬಿದೆ. ಒಮ್ಮೆ ಈಗ ತಿರುಗಿ ಹಿಂದೆ ನೋಡಿದಾಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯನ್ನು ದೇಶದಲ್ಲಿ ನಾವು ನಿರ್ಮಾಣ ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ್ರು.
ಇದನ್ನೂ ಓದಿ: Amit Shah: ಪ್ರವೀಣ್ ನೆಟ್ಟಾರು ಹತ್ಯೆ, ಕಾರ್ಯಕರ್ತರ ರಾಜೀನಾಮೆ ಶಾಕ್! ಬಸವರಾಜ ಬೊಮ್ಮಾಯಿ ಮೇಲೆ ಅಮಿತ್ ಶಾ ಅಸಮಾಧಾನ
ಭಾರತದ ಕೋವಿಡ್ ನಿರ್ವಹಣೆ ವಿಶ್ವಕ್ಕೆ ಮಾದರಿ
ಜಿಎಸ್ಟಿಯ ಜಾರಿ ಸಫಲತೆ ಕಂಡಿದೆ. ದುರ್ಬಲಗೊಂಡಿದ್ದ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದಲ್ಲಿ ಪ್ರಧಾನಿ ಮೋದಿಯವರ ಕಾರ್ಯ ಹೆಚ್ಚಾಗಿದೆ. ಆತ್ಮ ನಿರ್ಭರತೆ ಮತ್ತು ಮೇಕ್ ಇನ್ ಇಂಡಿಯಾ ಜೊತೆಗೆ ಭಾರತದ ಅರ್ಥ ವ್ಯವಸ್ಥೆಗೆ ಒಂದು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದೇವೆ. ಭಾರತದ ಅರ್ಥವ್ಯವಸ್ಥೆಯನ್ನು ಲಘುವಾಗಿ ನೋಡುತ್ತಿದ್ದವರು ಈಗ ಆ ಧೈರ್ಯ ಮಾಡಲಾರರು. ಪ್ರಧಾನಿ ಮೋದಿ ಕಾಲದ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದ್ದು ಜಗತ್ತಿಗೆ ಮಾದರಿ. ಕೋವಿಡ್, ಲಾಕ್ಡೌನ್ನಿಂದ ಬೇರೆ ದೇಶಗಳು ಆರ್ಥಿಕವಾಗಿ ಕಂಗೆಟ್ಟಿದ್ದವು. ಆದ್ರೆ ಭಾರತ ಹೊಸ ಮಾದರಿಯಲ್ಲಿ ಪರಿಹಾರ ಕಂಡಕೊಂಡು ಕೋವಿಡ್ ಮೆಟ್ಟಿನಿಂತು ಆರ್ಥಿಕತೆ ಸುಧಾರಣೆಯನ್ನು ಕಂಡಿದೆ. ಇದೇ ವೇಳೆ ಕೇಂದ್ರದ ಯೋಜನೆಗಳ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಮತ್ತು ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಗಳಿದರು. ಯಾವುದೇ ದೇಶ ಅಭಿವೃದ್ಧಿ ಆಗಲು ದೂರದೃಷ್ಟಿಯುಳ್ಳ, ದಕ್ಷತೆ, ಗಟ್ಟಿ ನಾಯಕತ್ವ ಬೇಕು. ನಮ್ಮದೇಶಕ್ಕೆ ದೂರದೃಷ್ಟಿಯುಳ್ಳ ನಾಯಕ ಪ್ರಧಾನಿ ರೂಪದಲ್ಲಿ ಸಿಕ್ಕಿದ್ದಾರೆ. ದಕ್ಷ ನಾಯಕ ಅಮಿತ್ ಶಾ ರೂಪದಲ್ಲಿ ಸಿಕ್ಕಿದ್ದಾರೆ. ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೇಳಿದ ಸಿಎಂ, ಉದ್ಯೋಗ ನೀತಿ, ಆರ್ ಅಂಡ್ ಡಿ ನೀತಿ, ವಿದ್ಯುತ್ಚಾಲಿತ ವಾಹನಗಳ ನೀತಿ, ಕೈಗಾರಿಕಾ ನೀತಿ, ಸೆಮಿ ಕಂಡಕ್ಟರ್ ನೀತಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಮೋದಿಯವರ ಐದು ಟ್ರಿಲಿಯನ್ ಆರ್ಥಿಕತೆ ಸೃಷ್ಟಿಯ ಕನಸಿಗೆ ರಾಜ್ಯದಿಂದಲೂ ಬೆಂಬಲ ನೀಡಲಾಗುವುದು. ರಾಜ್ಯದಿಂದ 1 ಟ್ರಿಲಿಯನ್ ಆರ್ಥಿಕತೆ ಸೃಷ್ಟಿ ಬಗ್ಗೆ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ