ಚಿಕ್ಕಮಗಳೂರು: ಬಿಲ್ವಪತ್ರೆ (Bael) ಅಂದ್ರೆ ಶಿವನ ಭಕ್ತರಿಗೆ ಎಲ್ಲಿಲ್ಲದ ಗೌರವ. ಸಾಕ್ಷಾತ್ ಶಿವನಿಗೂ (Lord Shiva) ಕೂಡ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸಬೇಕು (Shiva Pooja) ಅನ್ನೋದು ಶಿವಭಕ್ತರ ಕನಸು. ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾದ ಬಿಲ್ವಪತ್ರೆಗಾಗಿ ಕಾಡು-ಮೇಡು ಅಲೆಯೋ ಭಕ್ತರೂ ಉಂಟು. ಆದರೆ ಅದೊಂದು ದೇವಾಲಯದ (Temple) ಆವರಣದಲ್ಲಿ ಸಾವಿರಾರು ಬಿಲ್ವಪತ್ರೆ ಮರಗಳು (Bael Tree) ಹುಲುಸಾಗಿ ಅರಳಿ ಬೆಳೆದು ನಿಂತಿವೆ. ಇಲ್ಲಿರೋ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಲ್ಲಿ ಯಾರೊಬ್ಬರು ಒಂದೇ ಒಂದು ಸಸಿಯನ್ನ ನೆಟ್ಟಿಲ್ಲ ಅನ್ನೋದು ಮತ್ತೊಂದು ವಿಶೇಷ.
ಬಿಲ್ವಪತ್ರೆ ಶಿವನಿಗೆ ಪರಮಪ್ರಿಯವಾದ ಹೂ. ಬಿಲ್ವಪತ್ರೆಯಲ್ಲಿ ಶಿವಾರಾಧನೆ ಮಾಡಿದರೆ ಪರಮೇಶ್ವರ ಮೆಚ್ಚಿ ಭಕ್ತರ ಬೇಡಿಕೆ ಈಡೇರಿಸ್ತಾನೆ ಅನ್ನೋದು ಭಕ್ತರ ನಂಬಿಕೆ. ಆದರೆ ಈ ಬಿಲ್ವಪತ್ರೆ ಎಲ್ಲೆಂದರಲ್ಲಿ ಸಿಗದಿರೋದೆ ಶಿವಭಕ್ತರ ಕೊರಗು.
ಎಲ್ಲಿದೆ ಈ ವನ?
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣಕ್ಕೆ (Sakarayapattana, Chikmagalur) ಹೊಂದಿಕೊಂಡಂತಿರೋ ಕಲ್ಮುರುಡೇಶ್ವರ ಸ್ವಾಮಿ (Kalmurudeshwara Temple) ಮಠದ ಆವರಣದಲ್ಲಿ ಒಂದಲ್ಲ, ಎರಡಲ್ಲ, ಸಾವಿರಾರು ಅಧಿಕ ಬಿಲ್ವಪತ್ರೆ ಮರಗಳಿವೆ. ದೇಶದಲ್ಲೇ ಅಪರೂಪದ ತಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರೋ ಈ ಬಿಲ್ವಪತ್ರೆ ವನದ ಸೊಬಗನ್ನ ಸವಿಯಲು ರಾಜ್ಯದ ಮೂಲೆ, ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸ್ತಾರೆ.
ಬಿಲ್ವಪತ್ರೆ ಹಾಗೂ ತುಂಬೆ ಹೂವಿನಿಂದ ಪೂಜೆ
ಮಠಕ್ಕಾಗಮಿಸುವ ನೂರಾರು ಭಕ್ತರು ತಣ್ಣೀರು ಸ್ನಾನ ಮಾಡಿ ಬಿಲ್ವಪತ್ರೆ ಎಲೆ ಕೊಯ್ದು ಭಕ್ತಿಯಿಂದ ಇಲ್ಲಿನ ಕಲ್ಮುರುಡೇಶ್ವರನಿಗೆ ಮುಡಿಸೋದು ವಾಡಿಕೆ. ಹೀಗೆ ಮಾಡೋದ್ರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತೇವೆ ಅನ್ನೋದು ಅವರ ನಂಬಿಕೆ. ಪ್ರತಿ ನಿತ್ಯ ಈಶ್ವರ ಪ್ರತಿರೂಪ ಕಲ್ಮುರುಡೇಶ್ವರನಿಗೆ ಬಿಲ್ವಪತ್ರೆ ಹಾಗೂ ತುಂಬೆ ಹೂವಿನಿಂದ ಪೂಜೆ ಮಾಡೋದು ಇಲ್ಲಿನ ವಿಶೇಷ.
ಇತ್ತೀಚಿನ ದಿನಗಳಲ್ಲಿ ಅಪರೂಪದಲ್ಲೂ ಅತ್ಯಂತ ವಿರಳವಾಗಿರೋ ಬಿಲ್ವಪತ್ರೆಯ ಒಂದು ಮರ ಕಂಡ್ರೆನೆ ಶಿವಭಕ್ತರು ನಾನೇ ಧನ್ಯ ಅಂತಾರೆ. ಅಂತದರಲ್ಲಿ ನೂರಾರು ಮರಗಳನ್ನ ಇಲ್ಲಿಗೆ ತಂದು ನೆಟ್ಟಿರೋರು ಯಾರು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲ.
ಈ ವನ ನಿರ್ಮಾಣ ಮಾಡಿದ್ಯಾರು?
ಈ ಪ್ರಶ್ನೆಗೆ ಸ್ಥಳೀಯರು ಹತ್ತಾರು ಪುರಾಣದ ಕಥೆ ಹೇಳ್ತಾರೆ. ಸುಮಾರು 800 ವರ್ಷಗಳ ಹಿಂದೆ ಮರುಳಸಿದ್ದೇಶ್ವರನೆಂಬ ಸನ್ಯಾಸಿಯೊಬ್ಬ ಇಲ್ಲಿ ತಪಸ್ಸು ಮಾಡುತ್ತುದ್ದರಂತೆ. ಆ ವೇಳೆ ಅವರು ರುದ್ದಾಕ್ಷಿಯನ್ನು ಮಠದ ಸುತ್ತಲೂ ಚೆಲ್ಲಿದ್ದರಿಂದ ಈ ಮರಗಳು ಬೆಳೆದಿವೆ, ಮರಗಳನ್ನು ಯಾರು ಬೆಳೆಸಿಲ್ಲ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಅನ್ನೋದು ಭಕ್ತರ ನಂಬಿಕೆ.
ಹಲವರು ಕಲ್ಮುರುಡೇಶ್ವರ ಸ್ವಾಮಿ ತನ್ನ ಪೂಜೆಗೆಂದು ತನೇ ಬೆಳೆಸಿಕೊಂಡಿದ್ದಾನೆ, ಇದು ದೈವದ ಶಕ್ತಿ ಅಂತಾರೆ. ಆದರೆ ಹೀಗೆ ಒಂದೇ ಜಾಗದಲ್ಲಿ ಇಷ್ಟೊಂದು ಬಿಲ್ವ ಪತ್ರೆ ಮರಗಳಿರೋದು ದೇಶದಲ್ಲಿ ಎರಡರಿಂದ ಮೂರು ಭಾಗದಲ್ಲಿ ಮಾತ್ರ. ಅದರಲ್ಲಿ ಈ ಜಾಗವೂ ಒಂದಾಗಿದೆ.
ನಿರ್ವಹಣೆ ಇಲ್ಲದೇ ಸೊರಗಿದ ವನ
ಒಟ್ಟಾರೆ ಈ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರೆ ಯಾವ ಮರಗಿಡಗಳಿಲ್ಲ. ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಎಗ್ಗಿಲ್ಲದೆ ಬೆಳೆದಿರೋ ಈ ಮರಗಳು ಭಕ್ತರ ಪಾಲಿಗೆ ಸಾಕ್ಷಾತ್ ಶಿವನ ರೂಪ. ಹತ್ತಾರು ಎಕರೆಯಲ್ಲಿದ್ದ ಬಿಲ್ವಪತ್ರೆ ವನ ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿದೆ.
ಇದನ್ನೂ ಓದಿ: Mahashivaratri 2023: ಶಿವರಾತ್ರಿಯಂದು ಈ 85 ಅಡಿ ಎತ್ತರದ ಮಹೇಶ್ವರನನ್ನು ನೋಡುವುದೇ ಸೌಭಾಗ್ಯ!
ಸ್ಥಳೀಯ ದಾನಿಯೊಬ್ಬರ ಸಹಾಯದಿಂದ ಮಠ ನಡೆಯುತ್ತಿದ್ದು, ಸರ್ಕಾರದಿಂದ ಯಾವುದೇ ಅನುದಾನವಿಲ್ಲ. ಮಠಕ್ಕಿರೋ ಅಲ್ಪ ಅದಾಯದಿಂದ ಈ ವನದ ರಕ್ಷಣೆ ಮಾಡಲಾಗ್ತಿದೆ. ರಾಜ್ಯದಲ್ಲಿ ಬೇರೆಲ್ಲೂ ಸಿಗದ ಈ ಅಪರೂಪದ ಸಸ್ಯ ಸಂಪತ್ತಿನತ್ತ ಸರ್ಕಾರ ಗಮನ ಹರಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.
ವರದಿ: ವೀರೇಶ್ ಜಿ. ಹೊಸೂರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ