• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bharat Bandh in Karnataka: ರಾಜ್ಯದಲ್ಲಿ ಬೆಳಗ್ಗೆ 6ರಿಂದಲೇ ಭಾರತ್ ಬಂದ್; ಜಿಟಿ ಮಳೆಯ ನಡುವೆಯೂ ರೈತರ ಪ್ರತಿಭಟನೆ

Bharat Bandh in Karnataka: ರಾಜ್ಯದಲ್ಲಿ ಬೆಳಗ್ಗೆ 6ರಿಂದಲೇ ಭಾರತ್ ಬಂದ್; ಜಿಟಿ ಮಳೆಯ ನಡುವೆಯೂ ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

ರೈತರ ಪ್ರತಿಭಟನೆ

ಹಲವು ಜಿಲ್ಲೆಗಳಲ್ಲಿ ಬೆಳಗ್ಗೆಯೇ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಟೈರ್​ಗೆ ಬೆಂಕಿ ಹಚ್ಚಿ, ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಎಲ್ಲಿಯೂ ಹಿಂಸಾಚಾರ ನಡೆಯದೇ ಶಾಂತಿಯುತವಾಗಿ ಬಂದ್ ನಡೆಯುವ ಸಾಧ್ಯತೆ ಇದೆ.

  • Share this:

    ಬೆಂಗಳೂರು(ಡಿ. 08): ಕೇಂದ್ರ ಕೃಷಿ ಕಾಯ್ದೆಗಳನ್ನ ಕೈಬಿಡುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ರಾಜ್ಯದ ಹಲವೆಡೆ ರೈತರು ಬೆಳ್ಳಂಬೆಳಗ್ಗೆಯೇ ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ. ಬಹುತೇಕ ಕನ್ನಡಪರ ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದ್​ನಲ್ಲಿ ಪಾಲ್ಗೊಂಡಿವೆ. ಬಂದ್​ನಿಂದ ಸಾಮಾನ್ಯ ಜನರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಎಲ್ಲಿಯೂ ಬಲವಂತವಾಗಿ ಬಂದ್ ಮಾಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನಜೀವನ ಯಥಾಸ್ಥಿತಿಯಲ್ಲಿದೆ. ಕೋಲಾರ, ದಾವಣಗೆರೆ ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಆರು ಗಂಟೆಗೇ ರೈತರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಕೆಲವೆಡೆ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಟೈರ್​ಗೆ ಬೆಂಕಿ ಹಚ್ಚಿ ಮತ್ತು ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತಡವಾಗಿ ಆರಂಭವಾಗುವ ನಿರೀಕ್ಷೆ ಇದೆ. ಆದರೆ, ಎಲ್ಲೂ ಕೂಡ ಜನಜೀವನ ಅಸ್ತವ್ಯಸ್ತಗೊಂಡಿಲ್ಲ. ಬೆಳಗಿನ ಮಾರುಕಟ್ಟೆ ಇತ್ಯಾದಿ ವ್ಯಾಪಾರ ವಹಿವಾಟು ಎಂದಿನಂತೆ ಇದೆ. ಜನ ಸಂಚಾರದಲ್ಲೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.


    ಬೆಂಗಳೂರಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಫ್ರೀಡಂ ಪಾರ್ಕ್, ಟೌನ್ ಹಾಲ್ ಮೊದಲಾದೆಡೆ ರೈತರು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ಸಂಚಾರದಲ್ಲಿ ಕೆಲ ಬದಲಾವಣೆಗಳನ್ನ ಮಾಡಲಾಗಿದೆ. ಪ್ರಮುಖ ಕೊಂಡಿ ರಸ್ತೆಯಾದ ನೃಪತುಂಗ ರಸ್ತೆಯಲ್ಲಿ ಇವತ್ತು ಒಂದು ದಿನದ ಮಟ್ಟಿಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಿಧಾನಸೌಧದಲ್ಲಿ ನಡೆಯುವ ಅಧಿವೇಶನಕ್ಕೆ ತೊಂದರೆ ಆಗದ ನಿಟ್ಟಿನಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆ ಮತ್ತು ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ.


    ಇದನ್ನೂ ಓದಿ: Bharat Bandh: ಶಾಂತಿಯುತ ಭಾರತ್​ ಬಂದ್​ಗೆ ಕರೆ: ಯಾವೆಲ್ಲಾ ಪಕ್ಷ, ಸಂಘಟನೆಗಳಿಂದ ಬೆಂಬಲ?


    ಕರ್ನಾಟಕ ಬಂದ್ ವೇಳೆ ಕ್ರಮ ತೆಗೆದುಕೊಳ್ಳಲಾದಂತೆ ಈ ಬಂದ್​ಗೂ ಭದ್ರತೆ ಬಿಗಿಗೊಳಿಸಲಾಗಿದೆ. ಬೆಳಗ್ಗೆ 10:30ಕ್ಕೆ ವಿವಿಧ ರೈತ ಸಂಘಟನೆಗಳಿಂದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 15 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಸಿಪಿಗಳು, ಡಿಸಿಪಿಗಳು ಮತ್ತು ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 32 ಕೆಎಸ್​​ಆರ್​ಪಿ, 30 ಸಿಎಆರ್ ತುಕಡಿಗಳನ್ನ ನಿಯೋಜಿಸಲಾಗಿದೆ. ಮೈಸೂರು ಬ್ಯಾಂಕ್ ರಸ್ತೆ, ಟೌನ್ ಹಾಲ್, ಫ್ರೀಡಂ ಪಾರ್ಕ್ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.


    ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಕೆಲವಾರು ಸಂಘಟನೆಗಳು ಇವತ್ತಿನ ಭಾರತ್ ಬಂದ್​ಗೆ ನೈತಿಕ ಬೆಂಬಲ ನೀಡಿವೆ. ಕೋವಿಡ್ ಕಾರಣದಿಂದ ಆರ್ಥಿಕ ನಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಗಳು ಈ ನಿರ್ಧಾರ ಮಾಡಿವೆ.


    ಇದನ್ನೂ ಓದಿ: ದೆಹಲಿ ಚಲೋ; ರೈತ ಹೋರಾಟವನ್ನು ಬೆಂಬಲಿಸಿ ಪ್ರಶಸ್ತಿ ಹಿಂತಿರುಗಿಸಲು ಕ್ರೀಡಾಪಟುಗಳ ರ‍್ಯಾಲಿ, ಪೊಲೀಸರಿಂದ ತಡೆ!


    ಈ ಭಾರತ್ ಬಂದ್​ನಲ್ಲಿ ಪಂಜಾಬ್ ರೈತರು ಮುಂಚೂಣಿಯಲ್ಲಿವೆ. ಕಳೆದ ಎರಡು ವಾರಗಳಿಂದಲೂ ಆ ರಾಜ್ಯದ ರೈತರು ತೀವ್ರ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಕೇಂದ್ರ ತಂದಿರುವ ಮೂರು ಕೃಷಿ ಕಾಯ್ದೆಗಳಿಗೆ ಪಂಜಾಬ್​ನಲ್ಲೇ ಅತಿ ಹೆಚ್ಚು ವಿರೋಧ ವ್ಯಕ್ತವಾಗಿದೆ. ಬೆಳೆ ವಿಚಾರದಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಎಂಎಸ್​ಪಿ ವ್ಯವಸ್ಥೆ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಕೇಂದ್ರದ ಕಾಯ್ದೆಗಳ ಬಗ್ಗೆ ಅಲ್ಲಿನ ರೈತರಿಗೆ ಅತಿ ಹೆಚ್ಚು ಆತಂಕ ಇದೆ. ಕೇಂದ್ರ ಸರ್ಕಾರ ಎಂಎಸ್​ಪಿಯನ್ನೇ ಮುಂದಿನ ದಿನಗಳಲ್ಲಿ ರದ್ದುಗೊಳಿಸಬಹುದು ಎಂಬ ಭಯ ಇದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ರೈತರು ಮೊದಲಿಂದಲೂ ಉಗ್ರ ಹೋರಾಟ ನಡೆಸುತ್ತಿದ್ದಾರೆ. ಈಗ ದೇಶದ ಇತರೆಡೆಯ ರೈತ ಸಂಘಟನೆಗಳೂ ಕೂಡ ಈ ಹೋರಾಟಕ್ಕೆ ಧುಮುಕಲು ಅಣಿಯಾಗಿ ಭಾರತ್ ಬಂದ್ ಆಚರಿಸುತ್ತಿವೆ.

    Published by:Vijayasarthy SN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು