ಬೆಂಗಳೂರು(ಡಿ. 07): ಕೊರೋನಾದಿಂದ ಆರ್ಥಿಕವಾಗಿ ಪೆಟ್ಟು ಬಿದ್ದಿರುವಾಗ ಪದೇ ಪದೇ ಬಂದ್ ನಡೆಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂಬ ಉದ್ದೇಶದಿಂದ ಕೆಲ ಸಂಘಟನೆಗಳು ನಾಳೆಯ ಭಾರತ್ ಬಂದ್ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ. ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಎಪಿಎಂಸಿ ನಾಳೆಯ ಭಾರತ್ ಬಂದ್ ಆಚರಣೆಯಿಂದ ಹಿಂದೆ ಸರಿದಿವೆ. ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ತಾನು ರೈತರ ಹೋರಾಟಕ್ಕೆ ನೈತಿಕ ಬೆಂಬಲವಷ್ಟೇ ನೀಡುವಾಗಿ ತಿಳಿಸಿದೆ.
ಆಗಾಗ ಬಂದ್ಗಳು ನಡೆಯುತ್ತಲೇ ಇವೆ. ಹೋಟೆಲ್ ಮಾಲೀಕರು ಈಗ ಯಾವುದೇ ಬಂದ್ಗೆ ಬೆಂಬಲ ನೀಡುವುದಿಲ್ಲ. ನಾಳೆ ಎಲ್ಲಾ ಹೋಟೆಲ್ಗಳು ತೆರೆದಿರುತ್ತವೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಕರವೇಯ ಒಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ತಮ್ಮ ಸಂಘಟನೆ ನಾಳೆ ಬಂದ್ನಲ್ಲಿ ಬೀದಿಗಿಳಿದು ಹೋರಾಟ ಮಾಡೋಕೆ ಆಗಲ್ಲ. ತಾವು ಮೊದಲಿಂದಲೂ ರೈತರಿಗೆ ಬೆಂಬಲ ಕೊಡುತ್ತಾ ಬಂದಿದ್ದೇವೆ. ಈ ಬಾರಿ ಹ ಓಟೆಲ್ ಉದ್ಯಮ, ಖಾಸಗಿ ಸಾರಿಗೆ ಉದ್ಯಮ ಸೇರಿದಂತೆ ಬಹಳಷ್ಟು ಮಂದಿ ನಷ್ಟದಲ್ಲಿದ್ದಾರೆ. ಪದೇ ಪದೇ ಬಂದ್ ಮಾಡೋಕೆ ಆಗಲ್ಲ. ಹೀಗಾಗಿ, ನಾಳೆಯ ಬಂದ್ಗೆ ತಾವು ನೈತಿಕ ಬೆಂಬಲವಷ್ಟೇ ಕೊಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಕಾನೂನು ಉಲ್ಲಂಘಿಸಿ ಸಣ್ಣ ವರ್ತಕರಿಗೆ ಹಾನಿ ಮಾಡಿದ ಅಮೇಜಾನ್ಗೆ 1.44 ಲಕ್ಷ ಕೋಟಿ ದಂಡ ವಿಧಿಸಿ: ಸಿಎಐಟಿ ಆಗ್ರಹ
ಬೆಂಬಲ ಕೊಡುತ್ತಿರುವ ಸಂಘಟನೆಗಳು:
ಮೊನ್ನೆಯ ಕರ್ನಾಟಕ ಬಂದ್ನ ನೇತೃತ್ವ ವಹಿಸಿದ್ದ ವಾಟಾಳ್ ನಾಗರಾಜ್ ಅವರ ಕನ್ನಡಪರ ಸಂಘಟನೆಗಳ ಒಕ್ಕೂಟ ಇದೀಗ ಭಾರತ್ ಬಂದ್ಗೂ ಬೆಂಬಲ ಘೋಷಿಸಿದೆ. ಬೀದಿ ಬದಿ ವ್ಯಾಪಾರಿಗಳ ಸಂಘ ಕೂಡ ರೈತರ ಹೋರಾಟಕ್ಕೆ ಕೈಜೋಡಿಸಿದೆ. ಶಾಲೆಗಳನ್ನ ತೆರೆಯುವ ವಿಚಾರದಲ್ಲಿ ಸರ್ಕಾರದ ನೀತಿ ಬಗ್ಗೆ ಅಸಮಾಧಾನ ಹೊಂದಿರುವ ಖಾಸಗಿ ಶಾಲೆಗಳ ಒಕ್ಕೂಟ ಕೂಡ ನಾಳೆಯ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ನಾಳೆ ಒಂದು ದಿನದ ಮಟ್ಟಿಗೆ ಆನ್ಲೈನ್ ತರಗತಿಗಳನ್ನ ಶಾಲೆಗಳು ರದ್ದು ಮಾಡಿ ಬಂದ್ನಲ್ಲಿ ಭಾಗವಹಿಸಲಿವೆ ಎಂಬ ಮಾಹಿತಿ ತಿಳಿದುಬಂದಿದೆ. ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ ಅಖಿಲ ಭಾರತ ವ್ಯಾಪಾರ ಒಕ್ಕೂಟ ಸಂಘಟನೆ ಎಐಟಿಯುಸಿ ನಾಳೆಯ ಬಂದ್ಗೆ ಸಂಪೂರ್ಣ ಬೆಂಬಲ ನೀಡಿದೆ.
ಇದನ್ನೂ ಓದಿ: Farmers Protest; ಭಾರತದ ರೈತ ಹೋರಾಟದ ಪರವಾಗಿ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿರುವ ಸಿಖ್ ಸಮುದಾಯ!
ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ದೇಶಾದ್ಯಂತ ವಿವಿಧ ರೈತ ಸಂಘಟನೆಗಳು ಡಿ. 8, ನಾಳೆ ಭಾರತ್ ಬಂದ್ಗೆ ಕರೆ ನೀಡಿವೆ. ರೈತರ ಈ ಹೋರಾಟಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳೂ ಕೂಡ ಬೆಂಬಲ ನೀಡಿವೆ. ಪಂಜಾಬ್ ರೈತರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸತತ 13 ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆಗಳನ್ನ ಮಾಡುತ್ತಾ ಬಂದಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತುಗಳ ಸಂಧಾನ ಸಭೆಗಳು ವಿಫಲವಾಗಿವೆ. ಎಂಎಸ್ಪಿಯನ್ನ ಲಿಖಿತವಾಗಿ ಅಳವಡಿಸುವ ಕೇಂದ್ರದ ಭರವಸೆ ರೈತರಿಗೆ ಸಮಾಧಾನ ತಂದಿಲ್ಲ. ಕೃಷಿ ಕಾಯ್ದೆಗಳನ್ನ ಕೈಬಿಡುವವರೆಗೂ ರೈತ ಸಂಘಟನೆಗಳ ಹೋರಾಟ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ.
ವರದಿ: ಸೌಮ್ಯ ಕಳಸ
ಇದನ್ನೂ ಓದಿ: ಡಿಸೆಂಬರ್ 8ಕ್ಕೆ ಭಾರತ್ ಬಂದ್; ರೈತ ಹೋರಾಟಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಭೇಷರತ್ ಬೆಂಬಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ