ಬೆಂಗಳೂರು: ಕೊರೊನಾ ಯಾರ್ಯಾರನ್ನೋ ಏನೇನೋ ಮಾಡಿಬಿಟ್ಟಿದೆ. ಇದೊಂಥರಾ ನೋವು ಭಯವನ್ನು ಹಿಮ್ಮೆಟಿಸಿದಂಥಾ ಸಂದರ್ಭ. ಉಸಿರು ಚೆಲ್ಲಿದ ತಮ್ಮವರಿಗೊಂದು ಕೊನೆಯ ವಿದಾಯ ಹೇಳೋಕೂ ಆಗದಂಥಾ ಕೆಟ್ಟ ಸಮಯವನ್ನು ಜಗತ್ತು ನೋಡುತ್ತಿದೆ. ಆದ್ರೆ ಇವೆಲ್ಲದರ ನಡುವೆ ಬೆಂಗಳೂರಿನ ಸುಮಾರು 10 ಜನ ಸ್ವಯಂಸೇವಕರ ಗುಂಪು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆಲ್ಲಾ ಒಂದಷ್ಟು ಸಮಯ ವಿರಾಮ ನೀಡಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಟೊಂಕಕಟ್ಟಿ ನಿಂತಿದೆ. ಇವರು ಬೆಂಗಳೂರಿನ ವೀರಬಾಹುಗಳು.
ಆರಂಭದಲ್ಲಿ ಇವರು ಕೊರೊನಾ ಶುರುವಾದಾಗ ಸ್ಮಶಾನಗಳಲ್ಲಿ, ಚಿತಾಗಾರಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಪಿಪಿಇ ಕಿಟ್ ಕೊಡೋಕೆ ಶುರುಮಾಡಿದ್ರು. ಆದ್ರೆ ಅಲ್ಲಿನ ವಿಪರೀತ ಪರಿಸ್ಥಿತಿ, ಸತ್ತವರ ಕುಟುಂಬದವರ ದುಸ್ಥಿತಿ ಎಲ್ಲವನ್ನೂ ಕಂಡು ತಾವೇ ಕೆಲಸ ಮಾಡಲು ಮುಂದೆ ಬಂದಿಬಿಟ್ರು. ಈಗ ಇವರು ಅದೆಷ್ಟು ಚಿರಪಚಿತರಾಗಿದ್ದಾರೆ ಅಂದ್ರೆ ಯಾವುದಾದರೂ ಸೋಂಕಿತರ ಮೃತದೇಹದ ಅಂತ್ಯಸಂಸ್ಕಾರ ಮಾಡಬೇಕಿದ್ದರೆ ಅನೇಕ ಆಸ್ಪತ್ರೆಗಳು, ಸಾರ್ವಜನಿಕರು ಕೆಲವೊಮ್ಮೆ 108 ಆಂಬ್ಯುಲೆನ್ಸ್ನವರೂ ಇವರಿಗೇ ಕರೆ ಮಾಡುತ್ತಾರೆ.
ಮೊದಲು ಶವಾಗಾರ, ಆಸ್ಪತ್ರೆ ಅಥವಾ ಮನೆ ಮೃತದೇಹ ಎಲ್ಲಿದೆಯೋ ಅಲ್ಲಿಗೆ ತೆರಳುತ್ತಾರೆ. ಸೋಂಕಿನಿಂದ ವ್ಯಕ್ತಿ ಮೃತಪಟ್ಟಾಗ ಅನೇಕ ಬಾರಿ ಕುಟುಂಬಸ್ಥರು ಜೊತೆಯಲ್ಲಿ ಇರುವುದಿಲ್ಲ. ಕೆಲವೊಮ್ಮೆ ಕುಟುಂಬಸ್ಥರಿಗೆಲ್ಲಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಕುಟುಂಬಸ್ಥರು ಜೊತೆಗಿದ್ದ ಸಂದರ್ಭದಲ್ಲಿ ಅವರೂ ಭಯದಿಂದ ದೂರವೇ ಉಳಿದಿರುತ್ತಾರೆ. ಆಗೆಲ್ಲಾ ಖುದ್ದು ತಾವು ಪಿಪಿಇ, ಫೇಸ್ಶೀಲ್ಡ್ ಧರಿಸಿ ಡೆತ್ ಸರ್ಟಿಫಿಕೇಟ್ ಮುಂತಾದ ದಾಖಲೆಗಳನ್ನು ಸಂಗ್ರಹಿಸಿ, ಮೃತದೇಹವನ್ನು ಕುಟುಂಬಸ್ಥರ ಆಯ್ಕೆಯಂತೆ ಚಿತಾಗಾರಕ್ಕೆ ಅಥವಾ ಸ್ಮಶಾನಕ್ಕೆ ಕೊಂಡೊಯ್ಯುತ್ತಾರೆ.
ಚಿತಾಗಾರದಲ್ಲಿ ಮೃತದೇಹವನ್ನು ಕೊನೆಯ ಬಾರಿಗೆ ಒಳಗೆ ತಳ್ಳುವವರು ಇವರೇ…ಸ್ಮಶಾನದಲ್ಲಿ ಕೊನೆಯ ಹಿಡಿಯ ಮಣ್ಣು ಹಾಕುವವರೂ ಇವರೇ. ಗೌರವಯುತವಾಗಿ ಒಂದಿಷ್ಟೂ ಬೇಸರಿಸಿಕೊಳ್ಳದೆ ಅಪರಿಚಿತರ ಅಂತ್ಯಕ್ರಿಯೆಯನ್ನು ಮಾಡಿ ಮುಗಿಸುತ್ತಾರಿವರು.
ಅಂದ್ಹಾಗೆ ಈ ಗುಂಪಿನಲ್ಲಿರುವ ಬಹುಪಾಲು ಸ್ವಯಂಸೇವಕರು ಮುಸಲ್ಮಾನರು. ಈಗ ರಂಜಾನ್ ತಿಂಗಳ ಉಪವಾಸದಲ್ಲಿದ್ದಾರೆ. ಇದೂ ಒಂದು ಸೇವೆ ಎಂದು ನಂಬಿರುವ ಇವರೆಲ್ಲಾ ಕೊರೊನಾ ಆರ್ಭ ಶುರುವಾದಾಗಿನಿಂದ ಈ ಕೆಲಸ ಮಾಡ್ತಿದ್ದಾರೆ. ಇಡೀ ದಿನ ಉಪವಾಸ ಇರೋದ್ರಿಂದ ಸಂಜೆಯ ವೇಳೆಗೆ ಅನೇಕರಿಗೆ ವಿಪರೀತ ಸುಸ್ತಾಗಿರುತ್ತದೆ. ಆದರೂ ಒಂದಿಷ್ಟೂ ಬೇಸರಿಸಿಕೊಳ್ಳದೇ ತಮ್ಮ ಕೆಲಸವನ್ನು ಅದೇ ಶ್ರದ್ಧೆಯಿಂದ ಮುಂದುವರೆಸಿದ್ದಾರಿವರು. ಒಂದು ದಿನಕ್ಕೆ ಕನಿಷ್ಠ 20-30 ಮೃತದೇಹಗಳ ಅಂತ್ಯಸಂಸ್ಕಾರ ಮಾಡುತ್ತಾರೆ ಈ ಆಪದ್ಭಾಂಧವರು.
“ಬಹುಶಃ ಇನ್ನು ಒಂದೆರಡು ವಾರಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಬಹುದು. ಆಗ ನಾವೆಲ್ಲಾ ನಮ್ಮ ನಮ್ಮ ಕೆಲಸಗಳಿಗೆ ಮರಳುತ್ತೇವೆ. ಈ ಕೆಲಸ ಆರಂಭಿಸಿದ್ದು ನಾವಾದರೂ ಈಗ ಬೆಂಗಳೂರಿನ ಅನೇಕ ಭಾಗಗಳಲ್ಲಿ ಕೆಲವು ಗುಂಪುಗಳು ಇದನ್ನು ಮುಂದುವರೆಸಿಕೊಂಡು ಹೋಗುತ್ತಿವೆ. ಕೆಲವು ಧರ್ಮದವರೂ ಇಂಥಾ ಒಂದೊಂದು ಗುಂಪು ಮಾಡಿಕೊಂಡಿದ್ದಾರೆ. ಒಂದು ವೇಳೆ ನಮಗೆ ಹೆಚ್ಚಿನ ದೇಹಗಳ ಅಂತ್ಯಸಂಸ್ಕಾರ ಮಾಡುವುದಿದ್ದರೆ ಆಗ ನಾವು ಇವರೊಂದಿಗೆ ಜವಾಬ್ದಾರಿ ಹಂಚಿಕೊಳ್ಳುತ್ತೇವೆ” ಎನ್ನುತ್ತಾರೆ ಅಲ್ ಅನ್ಸಾರ್ ಗುಂಪಿನ ಸದಸ್ಯ ಹರುಣ್. ಮರ್ಸಿ ಏಂಜೆಲ್ಸ್ ಎನ್ನುವ ಮತ್ತೊಂದು ಸ್ವಯಂಸೇವಕರ ಗುಂಪು ಕೂಡಾ ಬೆಂಗಳೂರಿನ ಅನೇಕ ಭಾಗಗಳಲ್ಲಿ ಈ ಕೆಲಸ ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ