ಬೆಂಗಳೂರು: ಕೊರೋನಾ ಎರಡನೇ ಅಲೆಯ ಅಬ್ಬರ ತೀವ್ರತರದಲ್ಲಿ ಹರಡುತ್ತಿದ್ದು, ಅಂಕೆಗೆ ಸಿಗದ ರೀತಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ರಾಜ್ಯದಲ್ಲಿ ದಿನಕ್ಕೆ 40 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಇದರಲ್ಲಿ ಅರ್ಧದಷ್ಟು ಪ್ರಕರಣಗಳು ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗುತ್ತಿವೆ. ಇನ್ನು ಸಾವಿನ ಪ್ರಮಾಣದಲ್ಲೂ ಸಹ ರಾಜಧಾನಿ ಮೊದಲ ಸ್ಥಾನದಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ (ಫನಾ) ಎಚ್ಚರಿಕೆ ನೀಡಿದೆ.!
ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ಪ್ರಸನ್ನ ಅವರು ಮಾತನಾಡಿ, ಆಕ್ಸಿಜನ್ ಅಭಾವದಿಂದ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವುದಾಗಿ ಹೇಳಿದೆ. ನಮ್ಮ ರಾಜ್ಯದಲ್ಲಿ 700 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪತಿ ಆಗುತ್ತಿದೆ. ಆದರೆ ಮೇ ತಿಂಗಳಲ್ಲಿ ಈ ಲೆಕ್ಕಕ್ಕೂ ಮೀರಿ ಆಕ್ಸಿಜನ್ ಬೇಕಾಗಬಹುದು. ಮೇ ತಿಂಗಳಲ್ಲಿ ಸದ್ಯಕ್ಕೆ ಇರುವುದಕ್ಕಿಂತ 1,400 ಮೆಟ್ರಿಕ್ ಟನ್ ಆಕ್ಸಿಜನ್ ಹೆಚ್ಚುವರಿ ಅಗತ್ಯ ಬೀಳಬಹುದು ಎಂಬ ಆಘಾತಕಾರಿ ವಿಷಯ ಹೇಳಿದ್ದಾರೆ.
ಇದನ್ನು ಓದಿ: Corona Vaccine | ದೆಹಲಿಯಲ್ಲಿ ಕೊರೋನಾ ಲಸಿಕೆ ಇಲ್ಲ; ಕೇಂದ್ರ ಸರ್ಕಾರ ಕೊಟ್ಟರಷ್ಟೇ ಮೇ 1ರಿಂದ ಜನರಿಗೆ ಲಸಿಕೆ: ಕೇಜ್ರಿವಾಲ್
ಸದ್ಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಸೋಂಕಿತರು ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೂ 1,400 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಎದುರಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಆಕ್ಸಿಜನ್ ಜೊತೆಗೆ ರೆಮಿಡಿಸ್ವಿರ್ ಅಭಾವ ಕೂಡ ಇದೆ. ಪ್ರತಿದಿನ 35 ಸಾವಿರ ಸೋಂಕಿತರು ಮೇ ತಿಂಗಳಲ್ಲಿ ಪತ್ತೆಯಾಗಬಹುದು. ಈ 35 ಸಾವಿರದ ಪೈಕಿ 30 ಸಾವಿರ ಸೋಂಕಿತರಿಗೆ ರೆಮಿಡಿಸ್ವಿರ್ ಅಗತ್ಯ ಬೀಳುತ್ತೆ. ಕೇಂದ್ರ ಸರ್ಕಾರ ತಿಂಗಳಿಗೆ ಒಂದು ಲಕ್ಷ ವೈಲ್ ರೆಮಿಡಿಸ್ವಿರ್ ಪೂರೈಕೆ ಮಾಡುವ ಭರವಸೆ ಕೊಟ್ಟಿದೆ. ಆದರೆ ಪ್ರತಿ ದಿನ 30 ಸಾವಿರ ರೆಮಿಡಿಸ್ವಿರ್ ಅಗತ್ಯ ಬಿದ್ದರೆ, ಸೋಂಕಿತರು ಮತ್ತಷ್ಟು ಕಂಗೆಡಲಿದ್ದಾರೆ. ಹೀಗಾಗಿ ಸರ್ಕಾರ ಕೊಡುವುದಾಗಿ ಹೇಳಿದ ಒಂದು ಲಕ್ಷ ವೈಲ್ ರೆಮಿಡಿಸ್ವಿರ್ ಯಾವ ಮೂಲೆಗೂ ಸಾಕಾಗುವುದಿಲ್ಲ. ಸರ್ಕಾರ ಅಗತ್ಯತೆಗೆ ತಕ್ಕಂತೆ ರೆಮಿಡಿಸ್ವಿರ್ ಪೂರೈಸದಿದ್ದರೆ ಖಾಸಗಿ ಆಸ್ಪತ್ರೆಗಳು ಔಷಧಿ ಎಲ್ಲಿಂದ ತರುವುದು..? ಸೂಕ್ತ ರೀತಿಯಲ್ಲಿ ವೈದ್ಯಕೀಯ ಬೇಡಿಕೆಗಳು ಈಡೇರದಿದ್ದರೆ ಸೋಂಕಿತರ ಮಾರಣ ಹೋಮ ನಡೆಯಲಿದೆ ಎಂದು ನ್ಯೂಸ್ 18 ಕನ್ನಡಕ್ಕೆ ಫನಾ ಅಧ್ಯಕ್ಷ ಡಾ. ಪ್ರಸನ್ನ ಆತಂಕಕಾರಿ ವಿಷಯ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ