ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಸಿಂದಗಿಯಲ್ಲಿ(Sindagi) ಬಿಜೆಪಿ (BJP) ಜಯ ಗಳಿಸಿದ್ದರೆ ಹಾನಗಲ್ನಲ್ಲಿ(Hangal) ಕಾಂಗ್ರೆಸ್(Congress) ಗೆಲುವು ಸಾಧಿಸಿದೆ. ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸಂತಸ ವ್ಯಕ್ತಪಡಿಸಿದರು. ಎರಡೂ ಕ್ಷೇತ್ರಗಳಲ್ಲಿ ಸೋಲನ್ನು ಕಂಡಿರುವ ಜೆಡಿಎಸ್(JDS) ವಿರುದ್ಧ ವಾಗ್ದಾಳಿ ನಡೆಸಿದರು. ಹಾನಗಲ್ ಕ್ಷೇತ್ರದ ಮತದಾರರಿಗೆ ಅಭಿನಂದನೆ, ಸಿಂದಗಿ ಕ್ಷೇತ್ರದ ಮತದಾರರಿಗೂ ಅಭಿನಂದನೆ. ಸಿಂದಗಿಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ, ಅಲ್ಲಿ ತೀರ್ವ ಸ್ಪರ್ಧೆಯಾಗುತ್ತೆ ಎಂದುಕೊಂಡಿದ್ದೆವು. ದೊಡ್ಡ ಅಂತರದಲ್ಲಿ ಸೋತಿದ್ದೇವೆ. ಆದರೆ ಕಳೆದ ಬಾರಿ ನಾವು ಮೂರನೇ ಸ್ಥಾನದಲ್ಲಿದ್ದೆವು, ಈಗ ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಸೋಲು ಸೋಲೇ ಒಪ್ಪಿಕೊಳ್ಳಬೇಕು. ನಾನು ಮೊದಲೆರಡು ದಿನ ಪ್ರಚಾರ ಮಾಡಿದ್ದೆ, ಅಶೋಕ್ ಮನಗೂಳಿ ಜೆಡಿಎಸ್ ನಿಂದ ಬಂದವರು. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೆವು. ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಗೆ ಹೊಂದಾಣಿಕೆಯಾಗಿಲ್ಲ, ಅವರ ಜೊತೆ ಬಂದ ಜೆಡಿಎಸ್ ಕಾರ್ಯಕರ್ತರ ಜೊತೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿಎಂ ಬೊಮ್ಮಾಯಿ ತಮ್ಮ ಪಕ್ಕದ ಕ್ಷೇತ್ರವನ್ನೇ ಸೋತಿದ್ದಾರೆ
ಹಾನಗಲ್ ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ, 10 ರಿಂದ 13 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು. ನಮ್ಮ ಅಭ್ಯರ್ಥಿ ಬಗ್ಗೆ ಒಳ್ಳೆ ಅಭಿಪ್ರಾಯವಿತ್ತು, ಜನರಲ್ಲಿ ಮಾನೆ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಒಂದು ವಾರ ಕ್ಯಾಂಪೇನ್ ಮಾಡಿದ್ರು. ಅವರದ್ದು ಶಿಗ್ಗಾಂವ್, ಅದರ ಪಕ್ಕದಲ್ಲಿ ಹಾನಗಲ್ ಕ್ಷೇತ್ರ. ಅಧಿಕಾರ ದುರುಪಯೋಗ ಪಡಿಸಿಕೊಂಡು ಹಣ ಹಂಚಿದ್ರು, ಆದರೂ ಅವರು ಅಲ್ಲಿ ಸೋತಿದ್ದಾರೆ. ಜನ ಇವತ್ತು ಬದಲಾವಣೆ ಬಯಸಿದ್ದಾರೆ, ಈ ಫಲಿತಾಂಶವನ್ನು ನಾನು ಎಲೆಕ್ಷನ್ ದಿಕ್ಸೂಚಿ ಅಂತ ನಾನು ಹೇಳಲ್ಲ. ಆದರೆ ಜನರ ಎಚ್ಚರಿಕೆಯ ಗಂಟೆ ಅಂತ ಹೇಳ್ತೇನೆ, ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ
ಜೆಡಿಎಸ್ ಠೇವಣಿ ಕಳೆದುಕೊಂಡ ವಿಚಾರವಾಗಿ ವ್ಯಂಗ್ಯವಾಡಿದ ಸಿದ್ದರಾಮಯ್ಯ, ನಾನು ಮೊದಲೇ ಹೇಳಿದ್ದೆ. ಕೋಮುವಾದಿ ಪಕ್ಷದ ಜೊತೆ ಸೇರಿದ್ದಾರೆಂದು, ಈಗ ಎರಡೂ ಕಡೆ ಡೆಪಾಸಿಟ್ ಕಳೆದುಕೊಂಡಿದ್ದಾರೆ. ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಮುಂದಿನ ಚುನಾವಣೆಯಲ್ಲೂ ಇದೇ ಆಗಲಿದೆ ಎಂದು ಭವಿಷ್ಯ ನುಡಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಮಗ ಆ್ಯಕ್ಟಿವ್ ಆಗಿ ಕ್ಯಾಂಪೇನ್ ಮಾಡಿದ್ರು. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಎಫೆಕ್ಟ್ ಆಗಿಲ್ಲ. ಸಿಂದಗಿಯಲ್ಲಿ ಅಭ್ಯರ್ಥಿ ಸ್ಟ್ರಾಂಗ್ ಇದ್ದರು. ಆದರೆ ಕಾರ್ಯಕರ್ತರ ಹೊಂದಾಣಿಕೆ ಇರಲಿಲ್ಲ, ಹಾಗಂತ ಅಲ್ಲಿ ಕಾರ್ಯಕರ್ತರು ಹೇಳ್ತಿದ್ರು ಎಂದರು.
ಸಿಎಂ ಆಗಲ್ಲ ಅಂದರೆ ಶಾಸಕರು ಒಪ್ಪಲ್ಲ
ಬಿಜೆಪಿ ಅವನತಿ ಶುರುವಾಗಿದೆ, 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಿಎಂ ಯಾರು ಅನ್ನೋದು ಹೈಕಮಾಂಡ್ ನಿರ್ಧರಿಸುತ್ತೆ. ನಾನು ಸಿಎಂ ಆಗುವ ಆಕಾಂಕ್ಷೆ ಬಿಟ್ಟುಬಿಟ್ಟಿದ್ದೇನೆ, ಆದರೆ ಶಾಸಕರು ಒಪ್ಪಬೇಕಲ್ಲ ಎಂದರು.
ಬಿಟ್ಕಾಯಿನ್ ದಂಧೆಯಲ್ಲಿ ರಾಜಕಾರಣಿಗಳಿದ್ದಾರೆ
ಇನ್ನು ಬಿಟ್ ಕಾಯಿನ್ ದಂಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶ್ರೀಕೃಷ್ಣನನ್ನ ಅರೆಸ್ಟ್ ಮಾಡಿದ್ರಲ್ಲಾ. ಅವರು ಜನರ ಮುಂದೆ ದಾಖಲೆ ಇಡಲಿ, ಚಾರ್ಜ್ ಶೀಟ್ ಹಾಕಿದ್ದಾರೆ ಅದರ ದಾಖಲೆ ಇಡಲಿ. ಅದರಲ್ಲಿ ಯಾರ್ಯಾರು ಇದ್ದಾರೆ ಹೇಳಲಿ ಎಂದು ಸವಾಲೆಸೆದರು. ಬೇರೆಯವರು ಇದ್ದರೂ ಹೇಳಲಿ, ಬಿಜೆಪಿದ್ದು ಇದ್ದರೂ ಹೇಳಲಿ. ಮಾಹಿತಿ ಇರೋದಕ್ಕೆ ಸಾಕ್ಷಿ ಕೊಡಬೇಕಿಲ್ಲ, ಅವರ ಬಳಿ ಅಧಿಕಾರ ಇದ್ಯಲ್ಲಾ ಕೊಡಿ. ಗಾಳಿಪಟ ಅಂತ ಹೇಳ್ತಾರಲ್ಲ ಇಡಿಗೆ ಯಾಕೆ ಕೊಟ್ರು. ಆಯ್ತಪ್ಪ ನಾವಿದ್ದಾಗ ಅಲಿಗೇಶನ್ ಬರಲಿಲ್ಲ, ಈಗ ಬಂದಿದೆ ನೀವು ತನಿಖೆ ಮಾಡಿಸಿ. ಯಾಕೆ ಇಡಿಗೆ ನೀವು ಕೊಟ್ಟಿದ್ದು, ಇಬ್ಬರು ರಾಜಕಾರಣಿಗಳಿದ್ದಾರೆ ಅನ್ನೋದು ಸತ್ಯ. ಯಾವ ಪಕ್ಷದವರು ಅನ್ನೋದು ಗೊತ್ತಿಲ್ಲ. ನೀವು ತನಿಖೆ ಮಾಡಿ ಸತ್ಯ ಪತ್ತೆ ಹಚ್ಚಿ. ಸತ್ಯ ಬಹಿರಂಗವಾದರೆ ಸರ್ಕಾರಕ್ಕೆ ಸಂಕಷ್ಟವಲ್ಲವೇ, ಅದಕ್ಕೆ ನಾನು ಸರ್ಕಾರಕ್ಕೆ ಸಂಕಷ್ಟ ಎಂದಿದ್ದು. ಸತ್ಯ ಹೊರಗೆ ಬರದೆ ಹೋದರೆ ರಕ್ಷಣೆ ಮಾಡಿದಂತೆ, ಸರ್ಕಾರ ತಪ್ಪಿತಸ್ಥರನ್ನ ರಕ್ಷಣೆ ಮಾಡಿದಂತೆ ಎಂದು ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ