ಬೆಂಗಳೂರು (ಜೂ. 8): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ನಡುವೆ ಒಡುಕು ಮೂಡಿಸಿ, ಎತ್ತಿಕಟ್ಟುವ ಕೆಲಸ ಮಾಡಿದ್ದು, ಸಂಸದ ಪ್ರತಾಪ್ ಸಿಂಹ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಹಾದಿ ರಂಪ ಬೀದಿ ರಂಪ ಮಾಡುವಷ್ಟು ಪವರ್ ಕೊಟ್ಟವರು ಯಾರು ಎಂದು ಇದೇ ವೇಳೆ ಪ್ರಶ್ನಿಸಿದರು. ಇಬ್ಬರು ಐಎಎಸ್ ಅಧಿಕಾರಿಗಳ ನಡುವೆ ಜಟಾಪಟಿ ತಂದಿಟ್ಟಿದ್ದು, ಅದೆಂತದೋ ಸಿಂಹ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಜೆಡಿಎಸ್ ನಾಯಕ ಸಾರಾ ಮಹೇಶ್ ಎಂದು ಆರೋಪಿಸಿದರು. ಬಿಜೆಪಿಯವರಿಗೆ ರೋಹಿಣಿ ಸಿಂಧೂರಿಯನ್ನು ತೆಗೆದು ಶಿಲ್ಪಾ ಅವರನ್ನು ಡಿಡಿ ಮಾಡಬೇಕು ಎಂದು ಕೊಂಡಿದ್ದರು. ಇದೇ ಕಾರಣ ಈ ರೀತಿ ಅಧಿಕಾರಿಗಳು ಆರೋಪ- ಪ್ರತ್ಯಾರೋಪ ನಡೆಸುವಂತೆ ಕುಮ್ಮಕ್ಕು ನೀಡಿದರು ಎಂದು ಟೀಕಿಸಿದರು.
ಅಧಿಕಾರಿಗಳು ಮಾಧ್ಯಮಗಳ ಮುಂದೆ ಮಾತನಾಡುವುದಕ್ಕೆ ಇವರಿಗೆ ಶಕ್ತಿ ತುಂಬಿದವರು ಯಾರು? ಈ ರೀತಿ ಮಾತನಾಡಿದಾಗ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು, ಸಂಪೂರ್ಣ ಆಡಳಿತವೇ ಕುಸಿದ ಕಾರಣ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ವರ್ಗಾವಣೆ ತಪ್ಪಿಗೆ ಶಿಕ್ಷೆ ಅಲ್ಲ ಎಂದರು.
ರೋಹಿಣಿ ಸಿಂಧೂರಿ ಭೂಮಿ ಹಗರಣದ ಬಗ್ಗೆ ತನಿಖೆ ಮಾಡಿದ ಕಾರಣದಿಂದಲೇ ತಮ್ಮ ವರ್ಗಾವಣೆ ಆಗಿದೆ ಎಂದಿದ್ದಾರೆ. ಈ ಬಗ್ಗೆ ತನಿಖಾಗಬೇಕು. ಸ್ವತಂತ್ರ ಸಂಸ್ಥೆ ಮೂಲಕ ಈ ಕುರಿತು ತನಿಖೆ ಆಗಬೇಕು. ಅಧಿಕಾರಿಯನ್ನು ಬಳಸಿಕೊಂಡು ಕೆಲ ಅಕ್ರಮಗಳು ನಡೆದಿದೆ. ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಹಲವು ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾದ ಚಾಮರಾಜನಗರ; ಗ್ರಾಮದಲ್ಲೂ ಆರಂಭವಾಯ್ತು ಕೇರ್ ಸೆಂಟರ್
ಚುನಾಯಿತ ಸರ್ಕಾರ ಬಿಗಿ ಆಡಳಿತ ಇಲ್ಲದ ಕಾರಣ ಈ ರೀತಿಯ ವರ್ತನೆಗಳು ಕಂಡು ಬಂದಿದೆ. ಒಬ್ಬ ಸಂಸದರು ಅವರದೇ ಸರ್ಕಾರದ ಅಧಿಕಾರಿಗಳನ್ನು ಬೆಂಬಲಿಸುವುದು, ತೆಗಳುವ ಕೆಲಸ ಮಾಡುವುದು ಸರಿಯಲ್ಲ. ಆತ ಮೊದಲಿಗೆ ರೋಹಿಣಿ ಸಿಂಧೂರಿ ಬೆಂಬಲಿಸಿದ, ಬಳಿಕ ಶಿಲ್ಪಾ ನಾಗ್ ಹೊಗಳಿದ. ಚುನಾಯಿತ ಅಧಿಕಾರಿ ಜನರಿಗಾಗಿ ಕೆಲಸ ಮಾಡಬೇಕು. ಅಧಿಕಾರಿಗಳ ಕೆಲಸದಲ್ಲಿ ಹಸ್ತಕ್ಷೇಪ ನಡೆಸಬಾರದು. ಕ್ಷೇತ್ರದ ಸಂಸದರಾಗಿ ಅಧಿಕಾರಿಗಳ ನಡುವೆ ಹೊಂದಾಣಿಕೆ ನಡೆಸಬೇಕೆ ಹೊರತು ಈ ರೀತಿ ಎತ್ತಿಕಟ್ಟುವ ಕಾರ್ಯ ನಡೆಸಬಾರದು ಎಂದು ಇದೇ ವೇಳೆ ಅವರು ಮೈಸೂರು ಸಂಸದರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೈಸೂರಿನಲ್ಲಿ ಅಧಿಕಾರಿಗಳು ನಡುವೆ ಮೂಡಿದ್ದ ಜಟಾಪಟಿ ಸರ್ಕಾರಕ್ಕೆ ಸಾಕಷ್ಟು ಮುಜುಗರ ಕೂಡ ತಂದೊಟ್ಟಿತು. ಕೋವಿಡ್ ನಿರ್ವಹಣೆ ವಿಚಾರ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಅವರ ನಡೆಗೆ ಬೇಸತ್ತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪಾಲಿಕೆ ಸದಸ್ಯರು ಶಿಲ್ಪಾನಾಗ್ಬೆ ಬೆಂಬಲ ವ್ಯಕ್ತಪಡಿಸಿದ ರೋಹಿಣಿ ಸಿಂಧೂರಿ ವಿರುದ್ಧ ದೂರಿದರು. ಆದರೆ, ರೋಹಿಣಿ ಸಿಂಧೂರಿ ಮಾತ್ರ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಪ್ರತ್ಯುತ್ತರ ನೀಡಿದ್ದರು. ಈ ಇಬ್ಬರು ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಅಂತ್ಯ ಹಾಡಲು ಮುಂದಾದ ಸರ್ಕಾರ ಶನಿವಾರ ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ