ಬೆಂಗಳೂರು: ಕಳೆದ ಕೆಲ ದಿನಗಳಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ವಾಕ್ಸಮರ ವೈಯಕ್ತಿಕ ದಾಳಿಗೆ ಇಳಿದಿದೆ. ಸುಮಲತಾ ಬಗೆಗಿನ ಕುಮಾರಸ್ವಾಮಿ ಹೇಳಿಕೆಗಳ ವಿರುದ್ಧ ಇಂದು ದಿವಂಗತ ಅಂಬರೀಶ್ ಅವರ ಆಪ್ತ ಬಳಗ ಸಿಡಿದೆದ್ದಿದೆ. ಅಂಬಿ ಕುಟುಂಬದ ಆಪ್ತ ವಲಯದಲ್ಲಿರುವ ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಎಚ್ಡಿಕೆ ವಿರುದ್ಧ ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆ ವೇಳೆ ನನ್ನ ಮತ್ತು ಸುಮಲತಾರ ಅಶ್ಲೀಲ ವಿಡಿಯೋ ಸೃಷ್ಟಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಎಂದು ರಾಕ್ಲೈನ್ ಆರೋಪಿಸಿದರು.
'ನನ್ನ ಮತ್ತು ಸುಮಲತಾರ ಮೇಲೆ ವೈಯಕ್ತಿಕ ದಾಳಿಗೆ ಕುಮಾರಸ್ವಾಮಿ ಇಳಿದಿದ್ದರು. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಮಲತಾರ ತೇಜೋವಧೆ ಮಾಡುವ ಕುತಂತ್ರ ಮಾಡಿದ್ದರು. ಮಂಡ್ಯ ಲೋಕಸಭೆ ಚುನಾವಣೆ ವೇಳೆ ಪ್ರಚಾರಕ್ಕಾಗಿ ನಾವೆಲ್ಲ ಒಂದೇ ಹೋಟೆಲ್ನಲ್ಲಿ ತಂಗಿದ್ದೆವು. ಹೋಟೆಲ್ನಲ್ಲಿ ನಾನು, ಸುಮಲತಾ ಓಡಾಡಿರುವ ಸಿಸಿಟಿವಿ ದೃಶ್ಯವನ್ನು ಹೋಟೆಲ್ ಸಿಬ್ಬಂದಿಯಿಂದ ಪಡೆದುಕೊಂಡಿದ್ದಾರೆ. ನಾನು ಸುಮಲತಾ ಅವರ ಹೆಗಲ ಮೇಲೆ ಕೈ ಹಾಕಿರುವಂತೆ ವಿಡಿಯೋವನ್ನು ತಿರುಚಿದ್ದರಂತೆ. ಇಬ್ಬರೂ ಒಂದೇ ಕೊಠಡಿಗೆ ಹೋಗುತ್ತಿರುವ ಹಾಗೇ ವಿಡಿಯೋವನ್ನು ಸೃಷ್ಟಿಸಿದ್ದರು' ಎಂದು ರಾಕ್ಲೈನ್ ಆರೋಪಿಸಿದ್ದಾರೆ.
'ವಿಡಿಯೋ ತಿರುಚುವಿಕೆ ಬಗ್ಗೆ ಕುಮಾರಸ್ವಾಮಿ ಅವರ ವಾಹಿನಿಯ ಸಿಬ್ಬಂದಿಯೇ ನನಗೆ ಮಾಹಿತಿ ನೀಡಿದರು. ಅಂಬಿ ಅಭಿಮಾನಿಯಾದ ಆತ ಕುಮಾರಸ್ವಾಮಿ ಮಾಡುವ ಅನ್ಯಾಯವನ್ನು ಸಹಿಸದೇ ನನಗೆ ಬಂದು ಹೇಳಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೀಳುಮಟ್ಟದ ವೈಯಕ್ತಿಕ ದಾಳಿಗೆ ಇಳಿದಿದ್ದರು' ಎಂದು ರಾಕ್ಲೈನ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಡಿದೆದ್ದ ಅಂಬಿ ಬಳಗ: ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ, HDK ವಿರುದ್ಧ ರಾಕ್ಲೈನ್ ಕೆಂಡ!
ನಾನು ಅಂಬರೀಶ್ ಅವರು ಕುಟುಂಬಕ್ಕೆ ಹಿಂದಿನಿಂದಲೂ ಆಪ್ತ. ಅವರು ಇದ್ದಾಗ ಮಾತ್ರವಲ್ಲ, ಅಂಬಿ ಅವರು ಇಲ್ಲದಾಗಲೂ ನಾನು ಅವರ ಕುಟುಂಬಕ್ಕೆ ಆಪ್ತನಾಗಿದ್ದೇನೆ. ಸುಮಲತಾ ಅವರು ಚುನಾವಣೆಗೆ ನಿಂತಾಗ ನಾನು, ದೊಡ್ಡಣ್ಣ, ದರ್ಶನ್, ಯಶ್ ಸೇರಿದಂತೆ ಹಲವರು ಬೆಂಬಲಿಸಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ಸುಮಲತಾ, ಅಂಬಿ ಪುತ್ರ ಅಭಿಷೇಕ್ಗೆ ಆಪ್ತವಾಗಿರೋದನ್ನೇ ಕೆಟ್ಟದಾಗಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಇದನ್ನೂ ಓದಿ: ನನ್ನ ಪ್ರೀತಿಯ ಅಂಬಿಗೆ ಅಂದು ಕುಮಾರಸ್ವಾಮಿ ಮಾಡಿದ ಅವಮಾನವನ್ನು ಎಂದಿಗೂ ಮರೆಯಲ್ಲ : ನಟ ದೊಡ್ಡಣ್ಣ
ಕುಮಾರಸ್ವಾಮಿ ಆಡಿಯೋ ಬಿಡುತ್ತೇನೆ, ವಿಡಿಯೋ ರಿಲೀಸ್ ಮಾಡುತ್ತೇನೆ ಎನ್ನುವುದು ಇದೇ ಮೊದಲಲ್ಲ. ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಯಾವುದೇ ಆಡಿಯೋ, ವಿಡಿಯೋಗೆ ನಾನಾಗಲಿ, ಸುಮಲತಾ ಅವರಾಗಲಿ ಹೆದರುವುದಿಲ್ಲ. ಸುಮಲತಾರನ್ನು ಕಾಯಲು ಅಂಬಿ ಅಭಿಮಾನಿಗಳಿದ್ದಾರೆ. ಅವರು ಏನು ಬೇಕಾದರೂ ಮಾಡಲಿ ಎಂದು ರಾಕ್ಲೈನ್ ಸವಾಲೆಸೆದರು. ಇನ್ನು ಇಂದು ಮಾಜಿ ಸಿಎಂ ಎಚ್ಡಿಕೆ ವಿರುದ್ಧ ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ