ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ದಿನೇ ದಿನೇ ಬಿರುಸಾಗುತ್ತಿದೆ. ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡು ಎಚ್.ಡಿ.ದೇವೇಗೌಡರು, ಸೋದರ ರೇವಣ್ಣ ಹೇಳಿಕೆ ಬೆನ್ನಲ್ಲೇ ಸುಮಲತಾ ಆಪ್ತ ವಲಯವೂ ಸಿಡಿದೆದ್ದಿದೆ. ಸಮಲತಾರನ್ನು ಬೆಂಬಲಿಸಿ ಇಂದು ಕನ್ನಡ ಸಿನಿಮಾ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಮಾತನಾಡಿದರು. ಎಚ್ಡಿಕೆ ವಿರುದ್ಧ ನೇರವಾಗಿ ರಾಕ್ಲೈನ್ ಆಕ್ರೋಶ ವ್ಯಕ್ತಪಡಿಸಿ ಹಲವು ವಿಷಯಗಳನ್ನು ಬಹಿರಂಗಪಡಿಸಿದರು.
ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ?
ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬಲ್ ಸ್ಟಾರ್ ಇದ್ದಾನೆ. ಅಂಬಿ ಅಭಿಮಾನಿಗಳು ಅವರ ಕುಟುಂಬ ಕಾಯುತ್ತಾರೆ. ಸುಮಲತಾರನ್ನು ಅಡ್ಡ ಮಲಗಿಸಿ ಅಂತ ಕುಮಾರಸ್ವಾಮಿ ಮಾತಾಡಿದ್ರು. ಅಮೇಲೆ ಕಾವಲು ಕಾಯಬೇಕು ಎಂದೆಯಷ್ಟೇ ಅಂದರು. ಕುಮಾರಸ್ವಾಮಿ ಹೇಳಿಕೆಯನ್ನು ತಿರುಚುತ್ತಾರೆ ಎಂದು ರಾಕ್ಲೈನ್ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರರಂಗ ನಿಮಗೇನು ಮೋಸ ಮಾಡಿದೆ?
ಅಂಬರೀಶ್ ಅಂದ್ರೆ ನಮಗೆ ಪ್ರಾಣ, ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡ್ತಿದ್ದೀರಾ. ಅವರು ಬದುಕಿದ್ದಾಗ ಮಾತಾಡಬೇಕಿತ್ತು. ಅವರು ಹೋದ ಮೇಲೆ ಯಾಕೆ ಇಂತಹ ಹೇಳಿಕೆ ಕೊಡ್ತೀರಾ ಎಂದು ರಾಕ್ಲೈನ್ ಆಕ್ಷೇಪ ವ್ಯಕ್ತಪಡಿಸಿದರು. ಅಂಬರೀಶ್ ವಿಷಯ ಮಾತಾಡೋವಾಗ ಪ್ರಜ್ಞೆ ಇಟ್ಟುಕೊಂಡು ಮಾತಾಡಿ, ಇದು ನಮಗೆ ಬೇಜಾರು ತರುವ ವಿಷಯ. ಚಿತ್ರರಂಗ ನಿಮಗೇನು ಮೋಸ ಮಾಡಿದೆ. ಹೇಗೆ ಲಾಭ ಮಾಡಿಕೊಂಡಿದ್ದೀರಾ ಎಲ್ಲರಿಗೂ ಗೊತ್ತು, ಯಾಕೆ ಚಿತ್ರರಂಗವನ್ನು ಬೈತೀರಾ. ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ?
ದಾರಿಯಲ್ಲಿ ಹೋಗೋ ದಾಸಪ್ಪ ಸಿಎಂ ಆಗಿದ್ದರೂ ಮಾಡ್ತಿದ್ದರು!
ಮಂಡ್ಯಕ್ಕೆ ಅಂಬಿ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ತಾನೇ ಎಂದು ಕುಮಾರಸ್ವಾಮಿ ಹೇಳ್ತಾರೆ. ಸಾವಿನ ವಿಚಾರದಲ್ಲಿ ರಾಜಕೀಯ ಯಾಕೆ ಮಾಡ್ತೀರಾ? ಅಂಬರೀಶ್ ಅವರ ಪುತ್ರ ಅಭಿಷೇಕ್ ಒತ್ತಾಯ ಮಾಡಿ ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಬೇಕು ಎಂದ ಅಂತ ನೀವೇ ಹೇಳಿದ್ರಿ. ದಾರಿಯಲ್ಲಿ ಹೋಗೋ ದಾಸಪ್ಪ ಸಿಎಂ ಆಗಿದ್ದರೂ ಅವತ್ತು ಅಂಬರೀಶ್ ಗೆ ಗೌರವ ಕೊಡುತ್ತಿದ್ದರು. ನಾನೇ ಮಾಡಿದೆ ನಾನೇ ಮಾಡಿದೆ ಅಂತ ಯಾಕೆ ಹೇಳ್ತೀರಾ ಎಂದು ರಾಕ್ಲೈನ್ ಕಿಡಿಕಾರಿದರು.
ದೊಡ್ಡಣ್ಣ ಮುಖದ ಮೇಲೆ ಅರ್ಜಿ ಬಿಸಾಡಿದ್ದರು!
ಅಂಬರೀಶ್ ಮುಂದೆ ಕೈ ಕಟ್ಟಿ ಮಾತಾಡಿತ್ತಿದ್ರು. ಅವತ್ತು ಅಂಬಿ ಮುಂದೆ 000.5 ವಾಲ್ಯೂಮ್ನಲ್ಲಿ ಮಾತಾಡ್ತಿದ್ದರು. ಇವತ್ತು ಯಾವ ಟೋನ್ ನಲ್ಲಿ ಮಾತಾಡ್ತಿದ್ದೀರಾ, ಇದೆಲ್ಲ ಬೇಡ ಎಂದು ನೇರವಾಗೇ ಎಚ್ಚರಿಕೆ ನೀಡಿದರು ರಾಕ್ಲೈನ್. ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆಗಳ ಕಾಲ ಕುಮಾರಸ್ವಾಮಿ ಕಾಯಿಸಿದ್ರು. ನಟ ದೊಡ್ಡಣ್ಣ ಕೊಟ್ಟ ಮನವಿ ಪತ್ರವನ್ನ ಮುಖದ ಮೇಲೆ ಬಿಸಾಕಿದ್ರು. ಇವನು ಏನ್ ಮಾಡಿದ್ದಾನೆ, ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅಂದು ಅಂಬಿಗೆ ಅವಮಾನ ಮಾಡಿದ್ದರು.
ಅಂಬರೀಶ್ ರಿಂದ ಏನೇನು ಲಾಭ ಪಡೆದಿದ್ದೀರಾ ನೆನಪು ಮಾಡಿಕೊಳ್ಳಿ. ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ. ಸುಮಲತಾಗೆ ಚುನಾವಣೆಗೆ ನಿಲ್ಲಲು ಇಷ್ಟ ಇರಲಿಲ್ಲ. ಅಂದು ಮಂಡ್ಯದಲ್ಲಿ ನಿಖಿಲ್ ನಿಲ್ತಾರೆ ಅಂತ ನೀವು ಬಂದು ಕೇಳಿದ್ರೆ ಸುಮಲತಾ ಅವರೇ ನಿಂತು ನಿಖಿಲ್ ಪರ ಕೆಲಸ ಮಾಡೋರು ಎಂದರು.
ಗಣೇಶ್ ತರ ಇದ್ದವರು, ವಜ್ರಮುನಿ ತರ ಆಡ್ತಿರಾ?
ಇನ್ನು ಸುಮಲತಾ ವಿರುದ್ಧ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯಗೂ ರಾಕ್ಲೈನ್ ತಿರುಗೇಟು ನೀಡಿದರು. ವಜ್ರಮುನಿ ತರಹ ಇವತ್ತು ಮಾತಾಡ್ತೀರಾ, ಹಿಂದೆ ಅಂಬರೀಶ್ ಜೊತೆ ನೋಡಿದಾಗ ಮುಂಗಾರು ಮಳೆ ಗಣೇಶ್ ತರಹ ಇದ್ದರು. ಸುಮಲತಾ ಮಂಡ್ಯದ ಸೊಸೆಯಾಗಿ, ಮನೆ ಮಗಳಾಗಿ ಮಂಡ್ಯದ ಜನರಿಗಾಗಿ ಡ್ಯಾಮ್ ಬೇಕಾದ್ರು ಕಾಯ್ತಾರೆ. ಡ್ಯಾಂಮ್ ಗೆ ಸಮಸ್ಯೆ ಆಗ್ತಿದೆ ಅಂತ ಸಂಸದರು ಹೇಳ್ತಿದ್ದಾರೆ. ಎಲ್ಲರೂ ಒಟ್ಟಾಗಿ ಇದನ್ನ ಪರಿಹಾರ ಮಾಡಬೇಕು. ಅದು ಬಿಟ್ಟು ಒಂದು ಹೆಣ್ಣು ಮಗಳ ಬಗ್ಗೆ ಮಾತಾಡ್ತೀರಾ ಎಂದು ಕುಟುಕಿದರು.
ರಾಜಕುಮಾರ್, ವಿಷ್ಣುವರ್ಧನ್ ಹೆಸರು ಏಕೆ ತರ್ತೀರಾ?
ರವೀಂದ್ರ ಶ್ರೀಕಂಠಯ್ಯ ಅವರೇ ಬೇಡ, ನಾನು ಸ್ನೇಹಿತನಾಗಿ ಹೇಳ್ತಿದ್ದೇನೆ. ಅಂಬರೀಶ್ ಬಗ್ಗೆ ಯಾರು ಮಾತಾಡಬೇಡಿ. ಅಂಬರೀಶ್ ಬಗ್ಗೆ ಮಾತಾಡೋರು 10 ಸಾರಿ ಯೋಚನೆ ಮಾಡಿ ಮಾತಾಡಿ. ಯಾಕೆ ಸುಮಲತಾ ಹೆಸರು ಕೆಡಿಸ್ತೀರಾ. ರಾಜ್ ಕುಮಾರ್ ಸತ್ತಾಗ ಯಾರ್ ಸಿಎಂ ಆಗಿದ್ದು, ವಿಷ್ಣುವರ್ಧನ್ ಸತ್ತಾಗ ಯಡಿಯೂರಪ್ಪ ಸಿಎಂ ಆಗಿದ್ರು. ಅವತ್ತು ಅಂಬರೀಶ್ ಎಲ್ಲಾ ವ್ಯವಸ್ಥೆ ಮಾಡಿದ್ರು. ಯಾಕೆ ರಾಜ್ ಕುಮಾರ್, ವಿಷ್ಣು ಹೆಸರು ತರುತ್ತೀರಾ. ಅಂಬರೀಶ್ ಗೆ ಸಿಎಂ ಏನು ಮಾಡಬೇಕಾಗಿ ಇರಲಿಲ್ಲ, ಜನರೇ ಎಲ್ಲ ಮಾಡ್ತಿದ್ದರು. ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡಿದ್ದರೆ ಸಾಬೀತು ಮಾಡಿ. ಅಂಬರೀಶ್ ಇದ್ದಾಗ ಯಾರು ಬಾಯಿ ಬಿಟ್ಟಿಲ್ಲ, ಈಗ ವಾಲ್ಯೂಮ್ ಜಾಸ್ತಿ ಮಾಡ್ತಿದ್ದೀರಾ ಎಂದು ರವೀಂದ್ರ ಶ್ರೀಕಂಠಯ್ಯ ವಿರುದ್ದ ರಾಕ್ ಲೈನ್ ಕಿಡಿಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ