ಬೆಂಗಳೂರು : ಕೊರೋನಾ 2ನೇ ಅಲೆ ಅಬ್ಬರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ಡೌನ್ ಹೇರಿದೆ. ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಜನ ಊರುಗಳತ್ತ ಮುಖ ಮಾಡಿದ್ದಾರೆ. ಮಧ್ಯಾಹ್ನ 2 ಗಂಟೆ ಬಳಿಕ ಬೆಂಗಳೂರಿನ ಬಸ್ ನಿಲ್ದಾಣಗಳಲ್ಲಿ ಜನ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಮೆಜೆಸ್ಟಿಕ್, ಸ್ಯಾಟ್ಲೈಟ್ ಬಸ್ ನಿಲ್ದಾಣ, ಗೊರಗುಂಟೆ ಪಾಳ್ಯ, ಜಾಲಹಳ್ಳಿ ಕ್ರಾಸ್, 8 ನೇ ಮೈಲಿ ಬಳಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ನಾಳೆ ರಾತ್ರಿಯಿಂದ ಲಾಕ್ಡೌನ್ ಜಾರಿಯಾಗುತ್ತಿದ್ದು, ಅಷ್ಟರಲ್ಲಿ ಊರು ಸೇರಲು ಜನ ತರಾತುರಿಯಲ್ಲಿ ಹೊರಟ್ಟಿದ್ದಾರೆ.
ಜನ ಸಿಕ್ಕ ಬಸ್ ಹಿಡಿದು ಊರು ತಲುಪುವ ಗಡಿಬಿಡಿಯಲ್ಲಿದ್ದು, ಸಮಯದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ಗಳು ವಸೂಲಿಗೆ ಇಳಿದಿವೆ. ಬಸ್ ಟಿಕೆಟ್ ದರವನ್ನು ನಾಲ್ಕರಿಂದ ಐದು ಪಟ್ಟು ಹೆಚ್ಚಳ ಮಾಡಿದ್ದಾರೆ. ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಟಿಕೆಟ್ ದರ ಕೇಳಿ ಹೌಹಾರುತ್ತಿದ್ದಾರೆ. ಮನೆಯಿಂದ ಹೊರಟು ಬಂದ ಮೇಲೆ ಮತ್ತೆ ಹಿಂತಿರುಗಲಾರದೆ ಕೇಳಿದಷ್ಟು ಹಣ ಕೊಟ್ಟು ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ.
ಬೆಂಗಳೂರಿಂದ ಶಿರಸಿಗೆ 700 ರೂಪಾಯಿ ಇದ್ದ ಟಿಕೆಟ್ ದರ 1,900ಕ್ಕೆ ಏರಿಕೆಯಾಗಿದೆ. ಬೆಂಗಳೂರಿಂದ ಶಿವಮೊಗ್ಗಕ್ಕೆ ಸಾಮಾನ್ಯವಾಗಿ ಟಿಕೆಟ್ ದರ 500 ರೂಪಾಯಿ. ಆದರೆ ಈಗ ಖಾಸಗಿ ಬಸ್ಗಳಲ್ಲಿ ದರವನ್ನು ನಾಲ್ಕು ಪಟ್ಟು ಏರಿಸಿ 2,000 ರೂ.ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡಕ್ಕೆ 800 ರೂ. ಇದ್ದ ಟಿಕೆಟ್ ದರ 2,500 ರೂ.ಗೆ ಏರಿಕೆಯಾಗಿದೆ. 1,000 ರೂ. ಕೊಟ್ಟು ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಜನ ಈಗ 2,500 ರೂ. ತೆರಬೇಕಾಗಿದೆ. ಇನ್ನು ಬೆಳಗಾವಿಗೆ ಹೊರಟ್ಟಿದ್ದ ಪ್ರಯಾಣಿಕರಂತು ಟಿಕೆಟ್ ದರ ಕೇಳಿ ಅಘಾತಕ್ಕೊಳಗಾಗಿದ್ದಾರೆ. ಸಾಮಾನ್ಯವಾಗಿ 1,000 ರೂ. ಇರುತ್ತಿದ್ದ ದರ ಈಗ ಬರೋಬ್ಬರಿ 5,000ಕ್ಕೆ ಏರಿ ಕೂತಿದೆ.
ಇದನ್ನೂ ಓದಿ: Corona Threat; ಕೊರೋನಾಗೆ ಹೆದರಿದ ದೇಶದ ಅತಿ ಸಿರಿವಂತರು; ಖಾಸಗಿ ಜೆಟ್ಗಳ ಮೂಲಕ ವಿದೇಶಕ್ಕೆ ಪಲಾಯನ
ಬೆಂಗಳೂರಿಂದ ಬೇರೆ ಜಿಲ್ಲೆಗಳಿಗೆ ಹೊರಟಿರುವ ಖಾಸಗಿ ಬಸ್ಗಳಲ್ಲಿ 4ರಿಂದ 5 ಪಟ್ಟು ಟಿಕೆಟ್ ದರ ಏರಿಸಲಾಗಿದೆ. ಲಾಕ್ಡೌನ್ ಭಯದಲ್ಲಿ ಊರು ಸೇರಬೇಕೆಂದಿದ್ದ ಜನ ದುಬಾರಿ ಟಿಕೆಟ್ ದರದಿಂದ ಹೈರಾಣಾಗಿದ್ದಾರೆ. ಇಂದು ರಾತ್ರಿಯೆಲ್ಲಾ ಪ್ರಯಾಣಿಕರು ಭಾರೀ ಸಂಖ್ಯೆಯಲ್ಲಿ ಬೆಂಗಳೂರು ತೊರೆಯಲಿದ್ದು, ಟಿಕೆಟ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ