Araga Jnanendra Damaging Statement: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಂಗಳವಾರ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಮೇಲೆ ವಿಪಕ್ಷಗಳು ಮುರಿದು ಬಿದ್ದಿದ್ದು, ತರಾಟೆಗೆ ತೆಗೆದುಕೊಂಡಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿವಾಗ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಾಲಿಗೆ ಹಳಿ ತಪ್ಪಿದೆ. ಕಾಂಗ್ರೆಸ್ನವರು ನನ್ನನ್ನು ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಗೃಹ ಸಚಿವರನ್ನು ರೇಪ್ ಮಾಡಲು ಪ್ರತ್ನಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಪದ, ಸಂಗತಿಯನ್ನು ಅಸೂಕ್ಷ್ಮವಾಗಿ ಬಳಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಗೃಹ ಸಚಿವರ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
ಗೃಹಸಚಿವರ ಹೇಳಿಕೆಗೆ ಆಕ್ರೋಶ
ರಾಜಕೀಯವಾಗಿ ವಿಪಕ್ಷಗಳನ್ನು ಎದುರಿಸುವ ಭರದಲ್ಲಿ ಗೃಹ ಸಚಿವರು ಆಡಿರುವ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಮಹಿಳಾ ಸಂಘಟನೆಗಳು ಕಿಡಿಕಾರಿವೆ. ಅತ್ಯಾಚಾರದ ಗಂಭೀರತೆಯನ್ನೇ ಅರಿಯದೇ ಗೃಹ ಸಚಿವರೇ ಅದನ್ನು ರಾಜಕೀಯ ಹೇಳಿಕೆಗೆ ಬಳಸಿಕೊಂಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಡಿ.ಕೆ.ಶಿವಕುಮಾರ್ ವ್ಯಂಗ್ಯ
ಅರಗ ಜ್ಞಾನೇಂದ್ರ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಕಾಂಗ್ರೆಸ್ ನವರು ನನ್ನನ್ನ ರೇಪ್ ಮಾಡ್ತಿದ್ದಾರೆ ಎಂದಿದ್ದಾರೆ. ರೇಪ್ ಅನ್ನೋ ಪದ ಅವರಿಗೆ ಪ್ರಿಯವಾದ ಪದ. ಆ ಪದವನ್ನ ಗೌರವದಿಂದ ಕಾಣ್ತಿದ್ದಾರೆ. ಕಾಂಗ್ರೆಸ್ ರೇಪ್ ಮಾಡ್ತಿದೆ ಅಂತ ಹೇಳಿದ್ರೆ ಏನರ್ಥ. ಹೋಂ ಮಿನಿಸ್ಟರ್ ಅವರನ್ನ ಯಾರು ರೇಪ್ ಮಾಡ್ತಿದ್ದಾರೆ. ಅವರನ್ನು ರೇಪ್ ಮಾಡುತ್ತಿರುವವರನ್ನು ಡಿಜಿಯವರು ಬಂಧಿಸಬೇಕು. ಉಗ್ರಪ್ಪ, ರೇವಣ್ಣ, ಸಿದ್ದರಾಮಯ್ಯ ಮಾಡಿದ್ರೂ ಬಂಧಿಸಲಿ ಎಂದು ವ್ಯಂಗ್ಯವಾಗಿ ಡಿಕೆಶಿ ಪ್ರತಿಕ್ರಿಯಿಸಿದರು.
ಪೋಲೀಸರಿಗೆ ನಾನು ಮೊದಲೇ ಸಲಹೆ ನೀಡಿದ್ದೆ, ರಾಜಕೀಯ ಒತ್ತಡಕ್ಕೆ ಮಣಿಯಬೇಡಿ ಎಂದಿದ್ದೆ. ಹೋಂ ಮಿನಿಸ್ಟರ್ ಹೊಸದಾಗಿ ಆಗಿದ್ದಾರೆ. ಇವರು ಪರ್ಮನೆಂಟ್ ಇಲ್ಲ ಅನ್ನೋದು ಗೊತ್ತಿದೆ. ನಾವು ಪ್ರತಿಪಕ್ಷದವರು, ಈಗ ಬೇಕಾದಷ್ಟು ಸೆಕ್ಷನ್ ಗಳಿವೆ. ಉಗ್ರಪ್ಪ ನೇತೃತ್ವದಲ್ಲಿ ಕಮಿಟಿ ಮಾಡಿದ್ದೇವೆ, ಈ ತಂಡ ಮೈಸೂರಿಗೆ ಹೋಗಲಿದೆ. ಅಲ್ಲಿನ ವಾಸ್ತವ ಸ್ಥಿತಿಯನ್ನ ಅರಿಯಲಿದೆ. ರಾಜ್ಯದ ಜನರಿಗೆ ಮಾಹಿತಿಯನ್ನ ನೀಡಲಿದೆ. ನಮಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲ, ಹಾಗಾಗಿ ಈ ಸಮಿತಿಯನ್ನ ರಚನೆ ಮಾಡಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ: Mysore Gang Rape: ಕಾಂಗ್ರೆಸ್ನವರು ರೇಪ್ ಮಾಡಿದ್ರೆ ಬಂಧಿಸಿ; ಗೃಹ ಸಚಿವರ ಮಾತಿಗೆ ಕಿಡಿಕಾರಿದ ಡಿಕೆ ಶಿವಕುಮಾರ್
ಇನ್ನು ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವರು, ಗ್ಯಾಂಗ್ರೇಪ್ ಸಂತ್ರಸ್ತೆಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಬೇಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಹಿರಿಯ ಅಧಿಕಾರಿ ಪ್ರತಾಪ್ ರೆಡ್ಡಿ ಅವ್ರನ್ನ ಮೈಸೂರಿಗೆ ಕಳುಹಿಸಲಾಗಿದೆ. ಬೇರೆ ಬೇರೆ ತಂಡಗಳನ್ನ ರಚಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ಬಂಧನದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೈಸೂರು ಪ್ರಮುಖವಾದ ಪ್ರವಾಸಿ ತಾಣ, ಸಾವಿರಾರು ಜನ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಈ ಘಟನೆ ದುರದೃಷ್ಟಕರ, ತಲೆತಗ್ಗಿಸುವಂತದ್ದು ಎಂದರು.
ಕಾಂಗ್ರೆಸ್ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ
ಇಂತಹ ವಿಚಾರಗಳಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು, ಇದು ರಾಜಕೀಯ ಮಾಡುವ ಘಟನೆಯೂ ಅಲ್ಲ. ಕಾಂಗ್ರೆಸ್ ಅವಧಿಯಲ್ಲಿ ಏನು ಸುಖವಾಗಿತ್ತಾ? ಇಂತಹ ಘಟನೆಗಳು ಆಗಿರಲಿಲ್ವಾ ? ಅವರ ಅವಧಿಯಲ್ಲೂ ನಡೆದಿತ್ತು. ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ