ಬೆಂಗಳೂರು; ಮನೆ ಆರೈಕೆಯಲ್ಲಿರುವ ಕೋವಿಡ್ ರೋಗಿಗಳಿಗೆ ಮಾರ್ಗದರ್ಶನ ನೀಡಲು ಕಾಲ್ ಸೆಂಟರ್ ನಲ್ಲಿ ಒಟ್ಟು 1,100 ಮಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಕಾಲ್ ಸೆಂಟರ್ ನಲ್ಲಿ 400 ಸಿಬ್ಬಂದಿ ಇದ್ದಾರೆ. ಮನೆ ಆರೈಕೆಯಲ್ಲಿರುವವರಿಗೆ ಕರೆ ಮಾಡಿ ಮಾರ್ಗದರ್ಶನ ನೀಡಲು 11 ಕೋಟಿ ರೂ. ವೆಚ್ಚದಲ್ಲಿ 6 ತಿಂಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಹೊಸ ವ್ಯವಸ್ಥೆ ಮಾಡಲಾಗುವುದು. ಈ ಸಿಬ್ಬಂದಿ ಬೇರೆ ಬೇರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ 20 ಕೋಟಿ ರೂ. ವೆಚ್ಚದಲ್ಲಿ ಟೆಲಿ ಮೆಡಿಸಿನ್, ವೈದ್ಯಕೀಯ ಸಲಹೆ ನೀಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ 2-3 ಸಾವಿರ ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನು 15-20 ದಿನಗಳಲ್ಲಿ ನಿರ್ಮಿಸಲಾಗುವುದು. ವಿಕ್ಟೋರಿಯಾ, ಬೌರಿಂಗ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಇಂತಹ ಆಸ್ಪತ್ರೆ ನಿರ್ಮಿಸಲಾಗುವುದು. ಒಂದು ಆಸ್ಪತ್ರೆಯಲ್ಲಿ 200-250 ಹಾಸಿಗೆಗಳಿದ್ದು, ಶೇ.20 ರಷ್ಟು ಐಸಿಯು ವೆಂಟಿಲೇಟರ್, ಶೇ.60 ರಷ್ಟು ಆಕ್ಸಿಜನ್, ಶೇ.20 ರಷ್ಟು ಹೈ ಫ್ಲೋ ಆಕ್ಸಿಜನ್ ಇರಲಿದೆ. ಎಲ್ಲಾ ಜಿಲ್ಲೆಗಳಲ್ಲೂ ಈ ವ್ಯವಸ್ಥೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಕೋವಿಡ್ ಕೇರ್ ಸೆಂಟರ್:
ಪ್ರತಿ ಜಿಲ್ಲೆಯಲ್ಲಿ 50-100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಿಸಲಿದ್ದು ಶೇ10 - ಶೇ20 ಆಕ್ಸಿಜನ್ ಹಾಸಿಗೆ ಇರಲಿದೆ. ಪ್ರತಿ ಸೆಂಟರ್ ನಲ್ಲಿ 20 ಹಾಸಿಗೆಗಳಿಗೆ ಪೋರ್ಟೇಬಲ್ ಆಕ್ಸಿಜನ್ ನೀಡಲಾಗುವುದು. ಒಟ್ಟು 40 ಸಾವಿರ ಪೋರ್ಟೇಬಲ್ ಆಕ್ಸಿಜನ್ ಆಮದು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಅಥವಾ ಎರಡು ಕೇರ್ ಸೆಂಟರ್ ತೆರೆಯಲಾಗುವುದು ಎಂದರು.
ಮುಂಬೈನಲ್ಲಿ ಕಫ್ರ್ಯೂ ವಿಧಿಸಿದ ಬಳಿಕ ದಿನಕ್ಕೆ 3 ಸಾವಿರ ಪ್ರಕರಣ ಕಂಡುಬರುತ್ತಿದೆ. ಕಫ್ರ್ಯೂ ವಿಧಿಸಿದಾಗ ಸೋಂಕು ಕಡಿಮೆಯಾಗುತ್ತದೆ. ಆದ್ದರಿಂದಲೇ ರಾಜ್ಯ ಸರ್ಕಾರ ಕಫ್ರ್ಯೂ ತೀರ್ಮಾನ ಕೈಗೊಂಡಿದೆ. ಜನರು ಹೆಚ್ಚು ಓಡಾಡದೆ ಎಚ್ಚರ ವಹಿಸಬಾರದು. ಕಡಿಮೆ ಲಕ್ಷಣ ಇರುವ ಸೋಂಕಿತರು ಮನೆಯಿಂದ ಹೊರಗೆ ಹೋಗಿ ಹರಡಬಾರದು ಎಂದು ಕೋರಿದರು.ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ