Mother Murder: ತಾಯಿಯ ಕಪಾಳಕ್ಕೆ ಹೊಡೆದು ಕೊಂದ ಪಾಪಿ ಪುತ್ರ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ
ಮಕ್ಕಳು ಚಿಕ್ಕವರಿರುವಾಗ ತಂದೆ-ತಾಯಿ ನೋಡಿ ಕೊಳ್ತಾರೆ. ಅದೇ ತಂದೆ-ತಾಯಿ ವಯಸ್ಸಾದಾಗ ಮಕ್ಕಳು ನೋಡಿಕೊಳ್ಳಬೇಕು. ಆದ್ರೆ ಇಲ್ಲಿ ವಯಸ್ಸಾದರೂ ಈ ತಾಯಿ ತಾನೇ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದಳು. ಈ ಪಾಪಿ ಪುತ್ರ ಆಕೆಯನ್ನೇ ಹೊಡೆದು ಕೊಂದಿದ್ದಾನೆ.
ಬೆಂಗಳೂರು: ತಾಯಿಯನ್ನು (Mother) ದೇವರು (God) ಅಂತಾರೆ. ‘ಮಾತೃದೇವೋ ಭವ’ ಅಂತ ಗೌರವಿಸುತ್ತಾರೆ. “ಜಗತ್ತಿನಲ್ಲಿ ಕೆಟ್ಟ ತಂದೆ (Bad Father) ಇರಬಹುದು, ಆದ್ರೆ ಕೆಟ್ಟ ತಾಯಿ (Bad Mother) ಮಾತ್ರ ಇರಲಿಕ್ಕಿಲ್ಲ” ಅಂತಾರೆ ಹಿರಿಯರು. ಮಕ್ಕಳಿಗೆ ಏನೇ ಕಷ್ಟ ಬಂದರೂ ಅದನ್ನು ತಾನು ಮಾತ್ರ ಅನುಭವಿಸಿ, ಮಕ್ಕಳು ಸುಖವಾಗಿ ಇರುವಂತೆ ನೋಡಿಕೊಳ್ಳುವವಳು ತಾಯಿ. “ತಾಯಿ ನಿಂದಿಸಿದರೆ, ಹಿಂಸಿಸಿದರೆ ಅದಕ್ಕೆ ಪರಿಹಾರ ಇಲ್ಲ” ಅಂತ ಪುರಾಣಗಳೂ ಹೇಳುತ್ತವೆ. ಆದರೆ ಇಲ್ಲಿ ತಾಯಿಯನ್ನು ಬರೀ ನಿಂದಿಸಿ, ಹಿಂಸಿಸಿಲ್ಲ, ಆಕೆಯನ್ನು ಕೊಂದೇ (Murder) ಬಿಟ್ಟಿದ್ದಾನೆ. ಆ ಹಂತಕ ಬೇರೆ ಯಾರೂ ಅಲ್ಲ, ಆ ತಾಯಿಯದ್ದೇ ಮಗ (Son) ! ಹಾಗಿದ್ರೆ ಈ ಘಟನೆ ನಡೆದಿರುವುದು ಎಲ್ಲಿ, ತಾಯಿಯನ್ನೇ ಹತ್ಯೆ ಮಾಡಿದ ಆ ಪಾಪಿ ಪುತ್ರ ಯಾರು? ಅಸಲಿಗೆ ಅಲ್ಲಿ ನಡೆದಿದ್ದು ಏನು? ಈ ಎಲ್ಲವುಗಳ ಬಗ್ಗೆ ಆಘಾತಕಾರಿ ವರದಿ ಇಲ್ಲಿದೆ ನೋಡಿ…
ತಾಯಿಯನ್ನೇ ಕೊಂದ ಪಾಪಿ ಪುತ್ರ
ರಾಜ್ಯ ರಾಜಧಾನಿ ಬೆಂಗಳೂರಿನ ಮಾರತಹಳ್ಳಿ ವ್ಯಾಪ್ತಿಯ ದೇವರ ಬೀಸನಹಳ್ಳಿಯಲ್ಲಿ ನಿನ್ನೆ ರಾತ್ರಿ ಇಂಥದ್ದೊಂದು ಘಟನೆ ನಡೆದಿದೆ. ಮಗ ಅಂಬರೀಷ ಎಂಬಾತ 70 ವರ್ಷದ ವೃದ್ಧ ತಾಯಿ ಯುಮುನವ್ವ ಎಂಬಾಕೆಯನ್ನು ಕೊಂದೇ ಬಿಟ್ಟಿದ್ದಾನೆ. ಇದೀಗ ಪಾಪಿ ಪುತ್ರ ಮಾಡಿದ ತಪ್ಪಿಗೆ ತಾನು ಪೊಲೀಸರ ಅತಿಥಿಯಾಗಿದ್ದಾನೆ.
ಕುಡಿಯಲು ಹಣ ಕೊಡಲಿಲ್ಲ ಅಂತ ಗಲಾಟೆ
ಈ ಅಂಬರೀಷನಿಗೆ ನಿತ್ಯ ಕುಡಿಯುವ ಚಟ ಇತ್ತು. ತನ್ನ ಬಳಿ ಹಣ ಇರಲಿ, ಇದರೇ ಇರಲಿ, ಆದ್ರೆ ಅವನಿಗೆ ಎಣ್ಣೆ ಮಾತ್ರ ಪ್ರತಿನಿತ್ಯ ಬೇಕಾಗಿತ್ತು. ಆದರೆ ತಾನು ಮಾತ್ರ ಕೆಲಸಕ್ಕೆ ಹೋಗುತ್ತಿರಲಿಲ್ಲ.
ಈ ವೃದ್ಧಾಪ್ಯದಲ್ಲೂ 70ರ ವಯಸ್ಸಿನ ತಾಯಿ ಅವರಿವರ ಮನೆ ಕೆಲಸ, ಕೂಲಿ ಕೆಲಸ ಮಾಡಿ, ಮಗನನ್ನು ಸಾಕುತ್ತಿದ್ದಳು. ಇದೇ ಕಾರಣಕ್ಕೆ ಮನೆಯಲ್ಲಿರುವ ಹಣ, ತಾಯಿ ಸಂಪಾದಿಸಿದ ಹಣವನ್ನೆಲ್ಲ ಕುಡಿತಕ್ಕೆ ಬಳಕೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಪ್ರತಿನಿತ್ಯ ಗಲಾಟೆಯೂ ಆಗುತ್ತಿತ್ತು.
ನಿನ್ನೆಯೂ ಸಹ ಈ ಅಂಬರೀಷ ಕುಡಿಯಲು ಹಣ ಕೊಡು ಅಂತ ತಾಯಿ ಯಮುನವ್ವನನ್ನು ಕೇಳಿದ್ದಾನೆ. ಆದರೆ ನನ್ನ ಬಳಿ ಹಣವಿಲ್ಲ ಅಂತ ಆಕೆ ಹೇಳಿದ್ದಾಳೆ. ಆದರೆ ಇದೇ ಕಾರಣಕ್ಕೆ ತಾಯಿಯೊಂದಿಗೆ ಕುಡುಕ ಮಗ ಗಲಾಟೆ ತೆಗೆದಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ತಾಯಿ ಕೆನ್ನೆಗೆ ಬಲವಾಗಿ ಬಾರಿಸಿದ್ದಾನೆ.
ಮಗನ ಎದುರಲ್ಲೇ ಜೀವಬಿಟ್ಟ ವೃದ್ಧ ತಾಯಿ
ಮಗ ಕೆನ್ನೆಗೆ ಬಲವಾಗಿ ಹೊಡೆಯುತ್ತಿದ್ದಂತೆ ವೃದ್ಧ ತಾಯಿ ಯಮುನವ್ವ ಕುಸಿದು ಬಿದ್ದಿದ್ದಾಳೆ. ಕೆನ್ನೆಗೆ ಬಲವಾದ ಏಟು ಬಿದ್ದ ಕಾರಣ ಸ್ಥಳದಲ್ಲೇ, ಮಗನ ಕಣ್ಣ ಮುಂದೆಯೇ ಜೀವ ಬಿಟ್ಟಿದ್ದಾಳೆ.
ಗಲಾಟೆ ಜೋರಾಗುತ್ದಿದಂತೆ ಅಕ್ಕಪಕ್ಕದವರೆಲ್ಲ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿನ ದೃಶ್ಯ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಮಾರತಹಳ್ಳಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಈ ಬಗ್ಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತಾಯಿಯನ್ನೇ ಕೊಂದ ಕುಡುಕ ಪುತ್ರನನ್ನು ಬಂಧಿಸಿದ್ದಾರೆ. ಘಟನೆಯಿಂದ ಅಕ್ಕಪಕ್ಕದ ಜನರು ಬೆಚ್ಚಿಬಿದ್ದಿದ್ದಾರೆ. ಕುಡಿತ ಎಷ್ಟು ಕೆಟ್ಟದ್ದು, ಅದನ್ನು ಕುಡಿದವರು ರಾಕ್ಷಸರಾಗುವುದು ಯಾಕೆ ಎನ್ನುವ ಬಗ್ಗೆ ಮಾತನಾಡುತ್ತಿದ್ದಾರೆ.