ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಡಿವಾಣಕ್ಕೆ ಮೇ 4ರವರೆಗೆ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹೇರಿರುವ ಸರ್ಕಾರ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದೆ. ಆದರೆ ಅಂಗಡಿ-ಮುಗ್ಗಟ್ಟುಗಳನ್ನು ಏಕಾಏಕಿ ಪೊಲೀಸರ ಮೂಲಕ ಬಂದ್ ಮಾಡಿಸುತ್ತಿರುವುದಕ್ಕೆ ವಿಪಕ್ಷ ನಾಯಕರು ಕಿಡಿಕಾರುತ್ತಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕಿನ ಬಗ್ಗೆ ಯೋಚನೆ ಮಾಡುತ್ತಿಲ್ಲ. ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ನನಗೇ ಅರ್ಥವಾಗುತ್ತಿಲ್ಲ. ಇನ್ನು ಬೀದಿ ಬದಿಯಲ್ಲಿರುವವರಿಗೆ ಅರ್ಥವಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆಯಿಂದ ನೂರಾರು ವರ್ತಕರು ಕರೆ ಮಾಡುತ್ತಿದ್ದಾರೆ. ನಿನ್ನೆ ಏಕಾಏಕಿ ಯಾರಿಗೂ ಮಾಹಿತಿ ನೀಡದೆ ಪೋಲಿಸರು ಅಂಗಡಿಗಳನ್ನು ಬಂದ್ ಮಾಡಿರುವುದಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೋವಿಡ್ ವಿಚಾರವಾಗಿ ಏನೇ ಮಾಡಲಿ ಬೆಂಬಲಿಸೋಣ. ಆದರೆ ಆ ಶೆಡ್ಯೂಲ್ ಈ ಶೆಡ್ಯೂಲ್ ಅಂತಾ ಪರಿಷ್ಕೃತಗೊಳಿಸಿದ್ದಾರೆ. ಯಾರಿಗೆ ಅರ್ಥ ಆಗುತ್ತೆ ಇದು? ಯಾವುದಕ್ಕೆ ಅನುಮತಿ, ಯಾವುದಕ್ಕೆ ನಿರ್ಬಂಧ ಎಂದು ಸ್ಪಷ್ಟವಾಗಿ ಮೊದಲೇ ಹೇಳಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ವರ್ತಕರು, ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ , ಬದುಕಿನ ಬಗ್ಗೆ ಯೋಚನೆ ಮಾಡುತ್ತಿಲ್ಲ. ಈ ಬಗ್ಗೆ ಸರ್ವೆ ಮಾಡಿ ಪರಿಹಾರ ನೀಡಬೇಕು. ಈ ರೀತಿಯ ಲಾಕ್ ಡೌನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದರು.
ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ಹೇಳಿಸಿದ್ದಾರಲ್ಲ. ಮತ್ತೆ ಅದನ್ನು ಬದಲಾವಣೆ ಮಾಡಿರುವುದು ಏಕೆ? ಸರ್ಕಾರದ ಆದೇಶ ನನಗೆ ಸರಿಯಾಗಿ ಅರ್ಥವಾಗುತ್ತಿಲ್ಲ, ಇನ್ನು ಬೀದಿಬದಿಯಲ್ಲಿರುವವರಿಗೆ ಅರ್ಥ ಆಗುತ್ತಾ ಎಂದು ಡಿ.ಕೆ.ಶಿವಕುಮಾರ್ ಟೀಕಿಸಿದರು. ಅಂಗಡಿಗಳನ್ನು ಮುಚ್ಚಿಸುತ್ತಿರುವ ಸರ್ಕಾರ ಅವರಿಂದ ತೆರಿಗೆ ಏಕೆ ಸಂಗ್ರಹಿಸುತ್ತಿದೆ. ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ವ್ಯಾಪಾರವೇ ಇಲ್ಲದೇ ಅವರು ತೆರಿಗೆ ಹೇಗೆ ಕಟ್ಟಬೇಕು. ಸುಮ್ಮನೆ 20 ಲಕ್ಷ ಕೋಟಿ ಪ್ಯಾಕೇಜ್ ಎಂದು ಹೇಳ್ತಾರೆ. ಎಲ್ಲಿ ಯಾರು ಪ್ಯಾಕೇಜ್ ಫಲಾನುಭವಿಯಾಗಿದ್ದಾರೆ ತೋರಿಸಿ ಎಂದು ಹರಿಹಾಯ್ದರು.
ಇದನ್ನೂ ಓದಿ: Weekend Curfew: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ
ಇನ್ನು ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಇದೆ. ರೆಮ್ಡಿಸಿವಿರ್, ವೆಂಟಿಲೇಟರ್ ಸಿಗುತ್ತಿಲ್ಲ. ವ್ಯಾಕ್ಸಿನೇಷನ್ ಇನ್ನೂ ಸರಿಯಾಗಿ ಆಗುತ್ತಿಲ್ಲ. ರಾಜ್ಯ ಹಾಗೂ ದೇಶದೆಲ್ಲೆಡೆ ಲಸಿಕೆಯನ್ನು ಉಚಿತವಾಗಿ ನೀಡಬೇಕೆಂದು ಡಿಕೆಶಿ ಒತ್ತಾಯಿಸಿದರು. ಪ್ರಧಾನಿ ಮೋದಿ ವಿರುದ್ಧವೂ ವ್ಯಂಗ್ಯವಾಡಿದ ಡಿಕೆಶಿ, ಮೋದಿ ಪ್ರವಚನ ಕೇಳಿ ಸಾಕಾಗಿದೆ. ಕೊರೋನಾ ಸರ್ಟಿಫಿಕೇಟ್ ಅಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಇನ್ನು ಕೆಪಿಸಿಸಿಯ ಕೊರೋನಾ ವಾರ್ ರೂಂ ವಿಚಾರವಾಗಿ ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ವಿರುದ್ಧ ಕೇಸ್ ದಾಖಲಾಗಿರುವ ಬಗ್ಗೆಯೂ ಪ್ರತಿಕ್ರಿಯಿಸಿದರು. ಅದೆಲ್ಲಾ ಸುಮ್ಮನೆ ಬೋಗಸ್ ಕಂಪ್ಲೆಂಟ್ ಅಷ್ಟೇ. ರಾಜಕೀಯಕ್ಕಾಗಿ ಮಾಡಿದ್ದಾರೆ, ಆ ಬಗ್ಗೆ ನಾನು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು. ಕೆಪಿಸಿಸಿ ಕಡೆಯಿಂದ ಒಂದೇ ವಾರ್ ರೂಂ ಇರುತ್ತೆ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ