Congress ಧರಣಿಗೆ ಕಲಾಪ ಮುಂದೂಡಿಕೆ: ಶಿವಮೊಗ್ಗ ಯುವಕನ ಕೊಲೆಗೆ ಈಶ್ವರಪ್ಪ ಪರೋಕ್ಷ ಕಾರಣ ಅಂದ್ರು BK Hariprasad
ಇನ್ನೂ ಇದೇ ವೇಳೆ ಶಿವಮೊಗ್ಗದ ಯುವಕನ ಕೊಲೆಯ ಬಗ್ಗೆ ಪ್ರಸ್ತಾಪಿಸಲಾಯ್ತು. ಈಶ್ವರಪ್ಪ ಅವರೇ ಪರೋಕ್ಷವಾಗಿ ಈ ಕೊಲೆ ಮಾಡಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು.
ಇಂದು ಸಹ ವಿಧಾನಸಭೆ ಕಲಾಪ (Assembly Session) ಕಾಂಗ್ರೆಸ್ ಧರಣಿಗೆ (Congress Protest) ಬಲಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ, ಸರ್ಕಾರ ಈಶ್ವರಪ್ಪ (Minister KS Eshwarappa) ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ನಿಧನರಾದ ಹಿರಿಯ ನಟ ರಾಜೇಶ್ ಅವರಿಗೆ ಸಂತಾಪ ಸೂಚಿಸಲಾಯ್ತು. ವಿಧಾನ ಪರಿಷತ್ (Vidhana Parishat) ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗೆ ಇಳಿದ ಕಾಂಗ್ರೆಸ್ ನಾಯಕರು, ಈಶ್ವರಪ್ಪ ಅವರ ವಜಾ ಆಗ್ರಹಿಸಿ ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ (Shrikante Gowda), ಕಳೆದ ನಾಲ್ಕೈದು ದಿಗಳಿಂದ ಸದನ ನಡೆಯುತ್ತಿಲ್ಲ. ಅಮೂಲ್ಯ ಸಮಯ ಹಾಳಾಗುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಪ್ರತಿಭಟನೆ ಬಗ್ಗೆ ಒಂದು ಇತ್ಯರ್ಥ ಮಾಡಿ. ಪ್ರತಿಭಟನೆ ತಪ್ಪಲ್ಲ, ಆದರೆ ಅದರಿಂದ ಒಂದು ಇತ್ಯರ್ಥಕ್ಕೆ ಬರಬೇಕು. ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಒಂದು ನಿರ್ಧಾರಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡರು.
ಚರ್ಚೆ ಮಾಡಲು ಅನೇಕ ವಿಚಾರಗಳಿವೆ. ಬಿಟ್ ಕಾಯಿನ್ ಬಗ್ಗೆ ಚರ್ಚೆ ಮಾಡಬೇಕಿದೆ. ಗುತ್ತಿಗೆದಾರರು 40% ಕಮಿಶನ್ ಬಗ್ಗೆ ಆರೋಪ ಮಾಡಿದ್ದಾರೆ. ಈ ಎಲ್ಲ ಚರ್ಚೆಗೆ ಅವಕಾಶ ಮಾಡಿಕೊಡಿ. ಸಚಿವರ ರಾಜೀನಾಮೆ ಪಡೆದು ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಸರ್ಕಾರ ಉತ್ತರ ಕೊಡಲಿ. ಮೊದಲು ಸಚಿವರ ರಾಜೀನಾಮೆ ಪಡೆಯಲಿ ಎಂದು ಕಾಂಗ್ರೆಸ್ ಸದಸ್ಯ ಆರ್ ಬಿ ತಿಮ್ಮಾಪೂರ ಒತ್ತಾಯಿಸಿದರು.
ಈಶ್ವರಪ್ಪ ಅವರೇ ಕೊಲೆಗೆ ಪರೋಕ್ಷ ಕಾರಣ
ಇನ್ನೂ ಇದೇ ವೇಳೆ ಶಿವಮೊಗ್ಗದ ಯುವಕನ ಕೊಲೆಯ ಬಗ್ಗೆ ಪ್ರಸ್ತಾಪಿಸಲಾಯ್ತು. ಈಶ್ವರಪ್ಪ ಅವರೇ ಪರೋಕ್ಷವಾಗಿ ಈ ಕೊಲೆ ಮಾಡಿಸಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು. ಈ ಸಮಯದಲ್ಲಿ ಕಾಂಗ್ರೆಸ್ ನಾಯಕರು ಕೊಲೆಗಡುಕ ಈಶ್ವರಪ್ಪಂಗೆ ದಿಕ್ಕಾರ ಎಂದು ಘೋಷಣೆ ಕೂಗಿದರು.
ಭಜರಂಗದಳದಲ್ಲಿ ನನ್ನ ಮಗನಿಲ್ಲ ಎಂದು ಎರಡು ವರ್ಷಗಳ ಹಿಂದೆಯೇ ಮೃತನ ತಾಯಿ ಪೊಲೀಸ್ ವರಿಷ್ಟಾಧಿಕಾರಿಗೆ ಬರೆದು ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆ ಆಗದೇ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ತನಿಖೆ ನಡೆಯದೇ ಮೊದಲೇ ಈ ರೀತಿ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಸವಿಸ್ತಾರವಾಗಿ ಅವರಿಗೆ ಗೊತ್ತಿದೆ, ಪರೋಕ್ಷವಾಗಿ ಈಶ್ವರಪ್ಪ ಅವರೇ ಕೊಲೆಗೆ ಕಾರಣ ಎಂದು ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪಗಳ್ನು ಮಾಡಿದರು.
ವಿಧಾನ ಪರಿಷತ್ ಕಲಾಪ ಮೂರು ಗಂಟೆಗೆ ಮುಂದೂಡಿಕೆ
ಕಾಂಗ್ರೆಸ್ ನಾಯಕರ ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಪೀಕರ್ ಬಸವರಾಜ್ ಹೊರಟ್ಟಿ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿಕೆ ಮಾಡಿದರು. ಇತ್ತ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರು ಈಶ್ವರಪ್ಪನವರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರಶ್ನೋತ್ತರ ಸಮಯದಲ್ಲಿ ಜೆಡಿಎಸ್ ಸದಸ್ಯರು ಪ್ರಶ್ನೆ ಕೇಳಿದ್ರೂ, ಉತ್ತರ ಕೇಳಿಸದಂತಾಯ್ತು.
ವಿಧಾನಸಭೆಯಲ್ಲಿ ಆರ್ ಎಸ್ ಎಸ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ವಿರುದ್ಧ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಅಸಮಾಧಾನ ಹೊರಹಾಕಿದರು. ಆರ್ ಎಸ್ ಎಸ್ ದೇಶಕ್ಕಾಗಿ ಕೆಲಸ ಮಾಡುತ್ತಿರುವುದು. ಇದಕ್ಕೆ ಬೆಂಬಲ ಕೊಡಬೇಕು ಹೊರತು ಆರ್ ಎಸ್ ಎಸ್ ನ ವಿರುದ್ಧ ಮಾತನಾಡಬಾರದು. ಆರ್ಎಸ್ ಎಸ್ ಬಗ್ಗೆ ಇಲ್ಲಿ ಮಾತನಾಡಬೇಡಿ ಎಂದು ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಿಕೆ ಮಾಡಿದರು.