ಬೆಂಗಳೂರು: ಇಂದಿರಾ ಕ್ಯಾಟೀನ್ ಹೆಸರು ಬದಲಾವಣೆ, ನೆಹರೂ ಹುಕ್ಕಾಬಾರ್ ಹೇಳಿಕೆಗಳಿಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಜೈಲಿನಿಂದ ಹೊರ ಬಂದ ಕಾಂಗ್ರೆಸ್ನ ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧ ಕಾಂಗ್ರೆಸ್ಸಿಗರ ವಿರುದ್ಧ ಸಿ.ಟಿ.ರವಿ ವ್ಯಂಗ್ಯವಾಡಿದ್ದರು. ಇದಕ್ಕೆ ಎಐಸಿಸಿವಕ್ತಾರ ಬ್ರಿಜೇಶ್ ಕಾಳಪ್ಪ(Brijesh Kalappa) ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ. ಜೈಲಿಗೆ ಹೋಗಿ ಬಂದವರಿಗೆ ಪ್ರಮೋಷನ್ ಅಂತ ಹೇಳಿದ್ದಾರೆ, ರವಿಯವರೇ ನಿಮ್ಮಲಕ್ಷ್ಮಣ್ ಸವದಿ ಏನು ಮಾಡಿದ್ದರು. ಸೋತವರನ್ನ ಉಪಮುಖ್ಯಮಂತ್ರಿ ಮಾಡಲಿಲ್ವೇ? ಅಶ್ಲೀಲ ಚಿತ್ರ ನೋಡಿದ್ದು ಬಿಟ್ಟರೆ ಅವರು ಇನ್ನೇನು ಮಾಡಿದ್ರು ಎಂದು ಬ್ರಿಜೇಶ್ ಕಾಳಪ್ಪ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿನ ಲೂಟಿ ರವಿ ಅಂತಾರೆ ಎಂದು ವ್ಯಂಗ್ಯವಾಡಿದರು.
ವಿನಯ್ ಕುಲಕರ್ಣಿ(vinay Kulkarni)ನ ಬಿಜೆಪಿ ಸೆಳೆಯಲು ಯತ್ನಿಸಿದ್ದರು!
೧೭ ಜನರನ್ನ ಎನ್ ಕೌಂಟರ್ ಮಾಡಿದ್ದು ಚಾರ್ಜ್ ಶೀಟ್ ನಲ್ಲಿದೆ, ಅಂತವರನ್ನ ಕೇಂದ್ರ ಗೃಹಸಚಿವರನ್ನಾಗಿ ಮಾಡಲಾಗಿದೆ. ಸಿ.ಟಿ.ರವಿಯವರಿಗೆ ಇದು ಗೊತ್ತಿಲ್ವೇ, ಗೊತ್ತಿದ್ದೂ ಈ ರೀತಿ ಹೇಳಿಕೆಗಳನ್ನ ಕೊಡ್ತಿದ್ದಾರಾ? ವಿನಯ್ ಕುಲಕರ್ಣಿ ಫ್ರೀ ಬಿಟ್ಟವರು ಯಾರು? ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ನೀವು ಯಾಕೆ ಆಗ ಅವರನ್ನ ಪ್ರೀ ಬಿಟ್ಟಿದ್ರಿ. ಬಿಜೆಪಿಗೆ ಅವರನ್ನ ಸೆಳೆಯೋಕೆ ಈ ಪ್ರಯತ್ನ ಮಾಡಿದ್ದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಗಂಭೀರ ಆರೋಪ ಮಾಡಿದರು. ಬಿಜೆಪಿ ವಿನಯ್ ಕುಲಕರ್ಣಿನ ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸಿತ್ತು ಎಂದು ಆರೋಪಿಸಿದರು.
ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಜೈಲಿನಲ್ಲಿತ್ತು!
ಸಚಿವ ಆರ್.ಅಶೋಕ್ ಮೇಲೆ ಡಿನೊಟಿಫೈ ಆರೋಪ ಇಲ್ವೇ? ಹರತಾಳು ಹಾಲಪ್ಪ ಜೈಲಿಗೆ ಹೋಗಿರಲಿಲ್ವೇ? ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದವರಲ್ವೇ? ಕೃಷ್ಣಯ್ಯ ಶೆಟ್ಟಿ ಜೈಲಿಗೆ ಹೋಗಿದ್ದವರಲ್ಲವೇ? ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಜೈಲಿನಲ್ಲಿತ್ತು, ಸಿ.ಟಿ.ರವಿಯವರಿಗೆ ಇದು ಗೊತ್ತಿಲ್ಲವೇ? ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಲೂಟಿ ರವಿ ಅಂತಾರೆ. ಹೊಟ್ಟೆಗೆ ಹಿಟ್ಟಿಲ್ಲದವ ಇಂದು ಸಾವಿರಾರು ಕೋಟಿ ಆಸ್ತಿಯ ಮಾಲೀಕ. ಸಿ.ಟಿ.ರವಿ ಇಷ್ಟು ದೊಡ್ಡ ಸಾಹುಕಾರ ಆಗಿದ್ದು ಹೇಗೆ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.
ಕೆಲವರಿಗೆ ವಾಂತಿಬೇಧಿ ಶುರುವಾಗಿದೆ!
ಬಿಜೆಪಿಯಲ್ಲಿ ಹಲವರು ಸಿಎಂ ಆಕಾಂಕ್ಷಿಗಳಾಗಿದ್ದರು, ಅವರು ಮುಖ್ಯಮಂತ್ರಿ ಆಸೆ ಇಟ್ಟುಕೊಂಡಿದ್ದರು. ಆದರೆ ಹೈಕಮಾಂಡ್ ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಸಿಎಂ ಆಗಬೇಕೆಂದು ಸಿ.ಟಿ.ರವಿ, ಯತ್ನಾಳ್, ಈಶ್ವರಪ್ಪ ಆಸೆ ಇಟ್ಟುಕೊಂಡಿದ್ರು. ಹೀಗಾಗಿ ಕೆಲವರಿಗೆ ವಾಂತಿಬೇಧಿ ಶುರುವಾಗಿದೆ ಎಂದು ಕುಹಕವಾಡಿದರು. ದಿನವೂ ಇವರು ಮಾತುಗಳನ್ನ ಸುರಿಸ್ತಿದ್ದಾರೆ, ಸಿ.ಟಿ.ರವಿ ಗಾಜಿನ ಮನೆಯಲ್ಲಿದ್ದೇ ಕಲ್ಲು ಎಸೆಯುತ್ತಿದ್ದಾರೆ. ಸಿ.ಟಿ.ರವಿಯವರದ್ದು ಮಕ್ಕಳ ಕಥೆಯಾಗಿದೆ, ಅವರಿಗೆ ಹಿಗ್ಗಾಮುಗ್ಗಾ ಬಿದ್ರೂ ಸಮಾಧಾನವಿಲ್ಲ ಎಂದು ಕುಟುಕಿದರು.
ತಮಿಳುನಾಡು ಪರ ಮಾತನಾಡಬೇಡಿ..!
ಮೇಕೆದಾಟು ಯೋಜನೆ(mekedatu project) ಬಗ್ಗೆ ತಮಿಳುನಾಡು ಪರ ಬಿಜೆಪಿಯವರು ಮಾತನಾಡುತ್ತಾರೆ. ದಿನೇಶ್ ಗುಂಡೂರಾವ್ ಕೂಡ ಗೋವಾದಲ್ಲಿ ಉಸ್ತುವಾರಿಯಾಗಿದ್ದಾರೆ. ಆದರೂ ಅವರು ರಾಜ್ಯದ ಪರ ಮಾತನಾಡಿದ್ದರು. ಆದರೆ ನೀವು ತಮಿಳುನಾಡು ಪರ ಮಾತನಾಡ್ತೀರ, ಮೊದಲು ರಾಜ್ಯದ ಪರವಾಗಿ ನಿಲ್ಲಿ. ಇಲ್ಲಿ ಶಾಸಕರಾಗಿ ತಮಿಳುನಾಡು ಪರ ಮಾತನಾಡಬೇಡಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ