ಬೆಂಗಳೂರು (ಆ. 4): ನೂತನ ಸಚಿವರ ಪ್ರಮಾಣ ವಚನದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೊದಲ ಸಚಿವ ಸಂಪುಟ ಸಭೆ ನಡೆಸಿದ್ದಾರೆ. 29 ಜನ ನೂತನ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಸಚಿವ ಸಂಪುಟ ವಿಸ್ತರಣೆ ಬಳಿಕ ಮೊದಲ ಸಂಪುಟ ಸಭೆ ನಡೆಸಿದ್ದು, ಈ ವೇಳೆ ಕೋವಿಡ್ ನಿಯಂತ್ರಣ ಮತ್ತು ನೆರೆ ವೀಕ್ಷಣೆ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಕೋವಿಡ್ ಮೂರನೇ ಅಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೇ, ಅನಾವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ, ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ಕಾರ್ಯಗಳನ್ನು ನೀಡುವ ಸಂಬಂಧ ಸೂಚನೆ ನೀಡಲಾಗಿದೆ ಎಂದರು.
ಕೋವಿಡ್ ನಿಯಂತ್ರಣ ಸಂಬಂಧ ಟಾಸ್ಕ್ ಪೋರ್ಸ್ ಪುನಾರಚನೆ ಬಗ್ಗೆ ತೀರ್ಮಾನ ಮಾಡಲಾಗಿದೆ. ಸರ್ಕಾರ ಬದಲಾವಣೆ ಯಿಂದ ಅಷ್ಟೇ ಟಾಸ್ಕ್ ಫೋರ್ಸ್ ಪುನಾರಚನೆ ಗೆ ನಿರ್ಧಾರ ಮಾಡಲಾಗಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿರುವ ಹಿನ್ನಲೆ ಕೂಡಲೇ ಜಿಲ್ಲೆಗೆ ಹೋಗಿ ಪರಿಸ್ಥಿತಿ ಅವಲೋಕಿಸುವ ಕುರಿತು ತಿಳಿಸಲಾಗಿದೆ. ಹಾಗೇ ಪ್ರವಾಹ ಎಲ್ಲ ವೀಕ್ಷಣೆ ಮಾಡಿ ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು. ನೆರೆ ಹಾನಿ ಕುರಿತು ವರದಿ ಸಲ್ಲಿಕೆಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಲಾಗುವುದು
ಇನ್ನೆರಡು ದಿನದಲ್ಲಿ ಖಾತೆ ಹಂಚಿಕೆ
ಇನ್ನು ಇದೇ ವೇಳೆ ಖಾತೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಖಾತೆ ಹಂಚಿಕೆ ವಿಳಂಬ ಆಗುವುದಿಲ್ಲ. ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಹಂಚಿಕೆ ಬಗ್ಗೆ ನಿರ್ಧಾರ ಆಗಲಿದೆ. ಖಾತೆ ಹಂಚಿಕೆ ಹಿಂದೆ ವಿಳಂಬ ಆಗಿರುವುದು ಗೊತ್ತಿದೆ. ಒಂದು ತಿಂಗಳು ಒಂದು ವಾರ ತಡವಾಗಿದೆ. ಆದರೆ ಈ ಬಾರಿ ಆ ರೀತಿ ಆಗುವುದಿಲ್ಲ. ಆದಷ್ಟು ಬೇಗ ಖಾತೆ ಹಂಚಿಕೆ ಆಗಲಿದೆ. ಖಾತೆ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನ ಮಾಡುವುದಿಲ್ಲ. ಅದನ್ನು ನಾನೇ ನಿರ್ಧಾರ ಮಾಡುತ್ತೇನೆ. ಇದುವರೆಗೂ ಯಾವುದೇ ಖಾತೆ ಬೇಕು ಎಂದು ಸಚಿವರು ಕೇಳಿಲ್ಲ. ಅದೇ ಖಾತೆಯನ್ನು ಮುಂದುವರೆಸಿ ಎಂದು ಕೂಡ ಯಾರು ಕೇಳಿಲ್ಲ. ನೀವು ಯಾವುದೇ ನಿರ್ಧಾರ ಮಾಡಿದ್ದರೂ ಅದಕ್ಕೆ ನಾವು ಅದಕ್ಕೆ ಬದ್ದರಾಗಿರುತ್ತೇವೆ ಎಂದಿದ್ದಾರೆ
ಇದನ್ನು ಓದಿ: ಬಿಎಸ್ವೈ ವಿರುದ್ಧ ಬಂಡಾಯ ಎದ್ದಿದ್ದ ನಾಯಕರಿಗಿಲ್ಲ ಸಚಿವ ಸ್ಥಾನ; ಪ್ರಮಾಣ ವಚನದಿಂದ ದೂರ ಉಳಿದ ನಾಯಕರು
ಶಶಿಕಲಾ ಜೊಲ್ಲೆ ಮೇಲೆ ಗುರುತ ಆರೋಪ ಇಲ್ಲ
ಶಶಿಕಲಾ ಜೊಲ್ಲೆ ಮೇಲೆ ಆರೋಪಗಳು ಕೇಳಿ ಬಂದಿದ್ದು, ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಅವರ ಮೇಲೆ ಬಂದಿರುವ ಆರೋಪ ಅಂತಹ ಗಂಭೀರ ಸ್ವರೂಪದ್ದು ಏನು ಇಲ್ಲ ಎಂದು ಸಮಾಜಾಯಿಷಿ ನೀಡಿದರು. ಇನ್ನು ಪ್ರಮಾಣ ವಚನ ಸ್ವೀಕಾರಕ್ಕೆ ಶಶಿಕಲಾ ಜೊಲ್ಲೆ ಅವರಿಗೆ ಝೀರೋ ಟ್ರಾಪಿಕ್ ನೀಡಿರುವ ವಿಷಯ ಗೊತ್ತಿಲ್ಲ ಎಂದರು.
ಎಲ್ಲರಿಗೂ ಸಚಿವ ಸ್ಥಾನ ಸಾಧ್ಯವಿಲ್ಲ
ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರಿಂದ ಅಸಮಾಧಾನ ಸ್ಪೋಟ ಗೊಂಡಿರುವ ಕುರಿತು ಮಾತನಾಡಿದ ಅವರು, ಎಲ್ಲಾ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಈಗಾಗಲೇ ಕೆಲವರನ್ನು ಕೈ ಬಿಟ್ಡಿದ್ದೇವೆ. ಹಿರಿಯರು ಹಾಗೂ ಸಂಘಟನೆಯಲ್ಲಿ ಸಕ್ರಿಯರಾಗಿರ ಇರುವವರ ಬಗ್ಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇವಾಗ ಅಸಮಧಾನ ಗೊಂಡ ವರ ಜೊತೆ ಮಾತಾಡುತ್ತೇವೆ. ಅವರು ಎಲ್ಲರೂ ನಮ್ಮವರೇ . ಹೀಗಾಗಿ ಅವರನ್ನು ಸಮಧಾನ ಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ