ಬೆಂಗಳೂರು : ಕೊರೋನಾ 2ನೇ ಅಲೆ ಭಾರತದ ಪಾಲಿಗೆ ಯಮನಾಗಿದ್ದು ಎಲ್ಲೆಲ್ಲೂ ಸೂತಕವೇ ಮನೆ ಮಾಡಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಕೊರೋನಾ ಕರ್ಫ್ಯೂನಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದರೆ, ಶಾಂತವಾಗಿರುತ್ತಿದ್ದ ಸ್ಮಶಾನಗಳು ಗಿಜಿಗುಡುತ್ತಿವೆ. ಶವಸಂಸ್ಕಾರದ ವೇಳೆ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರಿಂದ ಸ್ಮಶಾನಗಳು ಕಿಕ್ಕಿರಿದಿರುತ್ತಿದ್ದವು. ಆದರೆ ಈಗ ಸೋಂಕಿತರ ಶವದ ಬಳಿ ಜನರಿಲ್ಲ. ಶವಗಳ ಸುತ್ತ ಶವಗಳೇ ಸುತ್ತವರೆದಿವೆ. ಹೆಣಗಳನ್ನು ಹೊತ್ತ ಆಂಬ್ಯುಲೆನ್ಸ್ಗಳು ಸರತಿ ಸಾಲಿನಲ್ಲಿ ನಿಂತಿವೆ. ಇಂಥಾ ದುರ್ದಿನಗಳಲ್ಲೂ ನಮ್ಮ ಜನಪ್ರತಿನಿಧಿಗಳು ಅಸೂಕ್ಷ್ಮತೆಯಿಂದ ನಡೆದುಕೊಂಡರೆ ಹೇಗೆ?
ಬೆಂಗಳೂರಿನ ಯಲಹಂಕ ಕ್ಷೇತ್ರದ ಗಿಡ್ಡೇನಹಳ್ಳಿಯಲ್ಲಿ ಜನಪ್ರತಿನಿಧಿಗಳ ಅಮಾನವೀಯತೆ ಎಲ್ಲೆ ಮೀರಿದೆ. ಕೊರೋನಾದಿಂದ ಮೃತಪಟ್ಟವರು ಈ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬಹುದು ಎಂಬ ಬೋರ್ಡನ್ನು ಹಾಕಲಾಗಿತ್ತು. ಎರಡು ಸಾಲಿನ ಬೋರ್ಡ್ನಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪರಿಂದ ಹಿಡಿದು ಸ್ಥಳೀಯ ನಾಯಕರವರೆಗಿ 6 ಮಂದಿಯ ಫೋಟೋ ಹಾಕಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಬರೋರಿಗೆ ಊಟ, ತಿಂಡಿ ಕಾಫಿ-ಟೀ ಉಚಿತ ಎಂದು ಫೋಸ್ಟರ್ನಲ್ಲಿ ಬರೆಯಲಾಗಿದೆ. ಇಷ್ಟು ಮಾತ್ರದ ಮಾತ್ಕಾರ್ಯದಲ್ಲೂ ರಾಜಕೀಯ ನಾಯಕರ ಫೋಟೋಗಳು ಕಣ್ಣಿಗೆ ರಾಚುವ ಹಾಗೆ ಹಾಕಲಾಗಿದೆ.
ಇದನ್ನೂ ಓದಿ: ರಾಜಕೀಯ ಗೂಗ್ಲಿ: ಸೋನಿಯಾರನ್ನು ಕೆಳಗಿಳಿಸಿ ದೀದಿಗೆ UPA ಅಧ್ಯಕ್ಷೆ ಪಟ್ಟ ಕಟ್ಟುತ್ತಾರಾ..?
ಕೊರೋನಾ ಅಂತ್ಯಸಂಸ್ಕಾರದ ಫಲಕದಲ್ಲೂ ನಾಯಕರ ಫೋಟೋದ ಅಗತ್ಯವಿತ್ತೇ? ಇದರಲ್ಲೂ ರಾಜಕೀಯ ಲಾಭ ಪಡೆಯಬೇಕಾ? ಬಿಜೆಪಿ ಜನಪ್ರತಿನಿಧಿಗಳು ಇಷ್ಟು ಅಸೂಕ್ಷ್ಮರಾದರೇ? ಎಂದು ಫೋಸ್ಟರ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಲಹಂಕ ಕ್ಷೇತ್ರದ ಬಿಜೆಪಿಗರ ‘ದೊಡ್ಡತನ’ದ ಬಗ್ಗೆ ನ್ಯೂಸ್18 ವರದಿ ಪ್ರಸಾರ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡವರು ಪೋಸ್ಟರನ್ನು ತೆರವುಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ