ಬೆಂಗಳೂರು(ಸೆ.27): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ(Agri Laws) ವಿರುದ್ಧ ರೈತಪರ ಸಂಘಟನೆಗಳು(Farmers Associations) ಮತ್ತೆ ಸಿಡಿದೆದ್ದಿದ್ದು, ಇಂದು ಭಾರತ್ ಬಂದ್ಗೆ(Bharat Bandh) ಕರೆ ನೀಡಿವೆ. ಹೀಗಾಗಿ ಇಂದು ಕೆಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇಂದು ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆ, ಕರ್ನಾಟಕ(Karnataka Bandh)ವೂ ಬಹುತೇಕ ಬಂದ್ ಆಗುವ ನಿರೀಕ್ಷೆ ಇದೆ. ಸಂಯುಕ್ತ ಕಿಸಾನ್ ಮೋರ್ಚಾ(Samyuktha Kisan Morcha) ಭಾರತ್ ಬಂದ್ಗೆ ಕರೆ ಕೊಟ್ಟಿದ್ದು, ಇನ್ನೂ ಹಲವು ಸಂಘಟನೆಗಳು ಬೆಂಬಲ ನೀಡಿವೆ. ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ನೀಡಿವೆ.
ಹಾಗಾದ್ರೆ ಇಂದು ಕರ್ನಾಟಕದಲ್ಲಿ ಬಂದ್ ಹೇಗಿರಲಿದೆ ಅನ್ನೋದನ್ನ ನೋಡೋದಾದ್ರೆ, ರೈತರ ಪರ ಸಂಘಟನೆಗಳಿಂದ ಪ್ರತಿಭಟನೆ, ಧರಣಿ, ಮೆರವಣಿಗೆ, ಹೆದ್ದಾರಿ ಬಂದ್ ಇರುತ್ತದೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ರೈತರಿಂದ ಬೃಹತ್ ಪ್ರತಿಭಟನೆ ರ್ಯಾಲಿ ನಡೆಯಲಿದೆ.
ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು
ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಹಿನ್ನಲೆ, ಬೆಂಗಳೂರಿನಲ್ಲಿ ಖಾಕಿ ಕಣ್ಗಾವಲು ಇಟ್ಟಿದೆ. ನಗರದಾದ್ಯಂತ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಆಯುಕ್ತರುಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 12 ಡಿಸಿಪಿಗಳು, ಎಸಿಪಿಗಳು, 100ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಗಳು, 200ಕ್ಕೂ ಹೆಚ್ಚು ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ
ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ಹೊಯ್ಸಳ, ಚೀತಾ ವಾಹನಗಳ ಮೂಲಕ ಪೊಲೀಸ್ ಪಡೆ ನಿರಂತರ ಗಸ್ತು ತಿರುಗುತ್ತಿದ್ದಾರೆ. ಪ್ರತಿ ವಿಭಾಗದಲ್ಲಿ ಆಯಾ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿಯಾಗಿ 30ಕ್ಕೂ ಹೆಚ್ಚು ಕೆಎಸ್ಆರ್ ಪಿ ತುಕಡಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರದ ಪ್ರಮುಖ ರಸ್ತೆ, ವೃತ್ತ, ಜಂಕ್ಷನ್ ಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೈತರ ರ್ಯಾಲಿ ಹಾಗೂ ಹೆದ್ದಾರಿ ತಡೆ ವೇಳೆ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ತುಮಕೂರು ರಸ್ತೆ, ಏರ್ಪೋರ್ಟ್ ಸಂಪರ್ಕಿಸುವ ದೇವನಹಳ್ಳಿ ರಸ್ತೆ, ಹಳೆ ಮದ್ರಾಸ್ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆಯಾಗದಂತೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಇದನ್ನೂ ಓದಿ:Bharat Bandh: ನಾಳೆ ಭಾರತ್ ಬಂದ್, ಕರ್ನಾಟಕದಲ್ಲಿ ಬಂದ್ ಯಶಸ್ವಿಯಾಗುತ್ತಾ? ಅಂದು ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ
ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಹಿನ್ನಲೆ, ಮೆಜೆಸ್ಟಿಕ್ ಸುತ್ತಲೂ ಬಾರಿ ಪೋಲಿಸ್ ಬಿಗಿ ಭದ್ರತೆ ವಹಿಸಲಾಗಿದೆ. ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಗಳು ಎಂದಿನಂತೆ ಸಂಚಾರ ಮಾಡುತ್ತಿವೆ. ಇಂದು ಬಂದ್ ಹಿನ್ನೆಲೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಮೆಜೆಸ್ಟಿಕ್ ಸುತ್ತಮುತ್ತಲು ನಿಯೋಜನೆ ಮಾಡಲಾಗಿದೆ.
ಭಾರತ್ ಬಂದ್ ಹಿನ್ನೆಲೆ, ರೈತ ನಾಯಕರು ರಾಜ್ಯ, ರಾಷ್ಟ್ರ ಹೆದ್ದಾರಿ ತಡೆ ಹಮ್ಮಿಕೊಂಡಿದ್ದಾರೆ.
ಯಾವೆಲ್ಲಾ ರಸ್ತೆಗಳ ತಡೆ?
ಬೆಂಗಳೂರು ಹೊರವಲಯದಲ್ಲಿ ರಸ್ತೆ ತಡೆಗೆ ರೈತ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ.
- ಹಳೆ ಮದ್ರಾಸ್ ರೋಡ್ ಲಾಕ್
- ಬೆಂಗಳೂರು-ಮೈಸೂರು ರೋಡ್
- ಬಿಡದಿ ಮತ್ತು ಮಂಡ್ಯ ಬಳಿ ರಸ್ತೆ ತಡೆಗೆ ನಿರ್ಧಾರ.
- ಬೆಂಗಳೂರು - ಗೋವಾ ( ರಾಷ್ಟ್ರೀಯ ಹೆದ್ದಾರಿ)
- ಬೆಂಗಳೂರು - ಹೈದರಾಬಾದ್ (ರಾಷ್ಟ್ರೀಯ ಹೆದ್ದಾರಿ)
- ಬೆಂಗಳೂರು - ಚೆನ್ನೈ (ರಾಷ್ಟ್ರೀಯ ಹೆದ್ದಾರಿ)
- ಬೆಂಗಳೂರು - ಮೈಸೂರು ರೋಡ್( ರಾಜ್ಯ ಹೆದ್ದಾರಿ)
- ಬೆಂಗಳೂರು - ಚಾಮರಾಜನಗರ( ರಾಜ್ಯ ಹೆದ್ದಾರಿ)
- ಬೆಂಗಳೂರು - ಮಾಗಡಿ ರೋಡ್ ( ರಾಜ್ಯ ಹೆದ್ದಾರಿ)
- ಬೆಂಗಳೂರು - ಶಿವಮೊಗ್ಗ ( ರಾಜ್ಯ ಹೆದ್ದಾರಿ)
- ಬೆಂಗಳೂರು - ದೊಡ್ಡಬಳ್ಳಾಪುರ ( ರಾಜ್ಯ ಹೆದ್ದಾರಿ)
ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಆಗುವ ಸಾಧ್ಯತೆ ಇದೆ. ಆ ಭಾಗದ ರೈತರನ್ನ ಒಟ್ಟಿಗೆ ಸೇರಿಸಿ ಬಂದ್ ಮಾಡಲಿದ್ದಾರೆ.
ಏನಿರುತ್ತೆ..ಏನಿರಲ್ಲ..?
- ಹಾಲು, ತರಕಾರಿ, ಮೆಡಿಕಲ್, ಆಸ್ಪತ್ರೆ, ಆ್ಯಂಬುಲೆನ್ಸ್, ಹೋಟೆಲ್- ಓಪನ್
- ಕೆಎಸ್ಆರ್ಟಿಸಿ-ಇರುತ್ತೆ.
- ಬಿಎಂಟಿಟಿ- ಇರುತ್ತೆ..
- ಮೆಟ್ರೋ- ಇರುತ್ತೆ..
- ಆಟೋ- ಇರುತ್ತೆ..
- ಟ್ಯಾಕ್ಸಿ- ಇರುತ್ತೆ.
- ಕ್ಯಾಬ್ - ಇರುತ್ತೆ.
- ಬೀದಿ ವ್ಯಾಪಾರ- ಇರುತ್ತೆ.
- ಶಾಲಾ ಕಾಲೇಜು ಇರುತ್ತೆ.
- ಸರ್ಕಾರಿ ಕಚೇರಿ ಇರುತ್ತೆ.
ಬಂದ್ ಗೆ ಯಾರೆಲ್ಲ ಬೆಂಬಲ..?
- ಸಂಯುಕ್ತ ಕಿಸಾನ್ ಮೋರ್ಚಾ
- ರಾಜ್ಯ ರೈತ ಸಂಘ
- ರಾಜ್ಯ ಹಸಿರು ಸೇನೆ
- ರಾಜ್ಯ ಪ್ರಾಂತ ರೈತ ಸಂಘ
- ರೈತ ಕಾರ್ಮಿಕ ಸಂಘ
- ಅಖಿಲ ಭಾರತ್ ಕಿಸಾನ್ ಸಭಾ
- ವಾಟಾಳ್ ನಾಗರಾಜ್ ಬೆಂಬಲ ನೀಡಲಿದ್ದಾರೆ.
ಯಾರೆಲ್ಲಾ ನೈತಿಕ ಬೆಂಬಲ ನೀಡಲಿದ್ದಾರೆ?
- ಕರವೇ ನಾರಾಯಣಗೌಡ ಬಣ ಬಂದ್ಗೆ ನೈತಿಕ ಬೆಂಬಲ ನೀಡಲಿದೆ. ಹೋರಾಟಕ್ಕೆ ಮಾತ್ರ ಬೆಂಬಲ, ಬಂದ್ಗೆ ಬೆಂಬಲವಿಲ್ಲ.
- ಕೆಎಸ್ಆರ್ಟಿಸಿ ಬಿಎಂಟಿಸಿ ನೌಕರರ ಸಂಘ ನೈತಿಕ ಬೆಂಬಲ
- ಆಟೋ ಊಬರ್ ಓಲಾ ಸಂಘಟನೆಗಳು ನೈತಿಕ ಬೆಂಬಲ
- ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ
- ಲಾರಿ ಮಾಲೀಕರ ಸಂಘ- ನೈತಿಕ ಬೆಂಬಲ
- ರುಪ್ಸಾ, ಕ್ಯಾಮ್ಸ್ ಸಂಘಟನೆ - ನೈತಿಕ ಬೆಂಬಲ
ಭಾರತ್ ಬಂದ್ ಬೆಂಬಲಿಸುವಂತೆ ರೈತ ಪರ ಸಂಘಟನೆಗಳು ಮನವಿ ಮಾಡಿವೆ.
ಓಲಾ, ಊಬರ್ ಇರುತ್ತಾ?
ಕೃಷಿ ಮಸೂದೆಗಳನ್ನ ಖಂಡಿಸಿ ರೈತರಿಂದ ನಾಳೆ ಭಾರತ್ ಬಂದ್ ಹಿನ್ನೆಲೆ, ಸೋಮವಾರ ಓಲಾ, ಊಬರ್ ಟ್ಯಾಕ್ಸಿ ಸೇವೆಗೆ ಅಡ್ಡಿಯಿಲ್ಲ. ಎಂದಿನಂತೆ ಓಲಾ ಊಬರ್ ಟ್ಯಾಕ್ಸಿ ಸೇವೆ ಇರಲಿದೆ. ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಲಿದ್ದೇವೆ. ಓಲಾ ಊಬರ್ ಟ್ಯಾಕ್ಸಿ ಸೇವೆ ಎಂದಿನಂತೆ ಇರಲಿದೆ ಎಂದು ಓಲಾ ಊಬರ್ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್
ಅಧ್ಯಕ್ಷ ತನ್ವೀರ್ ಷಾಷ ಮಾಹಿತಿ ನೀಡಿದ್ದಾರೆ.
ಆಟೋ, ಟ್ಯಾಕ್ಸಿ ಇರುತ್ತಾ?
ಇನ್ನು, ಬೆಂಗಳೂರು ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ ನೈತಿಕ ಬೆಂಬಲ ನೀಡುತ್ತಿದೆ. ಆದರ್ಶ ಆಟೋ ಚಾಲಕರ ಸಂಘದಿಂದಲೂ ನೈತಿಕ ಬೆಂಬಲ ಸಿಗಲಿದೆ. ಆದರ್ಶ್ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ನೈತಿಕ ಬೆಂಬಲ ನೀಡಲಿದ್ದಾರೆ.
ಬೀದಿಬದಿ ವ್ಯಾಪಾರಿಗಳ ನೈತಿಕ ಬೆಂಬಲ
ಬೀದಿ ಬದಿ ವ್ಯಾಪಾರಿಗಳು ಭಾರತ್ ಬಂದ್ ನೈತಿಕ ಬೆಂಬಲ ನೀಡಲಿದ್ದಾರೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ಮಾರುಕಟ್ಟೆ ಓಪನ್ ಇದೆಯಾ?
ಸೋಮವಾರ ಎಂದಿನಂತೆ ಎಪಿಎಂಸಿ ಮಾರುಕಟ್ಟೆ ಓಪನ್ ಇರಲಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆ ಎಂದಿನಂತೆ ಓಪನ್ ಇರಲಿದೆ ಎಂದು ಯಶವಂತಪುರ ಎಪಿಎಂಸಿ ಕಾರ್ಮಿಕ ಸಂಘದ ಅಧ್ಯಕ್ಷ ಅರುಣ್ ಪರಮೇಶ್ ಮಾಹಿತಿ ನೀಡಿದ್ದಾರೆ.
ಲಾರಿ ಸಂಚಾರ ಇರುತ್ತಾ?
ರಾಜ್ಯದಲ್ಲಿ ಸೋಮವಾರ ಎಂದಿನಂತೆ ಲಾರಿಗಳು ಸಂಚಾರ ಮಾಡಲಿವೆ. ಲಾರಿ ಸಂಚಾರದಲ್ಲಿ ಸೋಮವಾರ ಯಾವುದೇ ವ್ಯತ್ಯಯ ಇಲ್ಲ. ಎಂದಿನಂತೆ ಲಾರಿ ರಾಜ್ಯಾದ್ಯಂತ ಓಡಾಟ ನಡೆಸಲಿವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಆಧ್ಯಕ್ಷ ಷಣ್ಮಗಪ್ಪ ಮಾಹಿತಿ ನೀಡಿದ್ದಾರೆ.
ಹೋಟೆಲ್ ಓಪನ್ ಇರುತ್ತಾ?
ರಾಜ್ಯದಲ್ಲಿ ಎಂದಿನಂತೆ ಹೋಟೆಲ್ ಮತ್ತು ರೆಸ್ಟೋರೆಂಟ್ ಸೇವೆ ಇರುತ್ತೆ. ಭಾರತ್ ಬಂದ್ಗೆ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ನೈತಿಕ ಬೆಂಬಲ ನೀಡಿವೆ. ಹೋಟೆಲ್ ಹಾಗೂ ರೆಸ್ಟೋರೆಂಟ್ ಮುಚ್ಚಿದ್ರೆ ತೊಂದರೆ ಆಗುತ್ತೆ. ಸೋಮವಾರ ರಾಜ್ಯಾದ್ಯಂತ ಹೋಟೆಲ್ ಹಾಗೂ ರೆಸ್ಟೋರೆಂಟ್ ಓಪನ್ ಇರುತ್ತೆ ಎಂದು ಕರ್ನಾಟಕ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮಾಹಿತಿ ನೀಡಿದ್ದಾರೆ. ಕೊರೋನಾದಿಂದ ಸಂಕಷ್ಟದಲ್ಲಿದ್ದೇವೆ. ಹೀಗಿರುವಾಗ ಹೋಟೆಲ್ ಮುಚ್ಚಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶಾಲಾ-ಕಾಲೇಜು ಓಪನ್ ಇರುತ್ತಾ?
ಒಂದೂವರೆ ವರುಷದಿಂದ ಶಾಲಾ-ಕಾಲೇಜು ತೆರೆದಿಲ್ಲ. ಇದೀಗ ಶಾಲಾಕಾಲೇಜು ಆರಂಭವಾಗಿವೆ. ಭಾರತ್ ಬಂದ್ ಗೆ ನೈತಿಕ ಬೆಂಬಲ ನೀಡಲಾಗುವುದು. ಎಂದಿನಂತೆ ಶಾಲಾ-ಕಾಲೇಜು ಓಪನ್ ಇರಲಿದೆ ಎಂದು ರುಪ್ಸಾ ಹಾಗೂ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆಗಳು ಸ್ಪಷ್ಟನೆ ನೀಡಿದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ