ಬೆಂಗಳೂರು : ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಚಿಕಿತ್ಸೆ, ಸೌಲಭ್ಯಗಳಲ್ಲಿ ಸಾಕಷ್ಟು ಕುಂದುಕೊರತೆಗಳಿವೆ. ಹೀಗಾಗಿ ಅನೇಕ ಜನಪರ ಸಂಘಟನೆಗಳು, ಸಂಸ್ಥೆಗಳು ಈ ಸಂಕಷ್ಟ ಪರಿಸ್ಥಿತಿಯಲ್ಲಿ ತಮ್ಮ ನೆರವಿನ ಹಸ್ತವನ್ನು ಚಾಚಿವೆ. ಈ ನಿಟ್ಟಿನಲ್ಲಿ ಮಂತ್ರ ಫಾರ್ ಚೇಂಜ್ ಹಾಗೂ ಸೂರಿಯಾ ಫೌಂಡೇಷನ್ ನ ಯುವ ತಂಡ ನಗರದಲ್ಲಿ ಕೋವಿಡ್ ಸೋಂಕಿತರು ಮತ್ತು ಸೋಂಕು ನಿಯಂತ್ರಣಕ್ಕೆ ಐದು ಸೇವಾ ಅಂಶದ ಕಾರ್ಯಕ್ರಮದಡಿ ಸೇವಾ ಚಟುವಟಿಕೆಯಲ್ಲಿ ನಿರತವಾಗಿದೆ.
30 ಆಂಬ್ಯುಲೆನ್ಸ್: ಕೋವಿಡ್ ಸೋಂಕು ಜನರನ್ನ ಬಿಟ್ಟು ಬಿಡದೇ ಕಾಡುತ್ತಿದ್ದು ಬಡವ ಬಲ್ಲಿಗನೆನ್ನದೆ ಎಲ್ಲಾ ವರ್ಗದ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ತಳಕಚ್ಚಿರುವ ಕುಟುಂಬಗಳಲ್ಲಿ ಸೋಂಕಿತರನ್ನ ಆಸ್ಪತ್ರೆಗೆ ಕರೆತರಲು ಹಣಕಾಸಿನ ವ್ಯವಸ್ಥೆ ಇಲ್ಲದಿದ್ದಾಗ ಅವರ ಬಳಕೆಗೆಂದು ಈ ತಂಡ 30 ಆಂಬುಲೆನ್ಸ್ಗಳನ್ನ ಮೀಸಲಿಟ್ಟಿದೆ. ಕೋವಿಡ್ ಸೋಂಕಿತರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುತ್ತಿದೆ. ಮನೆ ಬಾಗಿಲಿಗೆ ಆಕ್ಸಿಜನ್: ಇನ್ನೂ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ಗಳ ಸಮಸ್ಯೆ ಎಚ್ಚಿದ್ದು, ಬೆಡ್ ಸಿಗದೇ ಆಮ್ಲಜನಕದ ಅಗತ್ಯವಿರುವವರಿಗೆ ಮನೆ ಬಳಿಗೆ ತೆರಳಿ ಉಚಿತ ಆಕ್ಸಿಜನ್ ಸೌಲಭ್ಯ ನೀಡುತ್ತಿದ್ದು ಆಕ್ಸಿಜನ್ ಪೂರೈಕೆಗೆ 120 ಆಮ್ಲಜನಕ ಸಾಂದ್ರಕಗಳ ಸೌಲಭ್ಯ ಸಹ ನೀಡಲಿಗೆ ಈ ತಂಡ ಅಲ್ಲದೆ ಅಗತ್ಯವಿರುವ ಕುಟುಂಬಗಳಿಗೆ ಪಡಿತರ ಮತ್ತು ವೈದ್ಯಕೀಯ ಕಿಟ್ ಗಳನ್ನು ವಿತರಿಸುತ್ತಿದೆ.
ಮೆಡಿಕಲ್ ಕಿಟ್: ಇದಲ್ಲದೇ ಗೃಹ ಆರೈಕೆಯಲ್ಲಿರುವ ಕುಟುಂಬಗಳಿಗೆ ಫಲ್ಸ್ ಆಕ್ಸಿ ಮೀಟರ್, ಥರ್ಮಾ ಮೀಟರ್, ಮುಖಗವಸು (ಮಾಸ್ಕ್) ಒಳಗೊಂಡಿರುವ ವೈದ್ಯಕೀಯ ಕಿಟ್ ಗಳನ್ನು ಸಹ ಉಚಿತವಾಗಿ ವಿತರಣೆ ಮಾಡುತ್ತಿದೆ. ಪುನಿತ್ ಅವರ ನೇತೃತ್ವದ ಯುವ ತಂಡದಲ್ಲಿ ಶರವಣ, ಸಂತೋಷ್, ಮಯೂರ್ ಸೇರಿದಂತೆ 40 ಕ್ಕೂ ಹೆಚ್ಚು ಸದಸ್ಯರು ದಿನದ 24 ಗಂಟೆಯು ಹಗಲಿರುಳು ಸೋಂಕಿತರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕಿತರು ಮತ್ತು ತೀರಾ ಅಗತ್ಯವಿರುವವರ ಸೇವೆಗಾಗಿ 10 ಜನರ ಸಹಾಯವಾಣಿ ಪ್ರಾರಂಭಿಸಿದ್ದು ಈ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಅಗತ್ಯವಿರುವವರು ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ತಮಗೆ ಬೇಕಾದ ಅಗತ್ಯ ಸೌಕರ್ಯಗಳನ್ನ ಪಡೆದುಕೊಳ್ಳಬಹುದಾಗಿದೆ. 080-47181616, 18001205577
ಕೋವಿಡ್ ಸೋಂಕಿತರು ಹಾಗೂ ಸೋಂಕಿತರ ಕುಟುಂಬಗಳ ಸೇವೆ ಮಾಡುತ್ತಿರುವ ಈ ತಂಡ ಈವರೆಗೆ ಸುಮಾರು ಐದು ಸಾವಿರ ಪಡಿತರ ಕಿಟ್ ಗಳು, ಎರಡು ಸಾವಿರ ಮೆಡಿಕಲ್ ಕಿಟ್ ಗಳನ್ನು ವಿತರಣೆ ಮಾಡಿದೆ. ಇವರ ಬಳಿ 120 ಆಮ್ಲಜನಕ ಸಾಂದ್ರಕಗಳಿದ್ದು ಸೇವಾ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಹಾಗೂ ಬೆಂಗಳೂರಿನ ಯಾವುದೇ ಭಾಗದಲ್ಲಿ ಸೇವೆ ಬೇಕಾದಲ್ಲಿ ಸದಾ ಸೀಮಿತರಾಗಿರುತ್ತೆ ಈ ತಂಡ. ತಂಡದ ಕಾಲ್ ಸೆಂಟರ್ ಹಾಗೂ ದೂರವಾಣಿ ಸಹಾಯಕ್ಕೆ ಫೋನ್ ಮಾಡಿ ಸಹಾಯವನ್ನು ಪಡೆದುಕೊಳ್ಳಬಹುದು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ