ಜಾಮರಾಜಪೇಟೆಯಲ್ಲಿ ಕೋಟೆ ಕಟ್ಟಿಕೊಟ್ಟಿದ್ದ ಜಮೀರ್ ನಿವಾಸಕ್ಕೆ ಇಡಿ ಲಗ್ಗೆ ಇಟ್ಟಿದೆ ಒಟ್ಟು 6 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಯನ್ನ ಪರಿಶೀಲಿಸಿದ್ದಾರೆ. ಅಷ್ಟಕ್ಕೂ ಜಮೀರ್ ನಿವಾಸದ ಮೇಲೆ ದಾಳಿಯಾಗಿದ್ದೇಕೆ? ಭವ್ಯ ಬಂಗಲೆಯೇ ಕಾರಣವಾಯಿತಾ? ಎರಡು ಎಕರೆಯಲ್ಲಿರೋ ವಿಸ್ತಾರವಾದ ಅರಮನೆ. ಇಂಥಾ ಬೃಹತ್ ಕೋಟೆಗೆ ದೆಹಲಿಯಿಂದ ಬಂದ 25ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ಟೀಮ್ ಸಿಆರ್ ಪಿಎಫ್ ಬಿಗಿ ಭದ್ರತೆಯೊಂದಿಗೆ ಲಗ್ಗೆ ಇಟ್ಟಿತ್ತು. ಸೂರ್ಯ ಹುಟ್ಟೋ ಮೊದಲೇ, ಆರು ಗಂಟೆಗೆ ಅಕ್ರಮ ಬೇಟೆಯಾಡೋಕೆ ಆಫೀಸರ್ಸ್ ಮನೆ ಹೊರಗೆ ಕಾಲಿಂಗ್ ಬೆಲ್ ಒತ್ತಿದ್ರು. ಒಟ್ಟು ಆರು ಕಾರುಗಳಲ್ಲಿ ಬಂದ ಅಧಿಕಾರಿಗಳನ್ನ ಕಂಡು ಡೋರ್ ತೆಗೆದ ಜಮೀರ್ ಅಹ್ಮದ್ ಖಾನ್, ಮುಂದೆ ನಿಂತಿದ್ದ ಇಡಿ ಅಧಿಕಾರಿಗಳನ್ನ ಕಂಡು ಒಮ್ಮೆ ವಿಚಲಿತರಾಗಿದ್ರು.
ಏಕಕಾಲಕ್ಕೆ ಜಮೀರ್ಗೆ ಸಂಬಂಧಿಸಿದ ಆರು ಕಡೆ ಇಡಿ ಅಧಿಕಾರಿಗಳು ರೇಡ್ ನಡೆಸಿದ್ರು. ಜಮೀರ್ಗೆ ಸೇರಿದ ಮೂರು ಮನೆ, ಯುಬಿ ಸಿಟಿಯಲ್ಲಿರೋ ಫ್ಲ್ಯಾಟ್, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಕಂಟೋನ್ಮೆಂಟ್ ಬಳಿಯ ಬಂಗಲೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ರು. ಕೋಟಿ ಕೋಟಿ ವ್ಯವಹಾರ, ಮನೆ, ಬಂಗಲೆ, ಕಾರು, ಸ್ಥಿರಾಸ್ತಿ, ಚರಾಸ್ತಿ ಹೀಗೆ ಜಮೀರ್ ಕೂಡಿಟ್ಟಿದ್ದ ಆಸ್ತಿಯ ಮಾಹಿತಿ ಕೆದಕಿದ ಇಡಿ, ಜಮೀರ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಬೆವರಳಿಸಿದೆ. ಜಮೀರ್ಗೆ ಕಂಟಕವಾಗಿದ್ದೇ 90 ಕೋಟಿಯ ಪ್ರಾಪರ್ಟಿಯ ವ್ಯವಹಾರ ಎನ್ನಲಾಗ್ತಿದೆ. 90 ಕೋಟಿಗೆ ಸೇಲ್ ಆಗಿದ್ದ ಆಸ್ತಿಯನ್ನ ಕೇವಲ 9.38 ಕೋಟಿ ರೂಪಾಯಿಗೆ ಮಾರಿದ್ದಾಗೆ ಜಮೀರ್ ಮಾಹಿತಿ ನೀಡಿದ್ರು. ಪ್ರಾಪರ್ಟಿ ವ್ಯಾಜ್ಯ ಇದ್ದು ಈ ವ್ಯವಹಾರದಲ್ಲಿ 80 ಕೋಟಿ ರೂಪಾಯಿ ರೂಪಾಯಿ ನಗದು ರೂಪಾದಲ್ಲಿ ಪಡೆದಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಇಡಿಯ ಸತತ ಕಾರ್ಯಾಚರಣೆಯಿಂದ ಜಮೀರ್ ಅಹ್ಮದ್ ಪೂರ್ತಿ ವಿಚಲಿತರಾಗಿದ್ರು. ಹಣಕಾಸಿನ ವ್ಯವಹಾರ ಸಂಬಂಧ ಜಮೀರ್ ಅಕೌಂಟೆಡ್ ನ ಕರೆಸಿ ಇಡಿ ವಿಚಾರಣೆ ಮಾಡಲಾಗಿತ್ತು. ಆಗ ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿರೋ ಇಡಿ, ವ್ಯವಹಾರ ನೋಡಿಕೊಳ್ತಿದ್ದ ಜಮೀರ್ ಸಿಬ್ಬಂದಿಯ ವಿಚಾರಣೆ ಸಹ ಮಾಡಿತ್ತು. ಮನ್ಸೂರ್ ಜೊತೆ ಸ್ನೇಹ ಪ್ರಾರಂಭ, ಐಎಂಎ ಸಂಸ್ಥೆಯ ಜೊತೆಗೆ ಒಡನಾಟ, ವ್ಯವಹಾರ ,ಹಣ ವರ್ಗಾವಣೆ ಮಾಹಿತಿ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ. ಜಮೀರ್ ಸೇರಿದಂತೆ ಆರು ಮಂದಿ ಸಹೋದರರ ವಿಚಾರಣೆ ನಡೆದಿದೆ...
ಇದನ್ನೂ ಓದಿ: ಸಿದ್ದರಾಮಯ್ಯನೇ ಜಮೀರ್ ಮನೆ ಮೇಲೆ ED ದಾಳಿ ಮಾಡಿಸಿದ್ದಾರೆ: ಬಿಜೆಪಿ ಆರೋಪದ ಹಿಂದಿನ ಗುಟ್ಟೇನು?
ಜೊತೆಗೆ ಸಹೋದರರು ನ್ಯಾಷನಲ್ ಟ್ರಾವೆಲ್ಸ್ ಬ್ಯುಸಿನಸ್ ನೋಡಿಕೊಳ್ತಿದ್ದು, ಅದರ ಬಗ್ಗೆಯೂ ಮಾಹಿತಿ ಕಲೆಹಾಕ್ತಿದೆ. ಮನೆಯ ಜತೆಗೆ ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್ ಹೊಂದಿದ್ದಾರೆ. ಹೀಗೆ ಭವ್ಯ ಬಂಗಲೆ, ನ್ಯಾಷನಲ್ ಟ್ರಾವೆಲ್ಸ್ , ರಿಚ್ಮಂಡ್ ಟೌನ್ನಲ್ಲಿ ಸ್ಥಿರಾಸ್ತಿ, ಶಿವಾಜಿನಗರದ ಸ್ಟೇಷನ್ ರಸ್ತೆ ಬಳಿ ಪ್ರಾಪರ್ಟಿ ಹಾಗೂ ಸದಾಶಿವನಗರದಲ್ಲಿ ಪ್ಲಾಟ್ ನ್ನ ಹೊಂದಿದ್ದಾರೆ. ಶ್ರೀಲಂಕಾದಲ್ಲಿ ಕಳೆದ ವರ್ಷದ ಹಿಂದೆ ಕ್ಯಾಸಿನೋಗೆ ಶೇರ್ ಹಾಕಿ ಇತ್ತೀಚೆಗೆ ವಾಪಸ್ ತೆಗೆದುಕೊಂಡಿದ್ರು ಎಂಬ ಅನುಮಾನವಿದೆ. ಕೇವಲ ಬೆಂಗಳೂರಷ್ಟೇ ಅಲ್ಲ, ವಿದೇಶಗಳಲ್ಲೂ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಕಳೆದ 2 ವರ್ಷದಿಂದ ದುಪ್ಪಟ್ಟು ಆದಾಯವಿದ್ರೂ ತೆರಿಗೆಯನ್ನ ಸರಿಯಾಗಿ ಪಾವತಿಸಿದೇ ವಂಚಿಸಿದ್ದಾರೆ ಅಂತಾನೂ ಆರೋಪಿಸಲಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ