• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೊರೋನಾ ಎಫೆಕ್ಟ್;  ರೈತನ ಬೆಳೆಗಿಲ್ಲ ಕಿಮ್ಮತ್ತು, ಮಾರುಕಟ್ಟೆ ಇಲ್ಲದೆ ಕಟಾವಿಗೆ ಬಂದ ಫಸಲು ಮಣ್ಣುಪಾಲು!

ಕೊರೋನಾ ಎಫೆಕ್ಟ್;  ರೈತನ ಬೆಳೆಗಿಲ್ಲ ಕಿಮ್ಮತ್ತು, ಮಾರುಕಟ್ಟೆ ಇಲ್ಲದೆ ಕಟಾವಿಗೆ ಬಂದ ಫಸಲು ಮಣ್ಣುಪಾಲು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕ್ರೂರಿ ಕೊರೋನಾ ಸೃಷ್ಟಿಸುತ್ತಿರುವ ಅವಾಂತರ ಒಂದೆರಡು ಅಲ್ಲ. ಎಲ್ಲಾ ಕ್ಷೇತ್ರಗಳಂತೆಯೇ ಕೃಷಿ ಕ್ಷೇತ್ರದ ಮೇಲೆಯೂ ಕೊರೋನಾ ತನ್ನ ಕರಿ ನೆರಳನ್ನು ಚಾಚಿದೆ. ಬಡಪಾಯಿ ರೈತರು ದಿಕ್ಕು ತೋಚದಂತಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.

  • Share this:

ಆನೇಕಲ್: ಮಾಹಾಮಾರಿ ಕೊರೋನಾ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಹೌದು, ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ತಿಂಗಳುಗಟ್ಟಲೆ ಲಾಕ್ ಡೌನ್ ಘೋಷಿಸಿದೆ. ಇದರ ಪರಿಣಾಮವಾಗಿ ರೈತರು ಬೆಳೆದ ಹೂ, ತರಕಾರಿ ಹಣ್ಣಿಗೆ ಮಾರುಕಟ್ಟೆ ಇಲ್ಲದೆ ಪರದಾಡುವಂತಾಗಿದೆ. ಉತ್ತಮ ಫಸಲು ಬಂದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಷ್ಟ ಉಂಟಾಗಿದ್ದು,  ಬೇರೆ ದಾರಿ ಇಲ್ಲದೆ ತಾನು ಬೆಳೆದ ಬೆಳೆಗಳನ್ನೇ ನಾಶಪಡಿಸುತ್ತಿದ್ದಾರೆ. 


ಹೌದು, ಹೀಗೆ ಕಟಾವಿಗೆ ಬಂದ ಟೊಮ್ಯಾಟೊ ಫಸಲನ್ನು ಸ್ವತಃ ರೈತರೇ ಮಣ್ಣಿನ‌ ಗುಂಡಿಗೆ ಕಿತ್ತೆಸೆಯುತ್ತಿದ್ದಾರೆ. ನಳನಳಿಸುತ್ತಿರುವ ಸೇವಂತಿ ಹೂವನ್ನು ರೈತರೇ ನಾಶ ಮಾಡುತ್ತಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಬಹುತೇಕ ರೈತರು ತಮ್ಮ ಬೆಳೆಯನ್ನು ತಾವೇ ಮಣ್ಣುಪಾಲು ಮಾಡಿದ್ದಾರೆ. ಆನೇಕಲ್ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಬೆಳೆಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಇದರ ನಡುವೆ ಬಹುತೇಕ ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಕೊರೋನಾ ಮಹಾಮಾರಿ ಅಬ್ಬರಕ್ಕೆ ಲಾಕ್ ಡೌನ್ ಪೋಷಣೆ ಮಾಡಲಾಗಿದ್ದು, ಹೂ ಮತ್ತು ತರಕಾರಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಇದನ್ನು ಓದಿ: GST Council Meeting; 43ನೇ ಜಿಎಸ್​ಟಿ ಕೌನ್ಸಿಲ್ ಸಭೆ; ರಾಜ್ಯಕ್ಕೆ ಬರಬೇಕಾಗಿರುವ 11 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ


ಕೊರೊನಾ ಎರಡನೇ ಅಲೆ ಇಷ್ಟು ಅಪಾಯಕಾರಿಯಾಗಲಿದೆ ಎಂಬುದು ಸ್ವತಃ ರೈತರಿಗೂ ನಿರೀಕ್ಷೆ ಇರಲಿಲ್ಲ. ಉತ್ತಮ ಇಳುವರಿಯೆನೋ ಬಂದಿದೆ. ಆದರೆ ಬೀನ್ಸ್, ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನು ಖರೀದಿಸುವವರು ಇಲ್ಲದೇ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಲಾಭ ಇರಲಿ ಹಾಕಿರುವ ಬಂಡವಾಳ ಸಹ ವಾಪಸ್ ಬರದೇ ರೈತರು ಟೊಮ್ಯಾಟೊ ತಿಪ್ಪೆಗೆ ಎಸೆಯುತ್ತಿದ್ದಾರೆ. ಕಟಾವಿಗೆ ಬಂದಿರುವ ಟೊಮ್ಯಾಟೊ ಕೀಳದಿದ್ದರೆ ರೋಗ ಹೆಚ್ಚಾಗುತ್ತದೆ. ಕಿತ್ತರೆ ಟೊಮ್ಯಾಟೊ ಕೇಳುವವರಿಲ್ಲ ಎಂದು ರೈತ ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.


ಇನ್ನೂ ಲಾಕ್ ಡೌನ್ ಇಲ್ಲದೆ ಇದ್ದಿದ್ದರೆ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದೆ. ಆದರೆ ಕೊರೋನಾ ಮಾರಿ ನಮ್ಮ ಬದುಕನ್ನು ಕಸಿದುಕೊಂಡಿದೆ. ಸುಮಾರು ಎರಡು ಪ್ರದೇಶದಲ್ಲಿ ಬೀನ್ಸ್ ಮತ್ತು ಸೇವಂತಿ ಹೂ ಬೆಳೆಯಲಾಗಿದೆ. ಉತ್ತಮ ಫಸಲು ಬಂದಿದೆ. ಆದರೆ ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ರೈತರ ಫಸಲನ್ನು ಕೇಳುವವರು ಇಲ್ಲವಾಗಿದೆ. ಸರ್ಕಾರ ಸಹ ರೈತರಿಗೆ ಅಗತ್ಯ ನೆರವು ನೀಡುವಲ್ಲಿ ವಿಫಲವಾಗಿದೆ. ಹಾಗಾಗಿ ಬೇರೆ ದಾರಿಯಿಲ್ಲದೆ ಸೇವಂತಿ ಹೂ ಗಿಡಗಳನ್ನು ಕಿತ್ತೆಸೆಯಲಾಗುತ್ತಿದೆ ಎಂದು ರೈತ ಮಂಜುನಾಥ್ ತಿಳಿಸಿದ್ದಾರೆ.


ಒಟ್ಟಿನಲ್ಲಿ ಕ್ರೂರಿ ಕೊರೋನಾ ಸೃಷ್ಟಿಸುತ್ತಿರುವ ಅವಾಂತರ ಒಂದೆರಡು ಅಲ್ಲ. ಎಲ್ಲಾ ಕ್ಷೇತ್ರಗಳಂತೆಯೇ ಕೃಷಿ ಕ್ಷೇತ್ರದ ಮೇಲೆಯೂ ಕೊರೋನಾ ತನ್ನ ಕರಿ ನೆರಳನ್ನು ಚಾಚಿದೆ. ಬಡಪಾಯಿ ರೈತರು ದಿಕ್ಕು ತೋಚದಂತಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.


ವರದಿ: ಆದೂರು ಚಂದ್ರು

Published by:HR Ramesh
First published: