ಬೆಂಗಳೂರು: ರೈತರಿಂದ ಟ್ರ್ಯಾಕ್ಟರ್ ಗಳನ್ನ ಕದ್ದು ಮತ್ತೆ ಅದೇ ರೈತರಿಗೇ ಲೀಜ್ ಕೊಡುತ್ತಿದ್ದ ಖತರ್ನಾಕ್ ಖದೀಮನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಬೋರೇಗೌಡ ಎಂಬುವನೇ ಆ ಖತರ್ನಾಕ್ ಕಳ್ಳ. ಸುಂಕದಕಟ್ಟೆಯ ಟ್ರ್ಯಾಕ್ಟರ್ ಕಳವು ಪ್ರಕರಣ ಬೆನ್ನು ಹತ್ತಿದ್ದ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಪ್ರಶಾಂತ್ ಮತ್ತು ತಂಡ, ಬೋರೇಗೌಡನಿಂದ ಬರೋಬ್ಬರಿ 12 ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಂಡಿದೆ.
ಬೋರೇಗೌಡ ನಗರಕ್ಕೆ ತರಕಾರಿ ಹಣ್ಣು ಮಾರಲು ಬರುತ್ತಿದ್ದ ಟ್ರ್ಯಾಕ್ಟರ್ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ. ಬೆಂಗಳೂರು ಅಲ್ಲದೇ ಹೊರವಲಯದ ಸುತ್ತಮುತ್ತ ಸಹ ಓಡಾಡುತ್ತಿದ್ದ. ಟ್ರ್ಯಾಕ್ಟರ್ ಕದಿಯುವಾಗ ಅದನ್ನು ಸ್ವಲ್ಪ ದೂರ ತಳ್ಳಿ ನಂತರ ಸ್ಟಾರ್ಟ್ ಮಾಡಿ ಸೀದಾ ಮಂಡ್ಯ ಕಡೆ ಹೋಗಿ ಅಲ್ಲಿ ಲೀಜ್ ಗೆ ಕೊಡುತ್ತಿದ್ದ. ಯಾರಾದರೂ ಖರೀದಿಗೆ ಕೇಳಿದರೆ ಮಾರಾಟ ಕೂಡ ಮಾಡುತ್ತಿದ್ದ. ಆದರೆ ಯಾವುದೇ ದಾಖಲೆ ಕೊಡುತ್ತಿರಲಿಲ್ಲ. ಕಡಿಮೆ ಬೆಲೆಗೆ ಟ್ರ್ಯಾಕ್ಟರ್ ಸಿಕ್ಕಿತ್ತಲಾ ಎಂದು ಖರೀದಿ ಮಾಡಿದವರು ಸಹ ದಾಖಲೆ ಕೇಳುತ್ತಿರಲಿಲ್ಲ. ಇವನ ಮತ್ತೊಬ್ಬ ಸಹವರ್ತಿ ಆನಂದ್ ಎಂಬಾತ ಸದ್ಯ ತಲೆ ಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ.
ಇದರ ಜೊತೆಗೆ ಪಶ್ಚಿಮ ವಿಭಾಗದಲ್ಲಿ ಮೂರ್ನಾಲ್ಕು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ಐಷಾರಾಮಿ ಜೀವನಕ್ಕೆ ಕಳ್ಳತನ ಶುರುಹಚ್ಚಿಕೊಂಡಿದ್ದ ಆರೋಪಿಗಳನ್ನು ಬಂದಿಸಿದ್ದಾರೆ. ಲಾದಿನ್ ಖಾನ್, ಸೈಯದ್ ಮುಸಾವೀರ್, ಫಹಾದ್ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನು ಓದಿ: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 2 ಕೋಟಿ ವಂಚಿಸಿದ್ದ ಭೂಪ; ಖತರ್ನಾಕ್ ಕಳ್ಳನ ಬಂಧನ
ಫೇಸ್ ಬುಕ್ ಪೇಜ್ ನಲ್ಲಿ ಹೈ ಎಂಡ್ ಬೈಕ್ ಮಾಡುವುದಾಗಿ ಮೊದಲು ಪೋಸ್ಟ್ ಮಾಡುತ್ತಿದ್ದರು. ನಕಲಿ ನಂಬರ್ ಪ್ಲೇಟ್ ಹಾಕಿ ಪೋಸ್ಟ್ ಮಾಡ್ತಿದ್ದು,ಇದನ್ನು ಗಮನಿಸಿದ್ದ ಒರಿಜನಲ್ ನಂಬರ್ ಪ್ಲೇಟ್ ಓನರ್ ಪೋಸ್ಟ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಸ್ಟ್ ಬೆನ್ನತ್ತಿದ ಮಾಗಡಿ ರೋಡ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ವಿಪರ್ಯಾಸವೆಂದರೆ ಆರೋಪಿಗಳು ಬಿಬಿಎಂ, ಬಿಬಿಎ ವಿದ್ಯಾರ್ಥಿಗಳಾಗಿದ್ದು, ಹಣಕ್ಕಾಗಿ ಈ ಕೃತ್ಯ ನಡೆಸಿದ್ದಾಗಿ ಗೊತ್ತಾಗಿದೆ. ಬಂಧಿತರಿಂದ 15 ಲಕ್ಷ ರೂ. ಬೆಲೆ ಬಾಳುವ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ