• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Viral video: ಅಮಾನವೀಯ ಕೃತ್ಯ: ಹುಳಿಮಾವಿನಲ್ಲಿ ಬೀದಿನಾಯಿ ಮೇಲೆ ಕಾರು​ ಹತ್ತಿಸಿದ ನಿವೃತ್ತ ಸಬ್​ ಇನ್ಸ್​ಪೆಕ್ಟರ್​

Viral video: ಅಮಾನವೀಯ ಕೃತ್ಯ: ಹುಳಿಮಾವಿನಲ್ಲಿ ಬೀದಿನಾಯಿ ಮೇಲೆ ಕಾರು​ ಹತ್ತಿಸಿದ ನಿವೃತ್ತ ಸಬ್​ ಇನ್ಸ್​ಪೆಕ್ಟರ್​

ಕಾರಿನ ದೃಶ್ಯ

ಕಾರಿನ ದೃಶ್ಯ

ನಾಯಿಯನ್ನು ಹಾರನ್​ ಮಾಡಿ ಓಡಿಸುವ ಯತ್ನ ನಡೆಸದೆ ಮೂಕ ಜೀವಿಯ ಮೇಲೆ ಈ ರೀತಿ ಅಮಾನವೀಯವಾಗಿ ವರ್ತಿಸಿದ ಅವರ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದೆ. 

  • Share this:

 ಬೆಂಗಳೂರು (ಜ. 28): ನಿವೃತ್ತ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಒಬ್ಬರು ಉದ್ದೇಶ ಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದಾರೆ. ಅಮಾಯಕ ಬೀದಿ ಬದಿಯ ನಾಯಿ ಮೇಲೆ ಇವರು ದೌರ್ಜನ್ಯ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೂಡ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆ ಈ ಕುರಿತು ಹುಳಿಮಾವು ಪೊಲೀಸರು ನಿವೃತ್ತ ಅಧಿಕಾರಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. 65 ವರ್ಷದ ನಾಗೇಶಯ್ಯ ಈ ಕೃತ್ಯ ಎಸಗಿದವರು. ತಮ್ಮ ಮಗನೊಂದಿಗೆ ಕಾರಿನಲ್ಲಿ ಹೋಗಿದ್ದ ನಾಗೇಶಯ್ಯ, ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಉದ್ದೇಶಪೂರ್ವಕವಾಗಿ ಗಾಡಿ ಹತ್ತಿಸಿದ್ದಾರೆ. ನಾಯಿಯನ್ನು ಹಾರನ್​ ಮಾಡಿ ಓಡಿಸುವ ಯತ್ನ ನಡೆಸದೆ ಮೂಕ ಜೀವಿಯ ಮೇಲೆ ಈ ರೀತಿ ಅಮಾನವೀಯವಾಗಿ ವರ್ತಿಸಿದ ಅವರ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದೆ.  ಇನ್ನು ನಿವೃತ್ತ ಅಧಿಕಾರಿ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಸಿಸಿಟಿವಿ ಸಾಕ್ಷಿಯಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.



ಕಾರು ಹತ್ತಿಸಿದ ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ತಕ್ಷಣಕ್ಕೆ ನಾಯಿಯನ್ನು ಸ್ಥಳೀಯ ಪಶುವೈದ್ಯರ ಬಳಿ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯ ರಮೇಶ್​ ಸಲ್ಲಿಸಿದ ಪ್ರಾಣಿಗಳ ಮೇಲಿನ ದೌರ್ಜನ್ಯದ ಆರೋಪದ ಮೇಲೆ ನಾಗೇಶಯ್ಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ಆಗಿರುವ ನಾಗೇಶಯ್ಯ ತಮ್ಮ ವೃತ್ತಿಸ್ಥಾನದಿಂದಾಗಿ ಕಾನೂನು ಮತ್ತು ಜೀವದ ಮೇಲೆ ಗೌರವವಿಲ್ಲದಂತೆ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಸಿಟಿಜನ್​ ಫಾರ್​ ಅನಿಮಲ್​ ಬರ್ತ್​​ ಕಂಟ್ರೋಲ್​ ಪರ ವಕೀಲರು ಅರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಯಿ, ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಇದು ತಣ್ಣಗಿನ ಕ್ರೌರ್ಯದ ವರ್ತನೆಯಾಗಿದೆ. ಈ ಹಿನ್ನಲೆ ಈ ಪ್ರಕರಣದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಘಟನೆ ಕುರಿತು ಕಾಂಗ್ರೆಸ್​ ನಾಯಕಿ ಐಶ್ವರ್ಯಾ ಮಂಚನಹಳ್ಳಿ ಮಹದೇವ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಟಿಜನ್​ ಫಾರ್​ ಅನಿಮಲ್​ ಬರ್ತ್​​ ಕಂಟ್ರೋಲ್​, ಬಿಬಿಎಂಪಿ ಮತ್ತು ನಾಗೇಶ್​ ವಿರುದ್ಧ ದೂರು ದಾಖಲಿಸಿ ಚಿಕಿತ್ಸೆ ನೀಡಿದ ವೈದ್ಯರ ಕ್ರಮವನ್ನು ಶ್ಲಾಘಿಸಿದ್ದಾರೆ.

top videos
    First published: