ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹಿನ್ನೆಲೆಯಲ್ಲಿ ಮತದಾರರಿಗೆ (Voters) ಜಾಗೃತಿ ಮೂಡಿಸುವ ಸಲುವಾಗಿ ಹಲವು ಹೋಟೆಲ್ (Hotel) ಮಾಲೀಕರು, ಅಂಗಡಿಗಳು ಮತದಾರರಿಗೆ ಉಚಿತ (Free) ಹಾಗೂ ವಿಶೇಷ ಆಫರ್ಗಳನ್ನು ನೀಡಿದ್ದವು. ಆದರೆ ಈ ಉಚಿತ ಘೋಷಣೆಗಳ ವಿರುದ್ಧ ಸದ್ಯ ಚುನಾವಣಾ ಆಯೋಗ (Election Commission) ಕ್ರಮಕ್ಕೆ ಮುಂದಾಗಿದೆ. ಇದರೊಂದಿಗೆ ಮತದಾನದ ಜಾಗೃತಿ ಮೂಡಿಸಲು ಮುಂದಾದ ಹೋಟೆಲ್ ಮಾಲೀಕರು ಹಾಗೂ ಹಲವರಿಗೆ ಶಾಕ್ ಎದುರಾಗಿದೆ. ಈ ಕುರಿತಂತೆ ಚುನಾವಣಾ ಆಯೋಗ ಆದೇಶ ಜಾರಿ ಮಾಡಿದ್ದು, ನೀತಿ ಸಂಹಿತೆ (Code of Conduct) ಉಲ್ಲಂಘಿಸುವ ಮಾಲೀಕರನ್ನೇ ನೇರ ಹೊಣೆ ಮಾಡಲು ಆಯೋಗ ಮುಂದಾಗಿದೆ.
ಚುನಾವಣಾ ಆಯೋಗದ ನೋಟಿಸ್ನಲ್ಲಿ ಏನಿದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರು ಈ ಕುರಿತಂತೆ ಆದೇಶ ಹೊರಡಿಸಿದ್ದು, ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂಬಂಧ 2023ರ ಮಾರ್ಚ್ 29ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಕಾರ್ಯವು ನಡೆಯಲಿದೆ.
ಇದನ್ನೂ ಓದಿ: Karnataka Polls 2023: ಬೆಂಗಳೂರಿನಲ್ಲಿ 3 ದಿನ 144 ಸೆಕ್ಷನ್ ಜಾರಿ; ನಿಷೇಧಾಜ್ಞೆ ವೇಳೆ ಏನೆಲ್ಲಾ ಮಾಡಬಾರದು ಗೊತ್ತಾ?
ಈಗಾಗಲೇ ಕೆಲ ಮಾಧ್ಯಮಗಳಲ್ಲಿ ಹಾಗೂ ಹೋಟೆಲ್ಗಳ ಮುಂಭಾಗದಲ್ಲಿ ಮೇ 10ರಂದು ಮತದಾನ ಮಾಡಿ ಬರುವ ಮತದಾರರು ಗುರುತು ತೋರಿಸಿದಲ್ಲಿ ರಿಯಾಯಿತಿ/ಉಚಿತವಾಗಿ ತಿಂಡಿ, ಪಾನಿಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವುದಾಗಿ ಬೋರ್ಡ್ ಅಳವಡಿಸಿರುವುದು ಕಂಡು ಬಂದಿದೆ.
ಆದರೆ ಇದು ಮಾದರಿ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿಲಾಗಿದೆ.
ಇನ್ನು, ಬೆಂಗಳೂರಲ್ಲಿ ಹನುಮಾನ್ ಚಾಲೀಸ ಪಠಿಸುತ್ತಿದ್ದಾಗ ದಾಳಿ ನಡೆಸಿರುವ ಅಧಿಕಾರಿಗಳು ಹನುಮಾನ್ ಚಾಲೀಸ ಪಠಣಕ್ಕೆ ಬ್ರೇಕ್ ಹಾಕಿದ್ದಾರೆ. ವಿಜಯನಗರ ಕ್ಲಬ್ ರೋಡ್ನಲ್ಲಿ ಹರಿಹರೇಶ್ವರ ದೇಗುಲ ಮುಂಭಾಗದಲ್ಲಿ ದೊಡ್ಡದಾದ ಆಂಜನೇಯ ಸ್ವಾಮಿ ಮೂರ್ತಿಯಿಟ್ಟು 70ಕ್ಕೂ ಹೆಚ್ಚು ಬಜರಂಗದಳ ಕಾರ್ಯಕರ್ತರು ಹನುಮಾನ್ ಚಾಲೀಸ ಪಠಣೆ ಮಾಡುತ್ತಿದ್ದರು.
ಆದರೆ ನಗರದಲ್ಲಿ ಸೆಕ್ಷನ್ 144 ಇರುವುದರಿಂದ ಐದಕ್ಕಿಂತ ಹೆಚ್ಚು ಜನರ ಸೇರದಂತೆ ಎಚ್ಚರಿಕೆ ನೀಡಲಾಗಿದೆ. ಚುನಾವಣಾಧಿಕಾರಿಗಳ ನಡೆಗೆ ಕಾರ್ಯಕರ್ತರು, ಬೇಸರ ವ್ಯಕ್ತಪಡಿಸಿದ್ದು, ಚರ್ಚ್ ಮತ್ತು ಮಸೀದಿಗಳಲ್ಲಿ ಮಾತ್ರ ಅವಕಾಶ ನೀಡುತ್ತೀರಿ. ನಮಗ್ಯಾಕೆ ಅವಕಾಶ ನೀಡಲ್ಲ ಎಂದು ವಾಗ್ವಾದ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ