ಬೆಳಗಾವಿ (ಏಪ್ರಿಲ್ 28); ಪಡಿತರ ಅಕ್ಕಿಗೆ ಸಂಬಂಧಿಸಿದಂತೆ ರೈತರೊಬ್ಬರಿಗೆ ತಾವು ನೀಡಿದ ದರ್ಪದ ಉತ್ತರಕ್ಕೆ ಕೊನೆಗೂ ಆಹಾರ ಖಾತೆ ಸಚಿವ ಉಮೇಶ್ ಕತ್ತಿ ಇಂದು ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಡವರಿಗೆ ಪಡಿತರ ಅಕ್ಕಿಯನ್ನು ಈ ಹಿಂದೆ ತಿಂಗಳಿಗೆ 5 ಕೆ.ಜಿ. ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು 3 ಕೆ.ಜಿ.ಗೆ ಇಳಿಸಿದೆ. ಇದರಿಂದಾಗಿ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಸಾಕಷ್ಟು ಸಂಷಕ್ಟ ಎದುರಾಗಿದೆ. ಹೀಗಾಗಿಯೇ ರೈತರೊಬ್ಬರು ಸಚಿವ ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ, "ಸಂಕಷ್ಟದ ಸಂದರ್ಭದಲ್ಲಿ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಾವು ಸಾಯಬೇಕಾ ಬದುಕಬೇಕಾ?" ಎಂದು ಪ್ರಶ್ನಿಸಿದ್ದಾರೆ. ಆದರೆ, ಅದಕ್ಕೆ ದರ್ಪದಿಂದಲೇ ಉತ್ತರಿಸಿದ್ದ ಸಚಿವ ಉಮೇಶ್ ಕತ್ತಿ "ಸಾಯಿ" ಎಂದು ಹೇಳಿರುವುದು ಇದೀಗ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ.
ಉಮೇಶ್ ಕತ್ತಿ ಅವರ ಈ ದರ್ಪದ ಹೇಳಿಕೆ ವಿರುದ್ಧ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಇದು ಅಧಿಕಾರದಲ್ಲಿರುವವ ವಿಕೃತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹಲವರು ಟೀಕಿಸಿದ್ದರು. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಈ ಹೇಳಿಕೆಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯಾದ್ಯಂತ ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಉಮೇಶ್ ಕತ್ತಿ ಕೊನೆಗೂ ಎಲ್ಲಾ ರೈತರ ಕ್ಷಮೆಯಾಚಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಹೇಳಿಕೆ ನೀಡಿರುವ ಸಚಿವ ಉಮೇಶ್ ಕತ್ತಿ, "ನನ್ನ ಹೇಳಿಕೆ ನೋವು ನೀಡಿದ್ದಲ್ಲಿ ನಾನು ರಾಜ್ಯದ ರೈತರಲ್ಲಿ ಹಾಗೂ ಎಲ್ಲಾ ಪಡಿತರ ಫಲಾನುಭವಿಗಳಲ್ಲಿ ಕ್ಷಮೆಯಾಚಿಸುತ್ತೇನೆ" ಎಂದು ತಿಳಿಸಿದ್ದಾರೆ.
ಈ ವಿವಾದಕ್ಕೆ ಸಂಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಚಿವ ಉಮೇಶ್ ಕತ್ತಿ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಇದೇ ವೇಳೆ ವಿರೋಧ ಪಕ್ಷದ ನಾಯಕರ ಈ ಆಗ್ರಹದ ವಿರುದ್ಧವೂ ಕಿಡಿಕಾರಿರುವ ಉಮೇಶ್ ಕತ್ತಿ, "ನನ್ನ ರಾಜೀನಾಮೆ ಕೇಳಲು ಡಿ.ಕೆ.ಶಿವಕುಮಾರ್ ಯಾರು? ಹಾದಿಯಲ್ಲಿ ಹೋಗೊರು ಬರೋರು ರಾಜೀನಾಮೆ ಕೇಳಿದ್ರೆ ಕೊಡೋಕಾಗುತ್ತಾ? ಬೇಕಿದ್ದರೆ ಡಿಕೆಶಿ ಕಾಂಗ್ರೆಸ್ ಶವಯಾತ್ರೆ ಮಾಡಲಿ, ಸಿದ್ದರಾಮಯ್ಯ ಮನೆ ಮುಂದೆ ಹೂಳಲಿ. ಕಾಂಗ್ರೆಸ್ ಗೆ ಮಾಡಲು ಕೆಲಸವಿಲ್ಲ. ಡಿಕೆಶಿ ರಾಜಕೀಯ ಮಾಡೋದಾದ್ರೆ ಮಾಡಲಿ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಉಮೇಶ್ ಕತ್ತಿ ಫೋನ್ ಸಂಭಾಷಣೆಯ ಮಾತುಕತೆ
ರೈತ: ಎರಡು ಕೆ.ಜಿ. ಅಕ್ಕಿ ಮಾಡಿದ್ದಿರಾ ಅದು ಸಾಲುತ್ತಾ ಸಾರ್.
ಕತ್ತಿ: ಮೂರು ಕೆ.ಜಿ. ರಾಗಿ ಮಾಡಿದ್ದಿವಿ
ರೈತ: ನಮ್ಮ ಉತ್ತರ ಕರ್ನಾಟಕ ಭಾಗದವರಿಗೆ ಎಲ್ಲಿ ರಾಗಿ ಕೊಡ್ತಾ ಇದೀರಾ?
ಕತ್ತಿ: ಉತ್ತರ ಕರ್ನಾಟಕದಲ್ಲಿ ಜೋಳ ಮತ್ತು ಅಕ್ಕಿ ಮಾಡಿದ್ದಿವಿ.ರೈತ: ಅದೇ ಸಾರ್ ಸಾಲುತ್ತಾ ಸಾರ್. ಅದು, ಲಾಕ್ಡೌನ್ನಲ್ಲಿ ಕೆಲಸ ಇಲ್ಲ.
ಕತ್ತಿ; ಲಾಕ್ಡೌನ್ ಟೈಮಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು ಮೇ, ಜೂನ್ನಲ್ಲಿ 5 ಕೆ.ಜಿ. ಅಕ್ಕಿ ಕೊಡ್ತಾ ಇದೆ.
ರೈತ: ಯಾವಾಗ ಕೊಡ್ತಾ ಇದೀರಾ?
ಕತ್ತಿ: ಬರೋ ತಿಂಗಳಲ್ಲಿ
ರೈತ: ಅಲ್ಲಿಯವರೆಗೂ ಉಪವಾಸ ಇರೋದಾ ಸಾರ್. ಇಲ್ಲಾ ಸತ್ತೋಗೊದಾ?
ಕತ್ತಿ: ಸತ್ತೋದ್ರೆ ಒಳ್ಳೆಯದು. ಅದಕ್ಕಿಂದ ಅಕ್ಕಿ ಮಾರೋದು ಅಲ್ಲೇ ಬಂದ್ ಮಾಡಿಬಿಡಿ. ಇಡಿ ನಮಗೆ ಫೋನ್ ಮಾಡಬೇಡಿ.
ಇದನ್ನೂ ಓದಿ: ರೈತರೊಬ್ಬರಿಗೆ ಸತ್ತೋದ್ರೆ ಒಳ್ಳೆಯದು ಎಂದು ಹೇಳಿದ ಸಚಿವ ಉಮೇಶ್ ಕತ್ತಿ; ಸಿಎಂ ಬಿಎಸ್ವೈ ವಿಷಾದ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ