• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Belagavi Rains: ಭಾರೀ ಮಳೆಗೆ ಬೆಳಗಾವಿ ತತ್ತರ, ಗೋಕಾಕ್​​ ಫಾಲ್ಸ್​​ಗೆ ಜೀವಕಳೆ; ನೂರಾರು ಎಕರೆ ಭತ್ತ ಜಲಾವೃತ

Belagavi Rains: ಭಾರೀ ಮಳೆಗೆ ಬೆಳಗಾವಿ ತತ್ತರ, ಗೋಕಾಕ್​​ ಫಾಲ್ಸ್​​ಗೆ ಜೀವಕಳೆ; ನೂರಾರು ಎಕರೆ ಭತ್ತ ಜಲಾವೃತ

ಗೋಕಾಕ್ ಫಾಲ್ಸ್

ಗೋಕಾಕ್ ಫಾಲ್ಸ್

Gokak Falls: ಕರ್ನಾಟಕದ ನಯಾಗರಾ ಫಾಲ್ಸ್ ಎಂದೇ ಖ್ಯಾತಿ ಪಡೆದಿರೋ ಗೋಕಾಕ್ ಫಾಲ್ಸ್ ಗೆ ಸದ್ಯ ಜೀವ ಕಳೆ ಬಂದಿದೆ. ಕಂದು ಬಣ್ಣದ ರಾಶಿ ರಾಶಿ ನೀರು  171 ಮೀಟರ್​ ಎತ್ತರದಿಂದ ಧುಮುಕುವ ದೃಶ್ಯ ಮನಮೋಹಕವಾಗಿದೆ.

  • Share this:

ಬೆಳಗಾವಿ(ಜೂ. 19): ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಳೆದ 5 ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಇದರಿಂದ ನದಿ,ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಪ್ರಮುಖವಾಗಿ ಘಟಪ್ರಭಾ, ಮಲಪ್ರಭಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು, ಕರ್ನಾಟಕದ ನಯಾಗಾರ ಫಾಲ್ಸ್ ಎಂದೇ ಖ್ಯಾತಿ ಗಳಿಸಿರುವ ಗೋಕಾಕ್ ಫಾಲ್ಸ್​​​ಗೆ ಜೀವ ಕಳೆ ಬಂದಿದೆ. ಬೆಳಗಾವಿ ಬಳಿಯ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ಇಂದ್ರಾಣಿ ಭತ್ತ ಜಲವೃತ್ತವಾಗಿದ್ದು, ರೈತರಿಗೆ ಆತಂಕ ಸೃಷ್ಟಿಸಿದೆ.


ಪಶ್ಚಿಮ ಘಟ್ಟಪ್ರದೇಶದಲ್ಲಿ ಈ ವರ್ಷ ಮುಂಗಾರು ಮಳೆ ವ್ಯಾಪಕವಾಗಿ ಪ್ರಬಲವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದ 5 ದಿನಗಳಿಂದ ನಿರಂತರ ವರ್ಷಧಾರೆ ಮುಂದುವರೆದಿದೆ. ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜಿಲ್ಲೆ ನದಿ, ಹಳ್ಳಗಳು ತುಂಬಿಕೊಂಡಿವೆ. ಬೆಳಗಾವಿ ಬಳಿ ಹರಿಯುವ ಬಳ್ಳಾರಿ ನಾಲಾ ಒಳ ಹರಿವಿನಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಧಾಮನೆ, ಯಳ್ಳೂರು, ವಡಗಾವಿ, ಬಸವನ ಕುಡಚಿ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ಬೆಳೆ ಜಲಾವೃತ್ತವಾಗಿದೆ. ತರಕಾರಿ ಹಾಗೂ ಭತ್ತ ಬೆಳೆಯಲ್ಲಿ ನೀರು ತುಂಬಿಕೊಂಡಿದ್ದು, ಬೆಳೆ ನಾಶದ ಭೀತಿ ರೈತರನ್ನು ಕಾಡುತ್ತಿದೆ.


ಇದನ್ನೂ ಓದಿ:Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್​ ಅಲರ್ಟ್​ ಘೋಷಣೆ; ಬೆಳಗಾವಿಯಲ್ಲಿ ಪ್ರವಾಹ ಭೀತಿ

ಸಂಪೂರ್ಣ ಜಲಾವೃತವಾಗಿರುವ ಭತ್ತದ ಬೆಳೆ


ಬೆಳಗಾವಿ ತಾಲೂಕಿನಲ್ಲಿ ಹೆಚ್ಚಾಗಿ ಇಂದ್ರಾಣಿ ಬಾಸುಮತಿ ತಳಿಯ ಅಕ್ಕಿಯನ್ನು ಬೆಳೆಯಲಾಗುತ್ತದೆ. ಆದರೆ ಪ್ರತಿ ವರ್ಷದ ನಾಲಾ ಉಕ್ಕಿ ಹರಿದು ರೈತರಿಗೆ ವ್ಯಾಪಕವಾಗಿ ನಷ್ಟ ಆಗುತ್ತದೆ. ನಾಲಾದ ಹೂಳು ತೆಗೆಯುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಆದರೆ ಈವರೆಗೆ ಯಾವುದೇ ಸರ್ಕಾರ ಅಥವಾ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿಲ್ಲ. ಬಳ್ಳಾರಿ ನಾಲಾ ಕೇವಲ ರೈತರಿಗಷ್ಟೇ ಅಲ್ಲದೇ ಬೆಳಗಾವಿ ನಗರದ ಅನೇಕ ಬಡಾವಣೆಗೆ ಹಾನಿ ಉಂಟು ಮಾಡುತ್ತಿದೆ.


ಇದನ್ನೂ ಓದಿ:Karnataka Unlock 2.O: ಸೋಮವಾರದಿಂದ ಬಸ್​, ಮೆಟ್ರೋ ಓಡಾಟಕ್ಕೆ ಸಿಗುತ್ತಾ ಅನುಮತಿ?; ಇಂದು ಸಿಎಂ ಮಹತ್ವದ ನಿರ್ಧಾರ


ಕರ್ನಾಟಕದ ನಯಾಗರಾ ಫಾಲ್ಸ್ ಎಂದೇ ಖ್ಯಾತಿ ಪಡೆದಿರೋ ಗೋಕಾಕ್ ಫಾಲ್ಸ್ ಗೆ ಸದ್ಯ ಜೀವ ಕಳೆ ಬಂದಿದೆ. ಕಂದು ಬಣ್ಣದ ರಾಶಿ ರಾಶಿ ನೀರು  171 ಮೀಟರ್​ ಎತ್ತರದಿಂದ ಧುಮುಕುವ ದೃಶ್ಯ ಮನಮೋಹಕವಾಗಿದೆ. ಪ್ರತಿವರ್ಷ ಈ ಜಲರಾಶಿ ನೋಡಲು ಸಾವಿರಾರು ಜನ ಪ್ರವಾಸಿಗರು ಬರುತ್ತಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರವಾಸಿಗರು ಬರುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರ ಭೇಟಿ ಇಲ್ಲಿನ ಜಲಪಾತ ನೋಡಿ ಆನಂದಿಸುತ್ತಿದ್ದಾರೆ.


ಗೋಕಾಕ್​ ಫಾಲ್ಸ್ ಹರಿದು ಹೋಗುತ್ತಿರುವ ದೃಶ್ಯ


ಘಟಪ್ರಭಾ ಜಲಾಶಯಕ್ಕೆ 33,732 ಕ್ಯೂಸೆಕ್ಸ್​​ ನೀರು ಒಳ ಹರಿವು ಇದೆ. ಮಲಪ್ರಭಾ ಜಲಾಶಯಕ್ಕೆ 2600 ಕ್ಯೂಸೆಕ್ಸ್​ ನೀರು ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲಾಡಳಿತ ತುರ್ತು ಪರಿಸ್ಥಿತಿ ಎದುರಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.


ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆಯ ಅಬ್ಬರದಿಂದ ಚಿಕ್ಕೋಡಿ ವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಹಾಗೂ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳಿಗೆ ಮಳೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.


ಬೆಳಗಾವಿಯಲ್ಲಿ ರಣಮಳೆ ಸುರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ಪ್ರವಾಹ ಭೀತಿ ಸೃಷ್ಟಿಸಿವೆ. ಕಳೆದ 5 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಾರ್ಕಂಡೇಯ ನದಿಯಲ್ಲಿ ಕಾಕತಿ‌ ಗ್ರಾಮದ ಸಿದ್ರಾಯಿ ಸುತಗಟ್ಟಿ(65 ) ಎಂಬ ರೈತ ಕೊಚ್ಚಿ ಹೋಗಿದ್ದಾನೆ. ಈತನಿಗಾಗಿ ಎಸ್ ಡಿ ಆರ್ ಎಫ್​ ತಂಡದಿಂದ ಇಂದು ಶೋಧ ಕಾರ್ಯ ನಡೆಯುತ್ತಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು