ಬೆಳಗಾವಿ: ಆರಕ್ಷಕರು (Police) ಸಮಾಜದ ರಕ್ಷಕರು ಅಂತಾರೆ. ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳನ್ನು (Crime) ತಡೆಯುವುದೇ ಅವರ ಕರ್ತವ್ಯವಾಗಿರುತ್ತೆ. ಆದ್ರೆ ಇಲ್ಲೊಬ್ಬ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಣೆಯ ಜೊತೆಗೆ ಸಮಾಜದ ಬಡ ಮಕ್ಕಳ ಪಾಲಿಗೆ ಅಕ್ಷರ ದಾನಿಯಾಗಿದ್ದಾರೆ. ದಿನದ 24 ಗಂಟೆಗಳ ಕಾಲವೂ ಜ್ಞಾನದ ದೇಗುಲ ತೆರೆದು ಅಕ್ಷರ ಪ್ರೇಮ (Education) ಮೆರೆದಿದ್ದಾರೆ. ಅಷ್ಟಕ್ಕೂ ಆ ಪೊಲೀಸ್ ಸಿಬ್ಬಂದಿ ಯಾರು ಅಂತೀರಾ? ಈ 24x7 ಗ್ರಂಥಾಲಯ (Library) ಎಲ್ಲಿದು ಅಂತೀರಾ? ಹುಬ್ಬಳ್ಳಿಯ ಸಿಇಎನ್ ಅಪರಾಧ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿರುವ ಶಿವಾನಂದ ಹನುಮಂತ ತಿಮ್ಮಾಪುರ ಅವರೇ ಬೆಳಗಾವಿ ಜಿಲ್ಲೆಯ (Belagavi) ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಆರಂಭಿಸಿದ್ದಾರೆ.
ಕೊರೋನಾ ಸೃಷ್ಟಿಸಿದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಲು ಪರದಾಡುತ್ತಿರುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಪೊಲೀಸ್ ಪೇದೆಯಾಗಿರುವ ಶಿವಾನಂದ ಹನುಮಂತ ತಿಮ್ಮಾಪುರ ಅವರು ಗ್ರಂಥಾಲಯ ತೆರೆದು ಅಕ್ಷರ ಪ್ರೇಮ ಮೆರೆದಿದ್ದಾರೆ .
ಮಕ್ಕಳ ಕನಸಿಗೆ ನೀರೆರೆಯುತ್ತಿರುವ ಅಧ್ಯಯನ ಕೇಂದ್ರ
2020ರ ಸೆಪ್ಟೆಂಬರ್ ತಿಂಗಳಲ್ಲಿ ಕಾರ್ಯಾರಂಭ ಮಾಡಿರುವ 'ಕನಸು' ಹೆಸರಿನ ಈ ಅಧ್ಯಯನ ಕೇಂದ್ರ ಮಕ್ಕಳ ಪಾಲಿಗೆ ಜ್ಞಾನ ದೇಗುಲವಾಗಿ ಮಾರ್ಪಟ್ಟಿದೆ. ಹಲವು ವಿದ್ಯಾರ್ಥಿಗಳು ನಿತ್ಯವೂ ಇಲ್ಲಿಗೆ ಬಂದು ಅಧ್ಯಯನ ಕೈಗೊಳ್ಳುತ್ತಿದ್ದಾರೆ.
ಪ್ರತಿ ದಿನ 300 ಜನಕ್ಕೂ ಅಧಿಕ ಜನರ ಭೇಟಿ
ಇನ್ನು ಗ್ರಾಮದ ಹೆಣ್ಣು ಮಕ್ಕಳಿಗೆ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲು ಅವರ ಮನೆಗೆ ಪುಸ್ತಕ ನೀಡಲಾಗುತ್ತಿದೆ. ಪ್ರಸ್ತುತ ಸದಸ್ಯತ್ವದ ಸಂಖ್ಯೆ 300 ಜನಕ್ಕೂ ಅಧಿಕ. ಪ್ರತಿದಿನ ಇಲ್ಲಿ ಓದಲು ಸರಿ ಸುಮಾರು 200 ಜನರು ಭೇಟಿ ನೀಡುವುದು ವಿಶೇಷವಾಗಿದೆ.
ಇದನ್ನು ಓದಿ: Karwar: ಕಾರ್ಮಿಕ ಇಲಾಖೆ ಯೋಜನೆ ಪ್ರಚಾರಕ್ಕಾಗಿ ಹೊಸ ತಂತ್ರ, ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್!
ಸಾವಿರಕ್ಕೂ ಅಧಿಕ ಪುಸ್ತಕಗಳು ಲಭ್ಯ
ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಒದಗಿಸುವ ನಿಟ್ಟಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. ಅದರ ಬಾಡಿಗೆ , ನಿರ್ವಹಣಿ ವೆಚ್ಚವನ್ನೂ ಭರಿಸುತ್ತಿರುವ ಶಿವಾನಂದ ಅವರು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾಗಿರುವ 1 ಸಾವಿರಕ್ಕೂ ಅಧಿಕ ಪುಸ್ತಕ ಒದಗಿಸಿದ್ದಾರೆ.
ಗ್ರಂಥಾಲಯ ಅಭಿವೃದ್ಧಿಗೆ ದಾನಿಗಳ ಆಸರೆ
ಆರಕ್ಷಕರೊಬ್ಬರ ಈ ಸೇವೆಯನ್ನು ಮೆಚ್ಚಿ ರಾಜ್ಯದ ವಿವಿಧೆಡೆಯಿಂದ ಹಲವು ದಾನಿಗಳೂ ಕೇಂದ್ರಕ್ಕೆ ಅಗತ್ಯ ಪುಸ್ತಕಗಳನ್ನು ನೀಡಿದ್ದಾರೆ. ಪ್ರಚಲಿತ ವಿದ್ಯಮಾನಗಳ ಅರಿವೂ ಮಕ್ಕಳಿಗೆ ಇರಲಿ ಎಂಬ ಕಾರಣಕ್ಕೆ ಅನೇಕ ದಿನಪತ್ರಿಕೆಗಳು ತರಿಸಲಾಗುತ್ತೆ.
ದಿನದ 24 ಗಂಟೆಯೂ ಗ್ರಂಥಾಲಯ ಓಪನ್!
ದಿನದ 24 ಗಂಟೆಯು ಗ್ರಂಥಾಲಯ ಓಪನ್ ಆಗಿಯೇ ಇರುತ್ತದೆ. ಈ ಕುರಿತಾಗಿ ಗ್ರಂಥಾಲಯದ ಪಕ್ಕದ ಖಾಲಿ ಜಾಗದಲ್ಲಿ ಉದ್ಯಾನವನ ನಿರ್ಮಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಿ ರಾತ್ರಿ ಬಡ ಮಕ್ಕಳಿಗೆ ಉಚಿತ ತರಗತಿಗಳನ್ನು ಹೇಳಿ ಕೊಡುತ್ತಾರೆ. ಸ್ಥಳೀಯ ಶಿಕ್ಷಕ ಅಪ್ಪಣ್ಣಾ ಸಾಹೋಜಿ ಅವರು ನವೋದಯ, ಮೂರಾರ್ಜಿ, ಸೈನಿಕ ವಸತಿ ಶಾಲೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವುದಲ್ಲದೆ ಓದುವ ಎಲ್ಲ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: Viral Story: ಅಬ್ದುಲ್ ಗಫರ್ ಗೋಪ್ರೇಮ, ಗೋವುಗಳ ದಾಹ ತಣಿಸುತ್ತಿರುವ ಗಫರ್!
ಗ್ರಾಮೀಣ ಬಡ ಮಕ್ಕಳ ಕಲಿಕೆಗೆ ನೆರವು
ಜ್ಞಾನ ಹೆಚ್ಚಳಕ್ಕೆ ಸಹಕಾರಿ ಕೊರೊನಾ ಸಂಕಷ್ಟ ಕಾಲದಲ್ಲಿ ಹೆತ್ತವರು ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಶಿವಾನಂದ ತಿಮ್ಮಾಪುರ ಅವರು 'ಕನಸು' ಅಧ್ಯಯನ ಕೇಂದ್ರ ಆರಂಭಿಸಿ ನಮ್ಮ ಜ್ಞಾನ ಹೆಚ್ಚಳಕ್ಕೆ ನೆರವಾಗಿದ್ದಾರೆ. ಇಲ್ಲಿ ನಿತ್ಯವೂ 6 ರಿಂದ 8 ಗಂಟೆಗಳ ಕಾಲ ಅಧ್ಯಯನ ಮಾಡಿ ಬ್ಯಾಂಕಿಂಗ್ ಸೇರಿ ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದೇವೆ. ಭವಿಷ್ಯದಲ್ಲಿ ನಾವೂ ಗ್ರಾಮೀಣ ಬಡ ಮಕ್ಕಳ ಕಲಿಕೆಗೆ ನೆರವಾಗುತ್ತೇವೆ ಎನ್ನುತ್ತಾರೆ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳು.
ವರದಿ: ಪ್ರಶಾಂತ ಮಲಗಾಂವಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ