ಬೆಳಗಾವಿ: ಕರ್ನಾಟಕ, ಕನ್ನಡದ ಹೆಮ್ಮೆ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ (Sangolli Rayanna Statue) ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಮತ್ತೊಮ್ಮೆ ನಡೆದಿದೆ. ಬೆಳಗಾವಿ (Belagavi) ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಲ್ಲೆಸೆದು (Sangolli Rayanna Statue Belagavi) ಪರಾರಿಯಾಗಿದ್ದಾರೆ. ಕಿಡಿಗೇಡಿಗಳು ಎಸೆದ ಕಲ್ಲಿನಿಂದ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕಾಲಿನ ಭಾಗದಲ್ಲಿ ಹಾನಿಯಾಗಿದೆ. ವಿಷಯ ತಿಳಿದು ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದಾರೆ. ಹಿರೇಬಾಗೇವಾಡಿ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂಬ ಒತ್ತಡ ನಿರ್ಮಾಣವಾಗಿದೆ.
ಈ ಹಿಂದೆಯೂ ಪದೇ ಪದೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸಗೊಳಿಸಿ, ಹಾನಿಗೊಳಿಸಿದ ಘಟನೆಗಳು ವರದಿಯಾಗುತ್ತಲೇ ಇದ್ದವು. ಹೀಗಾಗಿ ಈಗ ಮತ್ತೊಮ್ಮೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಲ್ಲೆಸೆದು ಹಾನಿಗೊಳಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಚಲೋ ಸಹ ನಡೆದಿತ್ತು!
ಈ ಹಿಂದೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಸೇರಿ ಬೆಳಗಾವಿ ಚಲೋ ಹಮ್ಮಿಕೊಂಡಿದ್ದವು. ಎಂಇಎಸ್ ಮತ್ತು ಶಿವಸೇನಾ ಸಂಘಟನೆಗಳನ್ನ ರಾಜ್ಯದಲ್ಲಿ ನಿಷೇಧಿಸಬೇಕೆಂಬ ಪ್ರಮುಖ ಬೇಡಿಕೆ ಹಾಗೂ ಎಂಇಎಸ್ ಉದ್ಧಟತನವನ್ನು ಖಂಡಿಸಲು ಬೆಳಗಾವಿ ಚಲೋ ನಡೆಸಲಾಗಿತ್ತು.
ರಾಯಣ್ಣನ ಅಭಿಮಾನಿಗಳು ಈ ಹಿಂದೆಯೇ ಹಲವು ಆಗ್ರಹ ವ್ಯಕ್ತಪಡಿಸಿದ್ದರು
ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ, ಗಲ್ಲಿಗೇರಿಸಿದ ಸ್ಥಳ ನಂದಗಢದಲ್ಲಿ ಅಭಿವೃದ್ಧಿ ಕೆಲಸಗಳು ಮಾತ್ರ ಅರ್ಧಕ್ಕೆ ನಿಂತಿವೆ. ಈ ನಿಟ್ಟಿನಲ್ಲಿ ಆಡಳಿತ, ವಿರೋಧ ಪಕ್ಷಗಳ ನಾಯಕರು ಧ್ವನಿ ಎತ್ತಬೇಕು. ಕೂಡಲೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ಮುಗಿಸಬೇಕು ಎಂದು ರಾಯಣ್ಣನ ಅಭಿಮಾನಿಗಳು ಆಗ್ರಹಿಸಿದ್ದರು.
ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. ಇದೀಗ ಪ್ರಕರಣ ಸುಖಾಂತ್ಯವಾಗಿದೆ. ಆದರೆ ಇದೀಗ ಬೆಳಗಾವಿಯಲ್ಲಿ ಪಕ್ಷಾತೀತವಾಗಿ ಮತ್ತೊಂದು ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸಲಾಗಿತ್ತು.
ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಮೆ ಸ್ಥಾಪಿಸಿ
ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣ ಸೌಧದ ಮುಂಭಾಗದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಆಗ್ರಹವನ್ನು ಮಾಡಲಾಗಿತ್ತು. ಭಾನುವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಿಂದ ಖಾನಾಪುರ ತಾಲೂಕಿನ ನಂದಗಢದವರೆಗೆ ಸಂಕಲ್ಪ ಯಾತ್ರೆಯನ್ನು ನಡೆಸಲಾಗಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ MES ಸಂಘಟನೆ ನಿಷೇಧ ಆಗುತ್ತಾ? ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್, ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಲಕ್ಕಣ ಸಂಸುದ್ಧಿ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಜನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿಯ ಚನ್ನಮ್ಮ ಪ್ರತಿಮೆ, ಪೀರನವಾಡಿಯ ರಾಯಣ್ಣ ಪ್ರತಿಮೆಗೆ ಗೌರವನ್ನು ಸಲ್ಲಿಸಿದರು. ನಂತರ ರಾಯಣ್ಣನ್ನು ಗಲ್ಲಿಗೆ ಏರಿಸಿದ ನಂದಗಢಕ್ಕೆ ತೆರಳಿ ರಾಯಣ್ಣ ಸಮಾಧಿಗೆ ಗೌರವ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ