ಬೆಂಗಳೂರು: ಅದ್ಯಾಕೋ ಏನೋ ಚಾಮರಾಜಪೇಟೆ ಮೈದಾನದ (Chamrajpet Ground) ವಿವಾದ ಬಗೆಹರಿಯೋ ಲಕ್ಷಣಗಳೇ ಕಾಣ್ತಿಲ್ಲ. ಒಂದ್ಕಡೆ ಆಸ್ತಿ ನಮ್ಮದು ಅಂತಿದ್ದ ವಕ್ಫ್ ಬೋರ್ಡ್ (Waqf Board) ದಾಖಲೆ ಸಲ್ಲಿಸೋಕೆ ವಿಳಂಬಮಾಡ್ತಿದೆ. ಮತ್ತೊಂದ್ಕಡೆ ಬಕ್ರೀದ್ (Bakrid) ಆಚರಣೆ ದಿನ ಸಮೀಪಿಸುತ್ತಿದೆ. ಇದೆಲ್ಲಾದರ ನಡುವೆ ಬಕ್ರೀದ್ ಗೆ ಕುರಿಗಳ ಮಾರಾಟ ತಾಣವಾಗಿರೋ ಮೈದಾನವನ್ನ ಇನ್ಮುಂದೆ ಕ್ಲೀನ್ ಮಾಡೋದಿಲ್ಲ ಅಂತ ಪಾಲಿಕೆ (BBMP) ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಬಕ್ರೀದ್ ಹಬ್ಬ ಹತ್ರ ಬರ್ತಿದೆ. ಹೀಗಾಗಿ ವಿವಾದಿತ ಚಾಮರಾಜಪೇಟೆ ಮೈದಾನದ ವಿವಾದವೂ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಚಾಮರಾಜಪೇಟೆಯ ಮೈದಾನದಲ್ಲಿ ಭರ್ಜರಿ ಕುರಿಗಳ ವ್ಯಾಪಾರ ನಡೆಯುತ್ತಿದೆ. ಇಡೀ ಮೈದಾನದ ತುಂಬೆಲ್ಲಾ ಮಾರಾಟ ಮಾಡಲಾಗ್ತಿದ್ದು, ಬಿಬಿಎಂಪಿ ಕಣ್ಮುಚ್ಚಿ ಕುಳಿತಿದೆ.
ಕ್ಲೀನ್ ಮಾಡದಿರಲು ಬಿಬಿಎಂಪಿ ನಿರ್ಧಾರ
ವರ್ಷಕ್ಕೆ ಎರಡು ದಿನ ಹೊರ್ತು ಪಡಿಸಿ ಉಳಿದಂತೆ ಆಟದ ಮೈದಾನವಾಗಿರುತ್ತೆ ಅಂತ ಪದೇ ಪದೇ ಹೇಳ್ತಾ ಇದ್ದ ಬಿಬಿಎಂಪಿ ಸುಮ್ಮನಿರೋದು ವಿರೋಧಕ್ಕೆ ಕಾರಣವಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಬಿಬಿಎಂಪಿ, ವಿವಾದಿತ ಮೈದಾನ ಕೋರ್ಟ್ ಮೆಟ್ಟಿಲೇರಿದ್ದು, ಪಾಲಿಕೆ ಇಂಥ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಪ್ರತಿ ವರ್ಷ ಪ್ರಾರ್ಥನೆ ವೇಳೆ ಮೈದಾನ ಕ್ಲೀನ್ ಮಾಡ್ತಿದ್ದ ಪಾಲಿಕೆ ಈ ಬಾರಿ ಸುಮ್ಮನಿರೋಕೆ ನಿರ್ಧಾರ ಮಾಡಿದ್ದು, ಮೂರು ಕಂಡೀಷನ್ ಆಧಾರದ ಮೇಲೆ ಹಬ್ಬ ಆಚರಿಸುವಂತೆ ಹೇಳಿದೆ.
ಇದನ್ನೂ ಓದಿ: BBMP: ಬೀದಿ ಬದಿಯ ಆಹಾರಗಳೂ ಇನ್ಮುಂದೆ ಆನ್ಲೈನ್ನಲ್ಲಿ ಲಭ್ಯ: ಪಾಲಿಕೆ ಸಾಲವನ್ನೂ ನೀಡುತ್ತೆ
ಬಕ್ರೀದ್ ಆಚರಣೆಗೆ ಮೂರು ಕಂಡೀಷನ್ ಹಾಕಿದ ಬಿಬಿಎಂಪಿ !
ಹಾಗಿದ್ರೆ ಬಿಬಿಎಂಪಿ ಹಾಕಿರೋ ಕಂಡೀಷನ್ ನೋಡೋದಾದ್ರೆ, ಈ ಬಾರಿ ಬಕ್ರೀದ್ ಹಬ್ಬ ಸೇರಿದಂತೆ ಇನ್ಮುಂದೆ ಮೈದಾನದ ಕ್ಲೀನ್ ಮಾಡದಿರೋಕೆ ತೀರ್ಮಾನ ಮಾಡಿದೆ. ಕುರಿ, ಮೇಕೆ ಮಾರಾಟದಿಂದ ಉತ್ಪತ್ತಿಯಾಗಿರೋ ತ್ಯಾಜ್ಯವನ್ನು ಬಿಬಿಎಂಪಿ ಕ್ಲೀನ್ ಮಾಡೋದಿಲ್ಲ ಅಂತ ಖಡಕ್ ಆಗಿ ಹೇಳಿದೆ. ಹಾಗೆನೇ ಪ್ರಾರ್ಥನೆ ವೇಳೆ ಟ್ರಾಫಿಕ್ ಸಮಸ್ಯೆ ಆಗದಂತೆ ಪ್ರಾರ್ಥನೆ ಮಾಡಬೇಕು. ರಸ್ತೆ ಕ್ಲೋಸ್ ಮಾಡಿಕೊಂಡು ಟ್ರಾಫಿಕ್ ಸಿಗ್ನಲ್ ನಲ್ಲಿ ಚಾಪೆ ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡದಂತೆಯೂ ಕಂಡೀಷನ್ ಹಾಕಿದೆ.
ವಾರದಿಂದ ಈದ್ಗಾ ಮೈದಾನದಲ್ಲಿ ಭರ್ಜರಿ ಕುರಿ ಮಾರಾಟ : ರಾಶಿ ರಾಶಿ ತ್ಯಾಜ್ಯ
ಈಗಾಗಲೇ ಕುರಿ ಮಾರಾಟದಿಂದ ಮೈದಾನದಲ್ಲಿ ಕಸದ ರಾಶಿ ಉತ್ಪತ್ತಿಯಾಗ್ತಿದೆ. ಪ್ರತಿ ವರ್ಷ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಡ್ತಿದ್ದ ಪಾಲಿಕೆ ಈ ಬಾರಿ ಸುಮ್ಮನಿರೋಕೆ ತೀರ್ಮಾನಿಸಿದೆ. ಇದರ ಜತೆಗೆ ಕೆಲ ಕಂಡೀಷನ್ ಆಧಾರದ ಮೇಲೆ ಪ್ರಾರ್ಥನೆಗೆ ಅವಕಾಶ ನೀಡಲಿದ್ದು, ಅಂತಿಮವಾಗಿ ಯಾವ ಹಂತಕ್ಕೆ ಹೋಗುತ್ತೆ ಈ ವಿವಾದ ಅನ್ನೋದು ಕಾದು ನೋಡಬೇಕಿದೆ.
ಭರ್ಜರಿ ವ್ಯಾಪಾರ
ಜುಲೈ 10ಕ್ಕೆ ಬಕ್ರೀದ್ ಹಬ್ಬ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಕುರಿ, ಮೇಕೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಚಾಮರಾಜಪೇಟೆ ಪೇಟೆ, ಫ್ರೇಜರ್ ಟೌನ್, ಶಿವಾಜಿನಗರ, HBR ಲೇಔಟ್ ಭಾಗದಲ್ಲಿ ಕುರಿ ವ್ಯಾಪಾರ ಜೋರಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ವ್ಯಾಪಾರ ಇಳಿಮುಖವಾಗಿತ್ತು. ಈ ಬಾರಿ ಯಾವುದೇ ಕೊರೊನಾ ಕಠಿಣ ನಿಯಮಗಳಿಲ್ಲದ ಕಾರಣ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೊರೊನಾ ಹೊಡೆತದಿಂದ ಎರಡು ವರ್ಷ ವ್ಯಾಪಾರ ಇರಲಿಲ್ಲ. ಈ ವರ್ಷ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಿಂದ ಹಲವು ತಳಿಗಳ ಕುರಿಗಳು ನಗರಕ್ಕೆ ಮಾರಾಟಕ್ಕೆ ಆಗಮಿಸಿವೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ್ ನಿಂದಲೂ ಹಲವು ತಳಿಗಳ ಕುರಿಗಳು ಬಂದಿದ್ದು, ಒಂದರ ಬೆಲೆ 17 ಸಾವಿರ ರೂ.ಗಳಿಂದ 80 ಸಾವಿರ ರೂ.ಗಳಷ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ