ಬೆಂಗಳೂರು (ಡಿ. 2): ಇನ್ನೇನು ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಕೊರೋನಾ ಕರಿಛಾಯೆಯ ನಡುವೆಯೇ ಈ ಸಂಭ್ರಮಕ್ಕೆ ಜನರು ಸಜ್ಜುಗೊಳ್ಳುತ್ತಿದ್ದಾರೆ. ಅದರಲ್ಲಿಯೂ ಯುವಜನತೆಗೆ ಹೊಸ ಆಚರಣೆಗೆ ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಅವಕಾಶ ಸಿಗಲಿದೆಯಾ ಎಂದು ಕಾದು ಕುಳಿತಿದ್ದಾರೆ. ಕೊರೋನಾ ಹಿನ್ನಲೆ ಜನರು ಸಾಮೂಹಿಕವಾಗಿ ಹೊಸ ವರ್ಷದ ಸಂಭ್ರಮದ ಆಚರಣೆ ನಡೆಸಿದರೆ, ಅಪಾಯ ಕಟ್ಟಿಟ್ಟ ಬುತ್ತಿಯಾಗಿರುವ ಹಿನ್ನಲೆ ಈ ವರ್ಷ ಈ ಆಚರಣೆಗೆ ಬ್ರೇಕ್ ನೀಡುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹೊಸ ವರ್ಷ ಸಂಭ್ರಮಾಚರಣೆ ಕುರಿತು ಕಳೆದ ವಾರ ವಿಧಾನಸೌಧದಲ್ಲಿ ಕಂದಾಯ ಸಚಿವರು, ಗೃಹ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಹೊಸ ವರ್ಷ ಆಚರಣೆಗೆ ಅವಕಾಶ ಬೇಡ ಎಂಬ ನಿಲುವನ್ನು ಬಿಬಿಎಂಪಿ ಆಯುಕ್ತರು ತಿಳಿಸಿದ್ದು, ಈ ಕುರಿತು ಮನವಿ ಸಲ್ಲಿಸಿದ್ದಾರೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಕೊರೋನಾ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗಾಗಲೇ ದಸರಾ, ದೀಪಾವಳಿ ಹಬ್ಬದಲ್ಲಿ ಹೆಚ್ಚು ಜನ ಸೇರಲು ಬಿಡದೆ ಆಚರಣೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಕೊರೋನಾ ಪ್ರಕರಣಗಳ ನಿಯಂತ್ರಣ ಕಾಪಾಡಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಹೊಸ ವರ್ಷಾಚರಣೆಗೆ ಜನರಿಗೆ ಅವಕಾಶ ಕಲ್ಪಿಸಿದರೆ ಪರಿಸ್ಥಿತಿ ಕಷ್ಟವಾಗಲಿದೆ ಎಂದು ಅಭಿಪ್ರಾಯ ನೀಡಲಾಗಿದೆ. ಜೊತೆಗೆ ಪಬ್ , ಬಾರ್ ಗಳಲ್ಲಿ ನ್ಯೂ ಇಯರ್ ಆಚರಣೆ ಮಾಡದಂತೆ ಮನವಿ ಮಾಡಲಾಗಿದೆ. ಆದರೆ, ಈ ಬಗ್ಗೆ ಅಂತಿಮವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಆಯುಕ್ತರಾದ ಮಂಜುನಾಥ್ ತಿಳಿಸಿದ್ದಾರೆ.
ಇದನ್ನು ಓದಿ: ಲೋಕಸಭಾ ಉಪಚುನಾವಣೆಯಲ್ಲಿ ನನ್ನ ಹೆಸರು ತೇಲಿಬಿಟ್ಟವರ ಹುಡುಕುತ್ತಿದ್ದೇನೆ; ಜಗದೀಶ್ ಶೆಟ್ಟರ್
ಹೊಸ ವರ್ಷಾಚರಣೆ ವೇಳೆ ಈಗ ಯಾವ ರೀತಿ ಜನ ರೆಸ್ಟೋರೆಂಟ್ ಹಾಗೂ ಬಾರ್ ಗಳಿಗೆ ಹೋಗುತ್ತಿದ್ದಾರೋ ಹಾಗೇ ಹೋಗಲು ಏನು ತೊಂದರೆ ಇಲ್ಲ. ಆದರೆ ನ್ಯೂ ಇಯರ್ ಗೆ ವಿಶೇಷ ಆಚರಣೆ ಮಾಡುವಂತಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಅಂದು ಹೋಟೆಲ್ ಬಾರ್ ಗಳು ಕಾರ್ಯನಿರ್ವಹಿಸಬಹುದು. ಆದರೆ, ಕ್ಲಬ್ ಗಳಲ್ಲಿ ನ್ಯೂ ಇಯರ್ ಗೆ ವಿಶೇಷ ಆಚರಣೆ ಮಾಡದಂತೆ ಮನವಿ ಮಾಡಲಾಗಿದೆ. ಊಟ, ತಿಂಡಿಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದರು.
ಇನ್ನು ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ಗಳಲ್ಲಿ ನ್ಯೂಯರ್ಗೆ ಅವಕಾಶ ನೀಡಿದರೆ, ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲಿದೆ. ಈ ಹಿನ್ನಲೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ಕಾರಣದಿಂದ ಈ ಆಚರಣೆಗೆ ಅವಕಾಶ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ