ಧಾರವಾಡ: ರಾಜಕಾರಣ ಸಂಸತ್ತಿನ ಹೊರಗಡೆ ಇರಬೇಕೇ ವಿನಃ ಒಳಗಡೆಯಲ್ಲ. ಆದರೆ, ವಿಧಾನ ಪರಿಷತ್ತಿನ ಸಭಾಪತಿ ಅವಿಶ್ವಾಸ ಮಂಡನೆ ವಿಷಯದಲ್ಲಿ ಕಾಂಗ್ರೆಸ್ ಸದನದ ಒಳಗೂ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕಿಡಿಕಾರಿದರು. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಅವಿಶ್ವಾಸ ಗೊತ್ತುವಳಿ ವಿಚಾರಕ್ಕೆ ಉತ್ತರಿಸುತ್ತಾ, ವಿಧಾನ ಪರಿಷತ್ತಿನ 12 ಜನ ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ. ಹೀಗಾಗಿ ಸಭಾಪತಿ ರಾಜೀನಾಮೆ ಕೊಡಲೇಬೇಕು ಎಂದು ಒತ್ತಾಯಿಸಿದರು.
ಅವರು ಅವಿಶ್ವಾಸ ಮಂಡಿಸಲಿ. ನಾವು 14 ಜನ ವಿಧಾನ ಪರಿಷತ್ ಸದಸ್ಯರಿದ್ದೇವೆ. ಸಭೆ ನಡೆಸಿ ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಯಾವುದೇ ಒತ್ತಾಯ ಮಾಡಲ್ಲ. ಪಟ್ಟು ಹಿಡಿಯುವುದಿಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದರು.
ಸದನದಲ್ಲಿ ಸಭಾಪತಿಗಳ ಗೌರವ ಕಡಿಮೆ ಆಗಬಾರದು. ಆದರೆ, ಅಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯನವರು ಜೆಡಿಎಸ್ ಅನ್ನು ಪರೀಕ್ಷೆ ಮಾಡಲು ಹೊರಟಿದ್ದಾರೆ. ಅದಕ್ಕಾಗಿಯೇ ಎಲ್ಲವೂ ಸದನದಲ್ಲಿ ಆಗಲೆಂಬ ಅಪಸ್ವರ ಎತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಶೆಟ್ಟಿಹಳ್ಳಿ ಗ್ರಾ.ಪಂ. ಚುನಾವಣೆ ಕೈ ಬಿಟ್ಟ ಸರ್ಕಾರ: ಸಾರ್ವಜನಿಕರು ಸಂತಸ
ಸಿದ್ದರಾಮಯ್ಯಗೆ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಆಗಿರುವುದನ್ನು ಜನರಿಗೆ ತೋರಿಸಬೇಕಿದೆ ಅಂತೆ. ಆದರೆ, ಅದಕ್ಕೂ ಮೊದಲು ಕಾಂಗ್ರೆಸ್ನವರೇ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುವುದಾಗಿ ಮುಂದೆ ಬಂದರು. ಆದರೆ, ಅವರೇ ದೋಸ್ತಿ ಸರ್ಕಾರ ನಡೆಯಲು ಬಿಡಲಿಲ್ಲ ಎಂದು ಆಪಾದಿಸಿದರು.
ಇದಕ್ಕೂ ಪೂರ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿಗೆ ದೂರವಾಣಿ ಕರೆ ಮಾಡಿ 8 ಲೋಕಸಭಾ ಕ್ಷೇತ್ರಗಳ ಜತೆಗೆ ಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ಗೆ ಗೌರವ ಕೊಡುವ ಹಿನ್ನೆಲೆಯಲ್ಲಿ ಎಚ್ಡಿಕೆ ಮೋದಿ ಅವರ ಆಫರ್ ಒಪ್ಪಿರಲಿಲ್ಲ ಎಂದು ಜೆಡಿಎಸ್ ನಾಯಕರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Bharath Bandh: ಸೆಕ್ಷನ್ 144 ನಡುವೆಯೂ ವಿಧಾನಸೌಧದ ಬಳಿ ಕಪ್ಪು ಬಾವುಟ ಹಿಡಿದು ಕಾಂಗ್ರೆಸ್ ನಾಯಕರ ಪ್ರತಿಭಟನೆ
ರಾಜ್ಯ ರಾಜಕಾರಣ ಬಗ್ಗೆ ನಾಲ್ಕು ದಿನ ಕಾದುನೋಡಿ. ನಮ್ಮ ನಾಯಕರ ಕೆಲವು ನಿರ್ಧಾರಗಳು ದೇವರಿಗೆ ಮತ್ತು ಅವರಿಗೆ ಮಾತ್ರ ಗೊತ್ತಿರುತ್ತವೆ. ಅವರ ಹತ್ತಿರ ಎಲ್ಲ ಮಾಹಿತಿ ಇರುತ್ತವೆ. ಅವರೇನೇ ಹೇಳಿದರೂ, ವಿಚಾರ ಮಾಡಿಯೇ ಹೇಳುತ್ತಾರೆ. ಜನವರಿಯಲ್ಲಿ ಬದಲಾವಣೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದು ಸತ್ಯ. ನಾಲ್ಕ ದಿನಗಳ ಬಳಿಕ ಎಲ್ಲವು ಗೊತ್ತಾಗಲಿದೆ. ನಾವು ಎಂದಿಗೂ ಅನುಕೂಲ ಸಿಂಧು ರಾಜಕಾರಣ ಮಾಡಿಲ್ಲ. ಕೆಲವು ತಪ್ಪು ನಡೆದಿದೆ. ಮುಂದೆ ತಪ್ಪು ಸರಿಪಡಿಸಿಕೊಂಡು ಮುನ್ನಡೆಯಲಿದ್ದೇವೆ ಎಂದರು.
ಖಾಸಗಿ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ನಿತ್ಯವೂ ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ಶಿಕ್ಷಕರು ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದಾರೆ. ಡಿ. 15 ರವರೆಗೂ ಸರ್ಕಾರಕ್ಕೆ ಗಡವು ನೀಡಿದೆ. ಶಿಕ್ಷಣ ಸಚಿವರು ದೂರವಾಣಿಯಲ್ಲಿ ಸಂಪರ್ಕಿಸಿದ್ದು, ಸಭೆ ಕರೆಯುವುದಾಗಿ, ಸದನದಲ್ಲಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಿದಾಗಲೇ ಸತ್ಯಾಗ್ರಹ ಹಿಂಪಡೆಯಲಿದೆ ಎಂದು ವಿ.ಪ. ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ವರದಿ: ಮಂಜುನಾಥ ಯಡಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ