ವಿಜಯಪುರ: ಪಂಚಮಸಾಲಿ ಮೀಸಲಾತಿ (Panchamasali Reservation) ಕುರಿತಂತೆ ರಾಜ್ಯ ಬಿಜೆಪಿ ಸರ್ಕಾರದ (BJP Govt) ವಿರುದ್ಧವೇ ತಿರುಗಿ ಬಿದ್ದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತ್ನಾಳ್ (Basangouda Patil Yatnal) ಟೀಕೆಗಳಿಗೆ ತಿರುಗೇಟು ನೀಡಿರುವ ಸಚಿವ ಮುರುಗೇಶ್ ನಿರಾಣಿ (Murugesh Nirani), ಎಲುಬಿಲ್ಲದ ನಾಲಿಗೆ. ಮೀಸಲಾತಿ ಹೋರಾಟದಲ್ಲಿ ರಾಜಕೀಯ ಇದೆ. ಸರ್ಕಾರವನ್ನೇ ಟೀಕೆ ಮಾಡುವವರು ಪಕ್ಷದಲ್ಲಿ ಏಕೆ ಇರ್ಬೇಕು ಎಂದು ಪ್ರಶ್ನೆ ಮಾಡಿದರು. ಈ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಯತ್ನಾಳ್, ನನ್ನ ಮೇಲೆ ಮಾಡಿರುವ ಆರೋಪ ಬಗ್ಗೆ ತನಿಖೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದ್ದೇನೆ. ಸಿಬಿಐಗೆ ಕೊಟ್ಟು ತನಿಖೆ ಮಾಡಲಿ ಬಿಡಿ ಎಂದು ಸವಾಲು ಎಸೆದರು. ಅಲ್ಲದೇ ಸದ್ಯ ಮೈಸೂರು ಪೊಲೀಸರು (Mysuru Police) ಬಂಧಿಸಿರುವ ಸ್ಯಾಂಟ್ರೋ ರವಿಗೂ ಏನು ಆಗೋದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.
ಸ್ಯಾಂಟ್ರೋ ರವಿ ಕೇಸ್ ಏನು ಆಗಲ್ಲ
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ನೋಡ್ತಾ ಇರಿ ಸ್ಯಾಂಟ್ರೋ ರವಿ ಕೇಸ್ ಏನು ಆಗಲ್ಲ. ಒಂದು ವಾರ ಮಾಧ್ಯಮಗಳು ಸುದ್ದಿಯನ್ನು ಪ್ರವಾಸ ಮಾಡುತ್ತವೆ. ಮುಂದಿನ ವಾರ ಮತ್ತೊಂದು ಸುದ್ದಿ ಬರುತ್ತೆ ಅದನ್ನ ತೋರಿಸುತ್ತೀರಿ. ಈ ಹಿಂದೆ ಯುವರಾಜ್ನನ್ನು ಬಂಧನ ಮಾಡಿದ್ದರು, ಆ ಪ್ರಕರಣ ಏನಾಯ್ತು?
ಡ್ರಗ್ಸ್ ಕೇಸ್ನಲ್ಲಿ ನಟಿಯರನ್ನು ಬಂಧನ ಮಾಡಿದ್ದರು. ಆದರೆ ಡ್ರಗ್ಸ್ ಕೇಸ್ ಒಂದು ನೆಪ ಮಾತ್ರ, ಸಂಜಾತ ಪುತ್ರನ ವಿಡಿಯೋ ನಟಿಯರ ಫೋನ್ನಿಂದ ಡಿಲೀಟ್ ಮಾಡಿಸಲು ಅಡಿದ ನಾಟಕ ಅಷ್ಟೇ. ಅವರನ್ನು ಪೊಲೀಸರು ಅರೆಸ್ಟ್ ಮಾಡಿದಾಗ ಮೊದಲು ಫೋನ್ ತೆಗೆದುಕೊಂಡು, ಫೋಟೋ ಡಿಲೀಟ್ ಮಾಡುತ್ತಿದ್ದರು ಎಂದು ಆರೋಪಿಸಿದರು.
ತಾಕತ್ತಿದ್ದರೆ ಸಿಬಿಐ ಮೂಲಕ ತನಿಖೆ ಮಾಡಿಸಿ
ಅಲ್ಲದೇ, ಡ್ರೈವರ್ ಒಬ್ಬರ ಸಾವಿನ ಕುರಿತಂತೆ ನಿರಾಣಿ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಈ ಬಗ್ಗೆ ಸಿಬಿಐನಿಂದ ತನಿಖೆ ಮಾಡಬೇಕು, ಸತ್ಯಾಸತ್ಯತೆ ಹೊರಗೆ ಬರಬೇಕು. ಕ್ಯಾಬಿನೇಟ್ ದರ್ಜೆ ಮಂತ್ರಿ ಬೇಜವಾಬ್ದಾರಿಯಿಂದ ಮಾತನಾಡ್ತಿದ್ದಾರೆ. ಆರೋಪ ಮಾಡಿದ ಒಂದು ಗಂಟೆಯಲ್ಲಿ ಸಿಎಂ ಗೆ ಪತ್ರ ಬರೆದಿದ್ದೇನೆ, ಸಂಜೆ ಸಿಎಂ ಜೊತೆಗೆ ಮಾತನಾಡ್ತೇನೆ.
24 ತಾಸಿನಲ್ಲಿ ಸಿಬಿಐ ಕೊಡಿ ತನಿಖೆ ಮಾಡಿ. ಹಿಂದೆ ಒಬ್ಬ ಬಿಜೆಪಿಯ ಸಚಿವ ಅವನ ಕೊಲೆಗೆ ಸುಪಾರಿ ಕೊಟ್ಟಿದ್ದೀನಿ ಎಂದು ಸುಳ್ಳು ಆರೋಪ ಮಾಡಿದ್ದ. ಅಥಣಿ ಠಾಣೆಯಲ್ಲಿ ಯತ್ನಾಳ್ ರಿಂದ ಸುಪಾರಿ ಪಡೆದಿರುವುದಾಗಿ ಒಪ್ಪಿಕೊಳ್ಳುವಂತೆ ಯುವಕರಿಗೆ ಟಾರ್ಚರ್ ಮಾಡಲಾಗಿತ್ತು. ನನ್ನ ಹೆಸರು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ಯುವಕರಿಗೆ ಉಗುರು ಕಿತ್ತು ಹಿಂಸಿಸಿದ್ದರು. ಆ ಪ್ರಕರಣ ಸಿಓಡಿ ತನಿಖೆ ನಡೆದಾಗ ನಾನು ಆರೋಪದಿಂದ ಪಾರಾಗಿದ್ದೆ. ಇದು ಸಹ ಹಾಗೇ.
ಸಿಬಿಐ ಇದೆ. ತಾಕತ್ತಿದ್ದರೆ ಸಿಬಿಐ ಮೂಲಕ ತನಿಖೆ ಮಾಡಿಸಿ. 4 ತಾಸಿನಲ್ಲಿ ತಕ್ಷಣವೇ ಸಿಎಂ ಸಿಬಿಐಗೆ ರೆಫರ್ ಮಾಡಬೇಕು. ಸಿಬಿಐ ಗೆ ಕೊಡದೆ ಹೋದರೆ ಸಚಿವರನ್ನ ಸಂಪುಟದಿಂದ ವಜಾ ಮಾಡಿ ಎಂದು ಸವಾಲು ಹಾಕಿದರು. ಡೈವರ್ ಕುಮಾರ ಯಾರು ಎಂದು ಗೊತ್ತಿಲ್ಲ. ಇದೊಂದು ಬ್ಲಾಕ್ ಮೇಲ್ ಅಷ್ಟೇ ಎಂದು ನಿರಾಣಿ ವಿರುದ್ಧ ಬ್ಲಾಕ್ ಮೇಲ್ ಆರೋಪ ಮಾಡಿದರು. ಬ್ಲಾಕ್ ಮೇಲ್ ಮಾಡಿಕೊಂಡು ಬಂದ ಕೆಲ ಜನರಿದ್ದಾರೆ. ರಾಜಕಾರಣದಲ್ಲಿ ಸುತ್ತಮುತ್ತಲು ಬ್ಲಾಕ್ಮೇಲರ್ಸ್ ಇದ್ದಾರೆ ಎಂದರು.
ಇದನ್ನೂ ಓದಿ: Panchamasali Reservation: ಬಿಜೆಪಿಯಲ್ಲಿ ಯತ್ನಾಳ್ Vs ನಿರಾಣಿ; ಪಿಂಪ್ ಸಚಿವ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ನಿರಾಣಿ ಕಣ್ಣೀರು
ಶೀಘ್ರವೇ ಹೈಕಮಾಂಡ್ ಭೇಟಿಗೆ ಸಮಯ ಕೊಟ್ಟಿದ್ದಾರೆ. ನಾಳೆ 21ಕ್ಕೆ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಬರ್ತಿದ್ದಾರೆ. ಅವರ ಜೊತೆಗೂ ಚರ್ಚೆ ಮಾಡ್ತೀವಿ. ಇನ್ನು ಕೇಂದ್ರದ ಅನೇಕ ವರಿಷ್ಠರು ಪಂಚಮಸಾಲಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ದೊಡ್ಡ ಸಮುದಾಯಕ್ಕೆ ನ್ಯಾಯ ಕೊಡದೆ ಇದ್ರೆ ಪರಿಣಾಮ ಏನಾಗುತ್ತೆ ಎಂದು ಹೈಕಮಾಂಡ್ ಗೆ ಮನವರಿಕೆಯಾಗಿದೆ. ಈ ಲೆಕ್ಕಾಚಾರವನ್ನ ಹೈಕಮಾಂಡ್ ಮಾಡ್ತಿದೆ. ಇಲ್ಲಿನ ರೌಡಿ ಗ್ಯಾಂಗ್ ಗೆ ಯತ್ನಾಳ ತುಳಿಯೋದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಆದರೆ ಯತ್ನಾಳ್ ತುಳಿಯೋಕೆ ಆಗಲ್ಲ, ಬಿಜೆಪಿ ಸಂಘಟನೆಯಲ್ಲಿ ಯತ್ನಾಳ್ ಶಕ್ತಿ ಅಡಗಿದೆ ಎಂದರು.
ಹರಕೆ ತೀರಿಸಿದ ಅಲೋಕ್ ಕುಮಾರ್
ಸ್ಯಾಂಟ್ರೋ ರವಿ ಬಂಧನದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹರಕೆ ತೀರಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶಕ್ತಿ ದೇವತೆ ನಿಮಿಷಾಂಭ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಅಲೋಕ್ ಕುಮಾರ್ 4 ದಿನಗಳ ಹಿಂದೆ ಇದೇ ದೇವಸ್ಥಾನಕ್ಕೆ ಆಗಮಿಸಿ ಹರಕೆ ಹೊತ್ತುಕೊಂಡಿದ್ದರು. ಸ್ಯಾಂಟ್ರೋ ರವಿ ಬಂಧನವಾದ್ರೆ ಮತ್ತೆ ದೇಗುಲಕ್ಕೆ ಆಗಮಿಸುವುದಾಗಿ ಹೇಳಿದ್ರು. ಹರಕೆ ಹೊತ್ತುಕೊಂಡ 26 ಗಂಟೆಗಳಲ್ಲೆ ಸ್ಯಾಂಟ್ರೋ ರವಿ ಬಂಧನವಾಗಿದ್ದು, ಅಲೋಕ್ ಕುಮಾರ್ ಹರಕೆ ತೀರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ