ವಿಜಯಪುರ: ನಾನು ಹಿಂದೂ (Hindu), ಆದರೆ, ಹಿಂಸೆ ಇರುವ ಹಿಂದುತ್ವಕ್ಕೆ (Hindutva) ನನ್ನ ವಿರೋಧವಿದೆ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಾಗ್ದಾಳಿ ನಡೆಸಿದ್ದಾರೆ. ಶಿವಾಜಿ ಜಯಂತಿ (Shivaji Jayanti) ಅಂಗವಾಗಿ ವಿಜಯಪುರದಲ್ಲಿ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ತಮ್ಮ ಮಾತಿನುದ್ದಕ್ಕೂ ಮುಸ್ಲಿಂ ರಾಜರುಗಳ ವಿರುದ್ದ ಕಿಡಿಕಾರಿ ಶಿವಾಜಿ ಮಹಾರಾಜರ ಗುಣಗಾನ ಮಾಡಿದರು. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಇಂದಿಗೆ ನಾವೆಲ್ಲರೂ ಮುಸ್ಲಿಂ ಆಗಿರುತ್ತಿದ್ದೇವು. ಹಿಂದೂ ಧರ್ಮದ ಉಳಿಯಲು ಶಿವಾಜಿ ಮಹಾರಾಜರು ಕಾರಣಿಕರ್ತರಾಗಿದ್ದಾರೆ. ಮುಸ್ಲಿಂ (Muslim) ದಾಳಿಕೋರರ ನಡುವೆಯೂ ನಾವು ಎಲ್ಲರೂ ಹಿಂದೂಗಳಾಗಿ ಉಳಿಸಿದ್ದೇವೆ. ಇದಕ್ಕೆ ಕಾರಣ ಶಿವಾಜಿ ಮಹಾರಾಜರು ಎಂದ ಯತ್ನಾಳ್, ರಾಜ್ಯದಲ್ಲಿ ಕೆಲವರು ಟಿಪ್ಪು ಹೆಸರು ಹೇಳಿಕೊಂಡ ರಾಜಕೀಯ ಮಾಡುತ್ತಿದ್ದಾರೆ. ನಾನು ಹಿಂದೂ ಆದರೆ ಹಿಂದುತ್ವ ಒಪ್ಪಲ್ಲ ಅಂತಾರೆ ಎನ್ನೋ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಇತರೆ ಕೈ ನಾಯಕರ ವಿರುದ್ಧ ಗುಡುಗಿದರು.
ಶಿವಾಜಿ ಮಹಾರಾಜರು ಸಂಕಲ್ಪ ಈಡೇರಿಸಬೇಕಿದೆ, ದೇಶಕ್ಕೆ ಒಬ್ಬ ಒಳ್ಳೆಯ ಪ್ರಧಾನಿ ಸಿಕ್ಕಿದ್ದಾರೆ. ನಾನು ಹಿಂದೂ, ನಾನು ಅಪ್ಪನಿಗೆ ಹುಟ್ಟಿದ್ದ ಖರೇ ಐತಿ, ಆದರೆ ಗ್ಯಾರಂಟಿ ಇಲ್ಲ ಅಂತ ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನಾನು ಕುಂಕುಮ ಹಚ್ಚೊಲ್ಲ, ನಮಾಜ್ ಟೋಪಿ ಹಾಕಲು ರೆಡಿ. ರೇಶ್ಮೆ ಪೇಟ ಧರಿಸಲ್ಲ, ಆದರೆ ಸಾಬರ ಧರಿಸು ಹಾಕುತ್ತೀನಿ ಎನ್ನುವಂತಿದೆ. ಟಿಪ್ಪು ಮೆರವಣಿಗೆ ಮಾಡುವ ನಾಲಾಯಕ್ ಹಿಂದೂಗಳು ನಮ್ಮ ದೇಶದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಸುಲ್ತಾನ್ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ವಾಗ್ದಾಳಿ ನಡೆಸಿದರು. ಲಕ್ಷಾಂತರ ಜನ ಕೊಡುಗು ಜನರನ್ನು ಕೊಲೆ ಮಾಡಿದವ ಟಿಪ್ಪು ಸುಲ್ತಾನ್. ಮೊಘಲ ಸಾಮಾಜ್ರ್ಯ ಅಂತ್ಯವಾಗಿದ್ದು ಶಿವಾಜಿ ಮಹಾರಾಜರ ಹೋರಾಟದಿಂದ ಎಂದರು.
ವಿಜಯಪುರ ಇಂದು ಹಿಂದೂ ಪುರವಾಗಿ ಬದಲಾಗುತ್ತಿದೆ, ಹಿಂದೂಗಳು ಭಗವಾ ಧ್ವಜಕ್ಕೆ ಮತ ಹಾಕಬೇಕು. ಯಾರೇ ಏನೇ ಆಮಿಷ ಒಡ್ಡಿದ್ದರು ಭಗವಾ ಧ್ವಜ ನೋಡಿ ಮತಹಾಕಬೇಕು. ಟಿಪ್ಪು ಬೆಂಬಲಿಗರಿಗೆ ಮತ ಹಾಕಬೇಡಿ, ಶಿವಾಜಿ ಮಹಾರಾಜರ ಬೆಂಬಲಿಗರಿಗೆ ಮತ ಹಾಕಿ ಎಂದು ಮುಂಬವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕೆಂದು ಮನವಿ ಮಾಡಿದರು.
ವಿಜಯೇಂದ್ರ, ನಿರಾಣಿ ವಿರುದ್ಧ ಯತ್ನಾಳ್ ಗುಡುಗು
ಇದೇ ವೇಳೆ ಕೆಲ ಬಿಜೆಪಿ ನಾಯಕರ ವಿರುದ್ಧವೂ ಹೆಸರು ಪ್ರಸ್ತಾಪ ಮಾಡದೆ ಯತ್ನಾಲ್ ವಾಗ್ದಾಳಿ ನಡೆಸಿದರು. ವಿಜಯಪುದಲ್ಲಿ ಬಿ.ವೈ ವಿಜಯೇಂದ್ರ, ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಪರೋಕ್ಷವಾಗಿ ಗುಡುಗಿದ್ದಾರೆ. ನನ್ನ ಕೆಡವಲು ವಿಜಯಪುರಕ್ಕೆ ರೊಕ್ಕ ಬಂದಿದೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಯತ್ನಾಳ್ ಗರಂ ಆಗಿದ್ದಾರೆ.
ಬಸನಗೌಡನನ್ನು ಕೆಡವಲು 50 ಕೋಟಿ ರೂಪಾಯಿ ಖರ್ಚು ಮಾಡ್ತಾರಂತೆ. ನನ್ನ ಸೋಲಿಸಲು ಪಕ್ಕದ ಜಿಲ್ಲೆಯವ ಬರುತ್ತಿದ್ದಾನೆ. ಜೊತೆಗೆ ಬೆಂಗಳೂರಲ್ಲಿ ಕುಳಿತವ ಒಬ್ಬ ರೆಡಿಯಾಗಿದ್ದಾನೆಂದು ಯತ್ನಾಳ್ ಆರೋಪಿಸಿದ್ದಾರೆ. ಅಲ್ಲದೆ, 50 ಕೋಟಿ ರೂಪಾಯಿ ಬರಲಿ, ಎಲ್ಲರೂ ಹಣ ತಗೊಂಡು ಡಾಬಾಗಳಲ್ಲಿ ಫುಲ್ ಊಟ ಮಾಡಿ, ಹೊಸ ಹೊಸ ಬಟ್ಟೆ ತಗೊಳ್ಳಿ. 15 ದಿನ ಮಜಾ ಮಾಡಿ, ವೋಟ್ ಮಾತ್ರ ನನಗೆ ಹಾಕಿ ಎಂದು ಯತ್ನಾಳ್ ಹೇಳಿದ್ದರು.
ಇದನ್ನೂ ಓದಿ: RBI Restrictions: ಗ್ರಾಹಕರಿಗೆ ಬಿಗ್ ಶಾಕ್! ಕರ್ನಾಟಕದ ಈ ಬ್ಯಾಂಕ್ ಇಂದಿನಿಂದ ಬಂದ್
ಇನ್ನು, ಶಿವಾಜಿ ಜಯಂತಿ ಅಂಗವಾಗಿ ವಿಜಯಪುರ ನಗರ ಸಂಪೂರ್ಣ ಕೇಸರಿಮಯವಾಗಿತ್ತು. ನಗರದ ರಾಮ ಮಂದಿರ, ಸಿದ್ದೇಶ್ವರ ದೇವಸ್ಥಾನದ ರಸ್ತೆ ಗಾಂಧಿಚೌಕ್ ಶಿವಾಜಿ ಚೌಕ್ ಸೇರಿದಂತೆ ಇತರೆ ಪ್ರಮುಖ ರಸ್ತೆಗಳೆಲ್ಲಾ ಕೇಸರಿ ಧ್ವಜ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಧ್ವಜಗಳು ಹಾರಾಡುತ್ತಿದ್ದವು. ಅಲ್ಲದೆ, ನಗರದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಶಿವಾಜಿ ಕಿರೀಟದ ಮಾದರಿ ಪೇಟ ಧರಿಸಿದ್ದ ಯತ್ನಾಳ್
ನಗರದ ರಾಮ ಮಂದಿರದಿಂದ ಆರಂಭವಾದ ಮೆರವಣಿಗೆ ಸಿದ್ದೇಶ್ವರ ದೇವಸ್ಥಾನ ಗಾಂಧಿಚೌಕ್ ಮಾರ್ಗವಾಗಿ ಹಾಯ್ದು ಶಿವಾಜಿ ಚೌಕ್ಗೆ ಆಗಮಿಸಿತ್ತು. ಶಿವಾಜಿ ಮಹಾರಾಜರು ಧರಿಸುತ್ತಿದ್ದ ಕಿರೀಟದ ಮಾದರಿಯನ್ನು ಹೋಲುವ ಪೇಟವನ್ನು ಸುತ್ತಿಕೊಂಡಿದ್ದ ಯತ್ನಾಳ್ ಹಾಗೂ ಇತರ ನಾಯಕರು ತೆರೆದ ವಾಹನದಲ್ಲಿ ಮೆರವಣಿಗೆಯುದ್ದಕ್ಕೂ ಹಾಜರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ